ETV Bharat / bharat

ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿಲ್ಲ: ನಿರ್ಮಲಾ ಸೀತಾರಾಮನ್

author img

By PTI

Published : Feb 5, 2024, 5:39 PM IST

ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರು, ಲೋಕಸಭೆಯಲ್ಲಿ ರಾಜ್ಯಗಳಿಗೆ ನೀಡಲಾಗುವ ಅನುದಾನ ಹಂಚಿಕೆ ಬಗ್ಗೆ ವಿವರಿಸಿದರು.

ನವದೆಹಲಿ: ಕೇಂದ್ರದಿಂದ ರಾಜ್ಯಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಯಾವುದೇ ತಾರತಮ್ಯ ಆಗಿಲ್ಲ. ಹಣಕಾಸು ಆಯೋಗದ ನಿಯಮಾವಳಿಗಳ ಪ್ರಕಾರವೇ ಎಲ್ಲ ರಾಜ್ಯಗಳಿಗೆ ಅನುದಾನ ನೀಡಲಾಗಿದೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ನ್ಯಾಯಯುತವಾಗಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬ ಕರ್ನಾಟಕ ಸರ್ಕಾರದ ಆರೋಪ ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್, ಇಂತಹ ಯಾವುದೇ ಆರೋಪವು ರಾಜಕೀಯ ಪ್ರೇರಿತವಾಗಿದೆ. ಸರ್ಕಾರ ಉತ್ತಮವಾದ ವ್ಯವಸ್ಥೆಯನ್ನು ಹೊಂದಿದೆ. ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮಾತ್ರ ಅನುದಾನ ಹಂಚಿಕೆ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಕೆಲವು ರಾಜ್ಯಗಳು ಕೇಂದ್ರದ ವಿರುದ್ಧ ತಾರತಮ್ಯ ಆರೋಪ ಮಾಡುತ್ತಿವೆ. ಬಿಜೆಪಿ ಪರ ಮತ್ತು ಬಿಜೆಪಿಯೇತರ ರಾಜ್ಯಗಳು ಎಂದು ವಿಂಗಡಿಸಿ ಅನುದಾನವನ್ನು ವಿತರಿಸಲು ಸಾಧ್ಯವಿಲ್ಲ. ಜೊತೆಗೆ, ಯಾರೇ ಕೇಂದ್ರ ಹಣಕಾಸು ಸಚಿವರಾದರೂ ಹಣಕಾಸು ಆಯೋಗದ ಶಿಫಾರಸುಗಳಿಗೆ ಬದ್ಧವಾಗಿರಬೇಕಾಗುತ್ತದೆ. 'ನನಗೆ ಈ ರಾಜ್ಯ ಇಷ್ಟವಿಲ್ಲ, ಅನುದಾನ ನಿಲ್ಲಿಸಿ’ ಎಂದು ಹೇಳುವ ಹಕ್ಕಿಲ್ಲ ಎಂದು ಹೇಳಿದರು.

ಅನುದಾನ ಬೇಕಾ'ಬಿಟ್ಟಿ' ಖರ್ಚು: ಕೇಂದ್ರದಿಂದ ಸಿಗುವ ಅನುದಾನವನ್ನು ಕೆಲ ರಾಜ್ಯಗಳು ಬೇಕಾ'ಬಿಟ್ಟಿ'ಯಾಗಿ ಬಳಕೆ ಮಾಡುತ್ತಿವೆ. ಇದರಿಂದ ಅವುಗಳ ಬಜೆಟ್​ಗೆ ಹೊರೆಯಾಗುತ್ತಿದೆ. ಇದನ್ನು ಸರಿದೂಗಿಸಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿವೆ ಎಂದು ಕರ್ನಾಟಕದ ಆರೋಪಕ್ಕೆ ಹಣಕಾಸು ಸಚಿವರು ತಿರುಗೇಟು ನೀಡಿದರು.

ರಾಜ್ಯಗಳಿಗೆ ಬರಬೇಕಾದ ಹಣವನ್ನು ತಡೆಯಲಾಗುತ್ತದೆ ಎಂದು ಅನ್ನಿಸಿದಲ್ಲಿ ಅದರ ವಿರುದ್ಧ ಹಣಕಾಸು ಆಯೋಗಕ್ಕೆ ದೂರು ನೀಡಿ. ರಾಜ್ಯಗಳ ಅಗತ್ಯತೆ, ಅವಶ್ಯಕತೆಯನ್ನು ಆಧರಿಸಿ ಆಯೋಗ ನಿರ್ಧಾರ ತೆಗೆದುಕೊಳ್ಳುತ್ತದೆ. ಅದನ್ನ ತಡೆಯಲು ನಾನಲ್ಲ, ಯಾರಿದಂಲೂ ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್​​ ಸ್ಪಷ್ಟಪಡಿಸಿದರು.

ಡಿಸಿಎಂಗೆ ವಾಸ್ತವಿಕ ಸಂಗತಿ ವಿವರಿಸಿರುವೆ: ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು, ನನ್ನನ್ನು ಭೇಟಿಯಾದಾಗ ವಾಸ್ತವಿಕ ಸಂಗತಿಯನ್ನು ವಿವರಿಸಿರುವೆ. ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕ ಸೇರಿ ಎಲ್ಲ ರಾಜ್ಯಗಳಿಗೆ ಅನುದಾನ ನೀಡಲಾಗಿದೆ. ಇಷ್ಟಾಗಿಯೂ ರಾಜ್ಯಗಳು ಆರೋಪ ಮಾಡಿದಲ್ಲಿ ಅದು ಶುದ್ಧ ರಾಜಕೀಯ ಪ್ರೇರಿತ ಟೀಕೆಯಷ್ಟೇ ಎಂದರು.

ಜಿಎಸ್​ಟಿ ಪಾಲಿನ ವಿಂಗಡಣೆ ಹೀಗಿರುತ್ತೆ: ರಾಜ್ಯಗಳು ಸಂಗ್ರಹಿಸಿ ಕಳುಹಿಸುತ್ತಿರುವ ಜಿಎಸ್​ಟಿ ಮತ್ತು ಅದರ ಪಾಲಿನ ಬಗ್ಗೆ ವಿವರಿಸಿದ ಸಚಿವೆ ನಿರ್ಮಲಾ ಅವರು, ರಾಜ್ಯಗಳಲ್ಲಿ ನೂರರಷ್ಟು ಜಿಎಸ್​ಟಿ ಸಂಗ್ರಹವಾಗುತ್ತಿದೆ. ಅದೆಲ್ಲವನ್ನೂ ಕ್ರೋಢೀಕರಿಸಿ ಬಳಿಕ ಅದರಲ್ಲಿ ಶೇಕಡಾ 50ರಷ್ಟು ಪಾಲನ್ನು ರಾಜ್ಯಗಳಿಗೆ ನೀಡಲಾಗುತ್ತದೆ.

ಹಾಗೊಂದು ವೇಳೆ ಒಂದು ರಾಜ್ಯಕ್ಕೆ ಶೇ.52 ರಷ್ಟು ಅನುದಾನ ಬೇಕಿದ್ದರೆ, ಬೇರೆ ರಾಜ್ಯಗಳು ಶೇ.50ಕ್ಕಿಂತ ಕಡಿಮೆ ಪಾಲು ಪಡೆಯಲಿವೆ. ಆಗ ಹೊಂದಾಣಿಕೆ ಅಗತ್ಯವಾಗಿರುತ್ತದೆ. ಇದು ಆಗೊಮ್ಮೆ, ಈಗೊಮ್ಮೆ ನಡೆಯಬಹುದು. ಮತ್ತೆ ಹಣ ಸಂಗ್ರಹವಾದಾಗ ಐಜಿಎಸ್​ಟಿ ಅಡಿಯಲ್ಲಿ ಎಲ್ಲಾ ರಾಜ್ಯಗಳಿಗೆ 50-50 ರ ಪ್ರಮಾಣದಲ್ಲಿ ವಿಂಗಡಿಸಲಾಗುತ್ತದೆ. ಕಾಲಾನಂತರದಲ್ಲಿ ಆಯಾ ರಾಜ್ಯಕ್ಕೆ ಹೋಗಬೇಕಿದ್ದ ಹಣವನ್ನು ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

ಕಾಂಗ್ರೆಸ್​ನಿಂದ ಪ್ರತಿಭಟನೆ?: ಕರ್ನಾಟಕ ರಾಜ್ಯಕ್ಕೆ ನ್ಯಾಯಯುತವಾಗಿ ಹಣ ಮಂಜೂರು ಮಾಡುತ್ತಿಲ್ಲ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್​ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ. ರಾಜ್ಯ ಕಾಂಗ್ರೆಸ್​ನ ಎಲ್ಲ ಶಾಸಕರು, ಎಂಎಲ್‌ಸಿಗಳು ಮತ್ತು ಸಂಸದರು ಫೆಬ್ರವರಿ 7 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ತೆರಿಗೆ ಕಟ್ಟುತ್ತಿರುವ ರಾಜ್ಯ ಕರ್ನಾಟಕವಾಗಿದೆ. ಪ್ರತಿ ಬಾರಿಯೂ ರಾಜ್ಯಕ್ಕೆ ಅನುದಾನದಲ್ಲಿ ತಾರತಮ್ಯವಾಗುತ್ತಿದೆ. ಕಳೆದ 5 ವರ್ಷಗಳಿಂದ ಬಿಜೆಪಿ ಸರ್ಕಾರ ಕರ್ನಾಟಕವನ್ನು ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್​ ಸರ್ಕಾರ ಆರೋಪಿಸಿದೆ.

ಇದನ್ನೂ ಓದಿ: ಕೇಂದ್ರದ ಅನುದಾನ ತಾರತಮ್ಯದಿಂದ ರಾಜ್ಯಕ್ಕೆ 1,87,867 ಕೋಟಿ ರೂ. ನಷ್ಟವಾಗಿದೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.