ETV Bharat / sports

ರಾಜಸ್ಥಾನದ ಮರಳಿನಲ್ಲೂ ಬೂಮ್ರಾರಂತೆ ಬೌಲಿಂಗ್​ ಮಾಡುವ ಬಾಲಕ: ವಿಡಿಯೋ ನೋಡಿ - Rajasthan boy bowling

author img

By ETV Bharat Karnataka Team

Published : Apr 29, 2024, 11:16 AM IST

ರಾಜಸ್ಥಾನದ ಮರಳಿನಲ್ಲೂ ಬೂಮ್ರಾರಂತೆ ಬೌಲಿಂಗ್​ ಮಾಡುವ ಬಾಲಕ
ರಾಜಸ್ಥಾನದ ಮರಳಿನಲ್ಲೂ ಬೂಮ್ರಾರಂತೆ ಬೌಲಿಂಗ್​ ಮಾಡುವ ಬಾಲಕ

ಬಾಲಕನೊಬ್ಬ ಅದ್ಭುತವಾಗಿ ಬೌಲಿಂಗ್​ ಮಾಡುತ್ತಿರುವ ವಿಡಿಯೋವೊಂದು ರಾಜಸ್ಥಾನದ ಬಾರ್ಮರ್​ ಜಿಲ್ಲೆಯಿಂದ ಹೊರಬಿದ್ದಿದೆ.

ಬಾರ್ಮರ್ (ರಾಜಸ್ಥಾನ): ದೇಶದಲ್ಲಿ ಐಪಿಎಲ್​ ಹವಾ ಜೋರಾಗಿಯೇ ಸದ್ದು ಮಾಡುತ್ತಿದೆ. ಯುವ ಜನತೆಗೆ ಕ್ರಿಕೆಟ್​ ಮೇಲಿನ ಹುಚ್ಚು ಹೇಳತೀರದು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕ್ರಿಕೆಟ್​ ಮೇಲೆ ಅತಿಯಾದ ಪ್ರೀತಿ ಬೆಳೆಸಿಕೊಂಡಿದ್ದಾರೆ. ಊರು, ಗಲ್ಲಿಗಳಲ್ಲಿ ಕ್ರಿಕೆಟ್​ ಪಂಟರುಗಳು ಹುಟ್ಟಿಕೊಂಡಿದ್ದಾರೆ. ಅಂಥದ್ದೇ ಒಂದು ಪ್ರತಿಭೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

ರಾಜಸ್ಥಾನದ ಬಾರ್ಮರ್​ ಜಿಲ್ಲೆಯ ಬಾಲಕನೊಬ್ಬ ಅದ್ಭುತವಾಗಿ ಬೌಲಿಂಗ್​ ಮಾಡುತ್ತಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅರೆ.. ಅದರಲ್ಲೇನು ವಿಶೇಷ ಅಂತೀರಾ. ರಾಜಸ್ಥಾನ ಹೇಳಿಕೇಳಿ ಮರುಭೂಮಿ ಪ್ರದೇಶ. ಇಲ್ಲಿ ಎಲ್ಲದರಲ್ಲೂ ಬರ. ಬರೀ ಮರಳಿನಿಂದಲೇ ಕೂಡಿರುವ ಭೂಮಿಯಲ್ಲಿ ಕ್ರಿಕೆಟ್​ ಆಡುವುದು ಕಷ್ಟಸಾಧ್ಯ. ಇಂತಹ ದುರ್ಗಮ ಪರಿಸ್ಥಿತಿಯಲ್ಲೂ ಈ ಯುವಕ ವೇಗದ ಬೌಲಿಂಗ್​ ಮಾಡಿ ಮರಳಿನಲ್ಲೂ ಚೆಂಡನ್ನು ಚಿಮ್ಮಿಸಿ ವಿಕೆಟ್ ಎಗರಿಸುತ್ತಿದ್ದಾನೆ.

ಮರಳಿನ ಪಿಚ್​ನಲ್ಲಿ ಚೆಂಡು ವೇಗವಾಗಿ ಚಲಿಸುವುದೇ ಕಷ್ಟ. ಅಂಥದ್ದರಲ್ಲಿ ಈ ಬಾಲಕ ವಿಕೆಟ್​ಗಳನ್ನು ಪಟಪಟನೆ ಉರುಳಿಸುತ್ತಿದ್ದಾನೆ. ಇದರ 20 ಸೆಕೆಂಡುಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತಿದೆ. ಇದು ಈಗಾಗಲೇ ಸಾವಿರಾರು ವೀಕ್ಷಣೆಗಳು ಕಂಡಿದೆ. ಹಲವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲೇನಿದೆ: ಚಿಕ್ಕ ವಿಡಿಯೋದಲ್ಲಿ ಬಾಲಕ ಭಾರತ ಕ್ರಿಕೆಟ್​ ತಂಡದ ಟ್ರಂಪ್​ಕಾರ್ಡ್​ ಬೌಲರ್​ ಜಸ್ಪ್ರೀತ್​ ಬೂಮ್ರಾರ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದು, ವಿಕೆಟ್​ಗಳಿಗೆ ಗುರಿಯಿಟ್ಟು ಎಸೆಯುತ್ತಿದ್ದಾರೆ. ಹಾಕಿದ ಪ್ರತಿ ಚೆಂಡು ವಿಕೆಟ್​ಗೆ ಅಪ್ಪಳಿಸುತ್ತಿದೆ. ಮರಳಿನ ಪಿಚ್​ನಲ್ಲಿ ತರಬೇತಿ ಪಡೆದ ಬೌಲರ್​ನಂತೆ ಎಸೆತಗಳನ್ನು ಹಾಕುತ್ತಿದ್ದಾನೆ. ನಿಖರವಾದ ಲೈನ್ ಮತ್ತು ಲೆಂಗ್ತ್‌ನೊಂದಿಗೆ ಈತ ಬೌಲಿಂಗ್ ಮಾಡುತ್ತಿದ್ದಾನೆ.

ಈ ವಿಡಿಯೋವನ್ನು ರಾಜ್ಯದ ಮಾಜಿ ಸಚಿವ ಅಮೀನ್ ಖಾನ್ ಹಂಚಿಕೊಂಡಿದ್ದು, "ಈ ಮಗು ಭವಿಷ್ಯದ ಶ್ರೇಷ್ಠ ಆಟಗಾರನಾಗುತ್ತಾನೆ. ದೇಶ, ರಾಜ್ಯಕ್ಕೆ ಕೀರ್ತಿ ತರುತ್ತಾನೆ. ಅಬ್ಬಾಸ್, ನಿನಗೆ ನನ್ನ ಶುಭ ಹಾರೈಕೆಗಳು. ನಿನ್ನ ಶ್ರಮವನ್ನು ಮುಂದುವರಿಸು" ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದೇ ರೀತಿ ಕಾಂಗ್ರೆಸ್ ಶಾಸಕ ಹರೀಶ್ ಚೌಧರಿ ಅವರೂ ವಿಡಿಯೋ ಹಂಚಿಕೊಂಡಿದ್ದು, "ಅಬ್ಬಾಸ್ ಅವರ ಪ್ರತಿಭೆಯ ವೀಡಿಯೊವನ್ನು ನೋಡಿ ನನಗೆ ಸಂತೋಷವಾಗಿದೆ. ಅಬ್ಬಾಸ್​ರ ಉತ್ತಮ ಭವಿಷ್ಯಕ್ಕಾಗಿ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವ ಮೂಲಕ ಈ ಪ್ರತಿಭೆಯನ್ನು ಬೆಳೆಸುವ ಕೆಲಸ ಮಾಡುತ್ತೇವೆ" ಎಂದಿದ್ದಾರೆ.

ಅದಕ್ಕೆ ಹೇಳೋದು ಪ್ರತಿಭೆ ಎಂಬುದು ಯಾರ ಸ್ವತ್ತೂ ಅಲ್ಲ, ಅದಕ್ಕೆ ಬಡತನ, ಸಿರಿತನದ ಹಂಗಿಲ್ಲ. ಈಗಿನ ಸಾಮಾಜಿಕ ಮಾಧ್ಯಮ ಯುಗದಲ್ಲಿ ಎಲ್ಲಿ, ಯಾರು ಬೇಕಾದರೂ ತಮ್ಮಲ್ಲಿನ ಅಂತಃಸತ್ವವನ್ನು ಪ್ರಪಂಚಕ್ಕೆ ತೋರಿಸಬಹುದು.

ಇದನ್ನೂ ಓದಿ: ಚೆಪಾಕ್​ನಲ್ಲಿ ಹೈದರಾಬಾದ್​ಗೆ ಆಲೌಟ್​ ಸೋಲಿನ ಮುಖಭಂಗ: ಗೆದ್ದು ಮೂರನೇ ಸ್ಥಾನಕ್ಕೇರಿದ ಸಿಎಸ್​ಕೆ - CSK vs SRH match

ETV Bharat Logo

Copyright © 2024 Ushodaya Enterprises Pvt. Ltd., All Rights Reserved.