ETV Bharat / sports

'ದೇವರ ಪ್ಲಾನ್ ಬೇಬಿ'​: ಯಶ್​ ದಯಾಳ್ ಅದ್ಭುತ ಬೌಲಿಂಗ್​ಗೆ ರಿಂಕು ಸಿಂಗ್ ಸೆಲ್ಯೂಟ್​ - Rinku Singh Post on Yash Dayal

author img

By ANI

Published : May 19, 2024, 12:05 PM IST

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಯಶ್​ ದಯಾಳ್​ಗೆ ಕೆಕೆಆರ್​ ಬ್ಯಾಟರ್​ ರಿಂಕು ಸಿಂಗ್​ ಸೆಲ್ಯೂಟ್​ ಹೇಳಿದ್ದಾರೆ.

yash dayal
ಯಶ್​ ದಯಾಳ್, ರಿಂಕು ಸಿಂಗ್ (ANI)

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಹಣಾಹಣಿಯಲ್ಲಿ ಅಂತಿಮ ಓವರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನಲ್ಲಿ ಹೀರೋ ಆಗಿ ಹೊರಹೊಮ್ಮಿದ ಯಶ್ ದಯಾಳ್ ಅವರನ್ನು ಕೆಕೆಆರ್ ತಂಡದ​​ ಸ್ಟಾರ್ ಫಿನಿಶರ್ ರಿಂಕು ಸಿಂಗ್ ಶ್ಲಾಘಿಸಿದ್ದಾರೆ. ಕೊನೆಯ ಓವರ್​ನಲ್ಲಿ ತೋರಿದ ಯಶ್​ ದಯಾಳ್ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಫಾಫ್ ಡು ಪ್ಲೆಸಿಸ್ ತಂಡವು ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿದೆ. ಈ ಮೂಲಕ ದಯಾಳ್ ಸುಮಾರು ಒಂದು ವರ್ಷದ ಬಳಿಕ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ.

ಕಳೆದ ವರ್ಷದ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದ ಯಶ್​​ ದಯಾಳ್ ತಮ್ಮ ದುಬಾರಿ ಬೌಲಿಂಗ್​ನಿಂದ ಸುದ್ದಿಯಾಗಿದ್ದರು. ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಕ್ಕೆ ಕೊನೆಯ ಓವರ್​ನಲ್ಲಿ 29 ರನ್​ಗಳ ಅವಶ್ಯಕತೆಯಿತ್ತು. ಆಗ ಯಶ್ ದಯಾಳ್ ಎಸೆದ ಓವರ್​ನಲ್ಲಿ ರಿಂಕು ಸಿಂಗ್​ ಭರ್ಜರಿ ಐದು ಸಿಕ್ಸರ್​​ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಐದು ಸಿಕ್ಸರ್ ಚಚ್ಚಿಸಿಕೊಂಡು ಯಶ್​​ ಟೀಕೆಗೆ ಗುರಿಯಾಗಿದ್ದರು. ಇದೀಗ ಅದೇ ಯಶ್​ ಅವರು, ಭರ್ಜರಿ ಕಮ್​ಬ್ಯಾಕ್​ ಮಾಡಿದ್ದಾರೆ. ಸುಮಾರು ಒಂದು ವರ್ಷದ ಬಳಿಕ ಕೊನೆಯ ಓವರ್​ನಲ್ಲಿ ಬೆಂಗಳೂರು ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.

rinku singh
ರಿಂಕು ಸಿಂಗ್ ಪೋಸ್ಟ್​ (Instagram)

ಹೇಗಿತ್ತು ಕೊನೆಯ ಓವರ್?​: 219 ರನ್​ ಗೆಲುವಿನ ಟಾರ್ಗೆಟ್​ ಪಡೆದ ಸೂಪರ್​ ಕಿಂಗ್ಸ್​ಗೆ ಕೊನೆಯ ಓವರ್​ನಲ್ಲಿ 17 ರನ್​ ಬಾರಿಸಿದರೆ ಪ್ಲೇಆಫ್​ ಹಂತಕ್ಕೇರುವ ಅವಕಾಶವಿತ್ತು. ಆಗ ಯಶ್​ ದಯಾಳ್​ ಬೌಲಿಂಗ್​ ದಾಳಿಗಿಳಿದರು. ಮೊದಲ ಬಾಲ್​ನಲ್ಲೇ ಯಾರ್ಕರ್​ ಹಾಕುವಲ್ಲಿ ಎಡವಿದ್ದು, ಧೋನಿ ಸಿಕ್ಸರ್​ ಸಿಡಿಸುವ ಮೂಲಕ ಆಘಾತ ನೀಡಿದ್ದರು. ಆದರೆ, ಮರು ಎಸೆತದಲ್ಲೇ ಧೋನಿ ವಿಕೆಟ್​ ಪಡೆದ ಯಶ್​, ಆರ್​ಸಿಬಿಗೆ ಮೇಲುಗೈ ಸಾಧಿಸಲು ನೆರವಾದರು. ಬಳಿಕ ಮೂರನೇ ಎಸೆತದಲ್ಲಿ ಶಾರ್ದುಲ್​ ಠಾಕೂರ್​ಗೆ ರನ್​ ಗಳಿಸಲಾಗಲಿಲ್ಲ. ನಾಲ್ಕನೇ ಬೌಲ್​​ನಲ್ಲಿ ಶಾರ್ದುಲ್​ ಒಂದು ರನ್​ ತೆಗೆದುಕೊಂಡರು. ಅಂತಿಮ ಎರಡು ಎಸೆತಗಳಲ್ಲಿ ಚೆನ್ನೈಗೆ 10 ರನ್​ ಬೇಕಿದ್ದವು. ಆಗ ಜಡೇಜಾ ಸ್ಟ್ರೈಕ್​ನಲ್ಲಿದ್ದರು. ಎರಡೂ ಎಸೆತಗಳಲ್ಲಿ ಜಡೇಜಾರನ್ನು ಕಟ್ಟಿಹಾಕಿದ ಯಶ್​ ದಯಾಳ್​, ಬೆಂಗಳೂರು ತಂಡವನ್ನು ಪ್ಲೇಆಫ್​ಗೆ ಕೊಂಡೊಯ್ದರು. ಬಳಿಕ ಮೈದಾನದಲ್ಲಿ ಓಡುತ್ತ ಸಂಭ್ರಮಾಚರಿಸಿದ ದಯಾಳ್​, ಈ ಹಿಂದೆ ತಾವೆದುರಿಸಿದ ಟೀಕೆಗಳಿಗೆ ಯಶಸ್ಸಿನ ಮೂಲಕ ಪ್ರತ್ಯುತ್ತರ ರವಾನಿಸಿದರು.

ರಿಂಕು ಶ್ಲಾಘನೆ: ಯಶ್​ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿರುವ ರಿಂಕು ಸಿಂಗ್​ ವಿಶೇಷ ಪೋಸ್ಟ್​ ಹಾಕಿದ್ದಾರೆ. ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಸೆಲ್ಯೂಟ್​ ಎಮೋಜಿಯೊಂದಿಗೆ, 'ದೇವರ ಪ್ಲಾನ್ ಬೇಬಿ' (God's plan baby) ಎಂದು ರಿಂಕು ಬರೆದುಕೊಂಡಿದ್ದಾರೆ. ಜೊತೆಗೆ, ಮಾಜಿ ಕ್ರಿಕೆಟಿಗರು, ಸಹ ಆಟಗಾರರು, ಅಭಿಮಾನಿಗಳು ಸೇರಿದಂತೆ ಕ್ರಿಕೆಟ್​​ ಜಗತ್ತಿನ ಹಲವರು ಯಶ್​ ಅವರನ್ನು ಪ್ರಶಂಸಿಸಿ ಶುಭಾಶಯ ಕೋರಿದ್ದಾರೆ. ಕಳೆದ ಐಪಿಎಲ್​ನಲ್ಲಿ ಭಾರಿ ಟೀಕೆ ಅನುಭವಿಸಿದ್ದ ದಯಾಳ್​ ಅವರನ್ನು ಆರ್​ಸಿಬಿಯು ಹರಾಜಿನಲ್ಲಿ 5 ಕೋಟಿ ರೂ.ಗೆ ಖರೀದಿಸಿತ್ತು.

ಇದನ್ನೂ ಓದಿ: ಪಂದ್ಯ ಪುರುಷ ಗೌರವ ಯಶ್ ದಯಾಳ್​ಗೆ​ ಅರ್ಪಿಸುತ್ತೇನೆ: ಆರ್‌ಸಿಬಿ ನಾಯಕನಿಂದ ಶ್ಲಾಘನೆ - Du Plessis praises Yash Dayal

ETV Bharat Logo

Copyright © 2024 Ushodaya Enterprises Pvt. Ltd., All Rights Reserved.