ETV Bharat / bharat

'ನನ್ನ ಕ್ಲಿನಿಕ್ ಕಾಯುತ್ತಿದೆ': ಬಿಜೆಪಿ ಟಿಕೆಟ್​ ನಿರಾಕರಣೆ ಬೆನ್ನಲ್ಲೇ ರಾಜಕೀಯಕ್ಕೆ ಡಾ. ಹರ್ಷವರ್ಧನ್ ನಿವೃತ್ತಿ ಘೋಷಣೆ

author img

By ETV Bharat Karnataka Team

Published : Mar 3, 2024, 4:18 PM IST

Dr Harsh Vardhan
ಡಾ.ಹರ್ಷವರ್ಧನ್

ದೆಹಲಿಯ ಚಾಂದಿನಿ ಚೌಕ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್​ ನಿರಾಕರಣೆ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಡಾ. ಹರ್ಷವರ್ಧನ್ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ನವದೆಹಲಿ: ಬಿಜೆಪಿ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಡಾ. ಹರ್ಷವರ್ಧನ್​ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ, ತಮ್ಮ ವೈದ್ಯ ವೃತ್ತಿಗೆ ಮರಳುವುದಾಗಿ ಅವರು ಹೇಳಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ 195 ಕ್ಷೇತ್ರಗಳಿಗೆ ಟಿಕೆಟ್​ ಘೋಷಿಸಿದೆ. ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಟಿಕೆಟ್​ ನಿರಾಕರಿಸಲಾಗಿದೆ. ಇದರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಚಾಂದಿನಿ ಚೌಕ್‌ ಕ್ಷೇತ್ರದ ಸಂಸದ ಡಾ. ಹರ್ಷವರ್ಧನ್ ಸಹ ಒಬ್ಬರಾಗಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯದಿಂದ ನಿವೃತ್ತ ಹೊಂದುವ ನಿರ್ಧಾರವನ್ನು ಅವರು ಪ್ರಕಟಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿರುವ ಡಾ. ಹರ್ಷವರ್ಧನ್, 30 ವರ್ಷಗಳ ಚುನಾವಣಾ ವೃತ್ತಿಜೀವನದಲ್ಲಿ ನಾನು ಎಲ್ಲ ಐದು ವಿಧಾನಸಭೆ ಮತ್ತು ಎರಡು ಸಂಸತ್ತಿನ ಚುನಾವಣೆಗಳನ್ನು ಗೆದ್ದಿದ್ದೇನೆ. ಅದು ಸಹ ಆದರ್ಶಪ್ರಾಯವಾದ ಗೆಲುವಿನ ಅಂತರ, ಪಕ್ಷ ಸಂಘಟನೆ ಮತ್ತು ರಾಜ್ಯ ಮತ್ತು ಕೇಂದ್ರದ ಸರ್ಕಾರಗಳಲ್ಲಿ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಹೊಂದಿದ್ದೆ. ಅಂತಿಮವಾಗಿ ನನ್ನ ಮೂಲಕ್ಕೆ ಮರಳಲು ನಾನು ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಡಾ. ಹರ್ಷವರ್ಧನ್ ಪೋಸ್ಟ್‌ ಹೀಗಿದೆ: ''ನಾನು 50 ವರ್ಷಗಳ ಹಿಂದೆ ಕಾನ್ಪುರದ ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಸೇರಿದಾಗ ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಬಯಕೆ, ಮನುಕುಲದ ಸೇವೆ ನನ್ನ ಧ್ಯೇಯವಾಗಿತ್ತು. ಸ್ವಯಂಸೇವಕನಾಗಿ, ನಾನು ಯಾವಾಗಲೂ ಸರದಿಯಲ್ಲಿರುವ ಕೊನೆಯ ಮನುಷ್ಯನಿಗೆ ಸೇವೆ ಸಲ್ಲಿಸಲು ಶ್ರಮಿಸುವ ದೀನ್ ದಯಾಳ್ ಉಪಾಧ್ಯಾಯ ಅವರ ಅಂತೋದಯ ತತ್ವದ ಉತ್ಕಟ ಅಭಿಮಾನಿ. ಅಂದಿನ ಆರ್​​ಎಸ್​​ಎಸ್​ ನಾಯಕತ್ವದ ಒತ್ತಾಯದ ಮೇರೆಗೆ ನಾನು ಚುನಾವಣಾ ಕಣಕ್ಕೆ ಧುಮುಕಿದ್ದೆ. ಯಾಕೆಂದರೆ, ರಾಜಕೀಯವೆಂದರೆ ನಮ್ಮ ಮೂರು ಮುಖ್ಯ ಶತ್ರುಗಳಾದ ಬಡತನ, ರೋಗ ಮತ್ತು ಅಜ್ಞಾನದ ವಿರುದ್ಧ ಹೋರಾಡುವ ಅವಕಾಶ ಎಂದು ಅವರು ನನಗೆ ಮನವರಿಕೆ ಮಾಡಿಕೊಟ್ಟಿದ್ದರು.

ಪಶ್ಚಾತ್ತಾಪವಿಲ್ಲದೆ, ಸಾಮಾನ್ಯ ಜನರ ಸೇವೆ ಮಾಡುವ ನನ್ನ ಉತ್ಸಾಹವನ್ನು ತಣಿಸಿದ ಅದ್ಭುತ ಇನ್ನಿಂಗ್ಸ್ ಎಂದು ನಾನು ಹೇಳಲೇಬೇಕು. ನಾನು ದೆಹಲಿ ಆರೋಗ್ಯ ಸಚಿವನಾಗಿ ಹಾಗೂ ಎರಡು ಬಾರಿ ಕೇಂದ್ರ ಆರೋಗ್ಯ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಆರೋಗ್ಯ ನನ್ನ ಹೃದಯಕ್ಕೆ ವಿಷಯವಾಗಿದೆ. ಮೊದಲಿಗೆ ಪೋಲಿಯೊ ಮುಕ್ತ ಭಾರತವನ್ನು ನಿರ್ಮಾಣ ಮಾಡುವ ಕಾರ್ಯ, ನಂತರ ಕೋವಿಡ್​ ಮೊದಲ ಮತ್ತು ಎರಡನೇ ಹಂತಗಳಲ್ಲಿ ಹೋರಾಡುತ್ತಿರುವ ಲಕ್ಷಾಂತರ ನಮ್ಮ ದೇಶದ ಜನರ ಆರೋಗ್ಯವನ್ನು ನೋಡಿಕೊಳ್ಳಲು ನನಗೆ ಅಪರೂಪದ ಅವಕಾಶ ದೊರೆಯಿತು.

ಮಾನವಕುಲದ ಸುದೀರ್ಘ ಇತಿಹಾಸದಲ್ಲಿ ಕೇವಲ ಕೆಲವರಿಗೆ ಮಾತ್ರ ತಮ್ಮ ಜನರನ್ನು ಗಂಭೀರ ಅಪಾಯದ ಸಮಯದಲ್ಲಿ ರಕ್ಷಿಸುವ ಸುಯೋಗ ಸಿಗುತ್ತದೆ. ಮತ್ತು ನಾನು ಜವಾಬ್ದಾರಿಯಿಂದ ನುಣುಚಿಕೊಳ್ಳಲಿಲ್ಲ. ಅದನ್ನು ಸ್ವಾಗತಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಮಾ ಭಾರತಿಗೆ ನನ್ನ ಕೃತಜ್ಞತೆ. ನನ್ನ ಸಹ ನಾಗರಿಕರಿಗೆ ನನ್ನ ಗೌರವ ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ನನ್ನ ನಮನ. ಮತ್ತು ಭಗವಾನ್ ಶ್ರೀರಾಮ್ ನನಗೆ ದಯಪಾಲಿಸಿದ ಅತಿದೊಡ್ಡ ಸವಲತ್ತು. ಅದು ಮಾನವ ಜೀವಗಳನ್ನು ಉಳಿಸುವ ಸವಲತ್ತು.

ನನ್ನ ಎಲ್ಲಾ ಪಕ್ಷದ ಕಾರ್ಯಕರ್ತರು, ನನ್ನ ಅಭಿಮಾನಿಗಳು ಮತ್ತು ಸಾಮಾನ್ಯ ನಾಗರಿಕರಲ್ಲಿ ಬೆಂಬಲಿಗರು ಮತ್ತು ನನ್ನ ಪಕ್ಷದ ನಾಯಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇವರೆಲ್ಲರೂ ಮೂರು ದಶಕಗಳ ಕಾಲದ ಈ ಗಮನಾರ್ಹ ಪ್ರಯಾಣಕ್ಕೆ ಕೊಡುಗೆ ನೀಡಿದ್ದಾರೆ. ಭಾರತದ ಇತಿಹಾಸದಲ್ಲಿ ಅತ್ಯಂತ ಕ್ರಿಯಾಶೀಲ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ನಾನು ದೊಡ್ಡ ಸುಯೋಗವೆಂದು ಪರಿಗಣಿಸುತ್ತೇನೆ ಎಂದು ಒಪ್ಪಿಕೊಳ್ಳಬೇಕು. ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಲಿ ಎಂದು ದೇಶ ಹಾರೈಸುತ್ತದೆ.

ತಂಬಾಕು ಮತ್ತು ಮಾದಕ ವ್ಯಸನದ ವಿರುದ್ಧ, ಹವಾಮಾನ ಬದಲಾವಣೆಯ ವಿರುದ್ಧ ಮತ್ತು ಸರಳ ಮತ್ತು ಸುಸ್ಥಿರ ಜೀವನಶೈಲಿಯನ್ನು ಕಲಿಸುವ ನನ್ನ ಕೆಲಸವನ್ನು ನಾನು ಮುಂದುವರಿಸುತ್ತೇನೆ. ನಾನು ಅನೇಕ ಪ್ರಥಮಗಳನ್ನು ಗಳಿಸಿ ಸಾರ್ಥಕ ರಾಜಕೀಯ ಜೀವನವನ್ನು ನಡೆಸುತ್ತಿರುವಾಗ ನನ್ನೊಂದಿಗೆ ಬಂಡೆಯಂತೆ ನಿಂತ ಎಲ್ಲರಿಗೂ ದೊಡ್ಡ ಜೈಕಾರ. ನಿಮ್ಮ ಆಶೀರ್ವಾದ ಯಾವಾಗಲೂ ನನ್ನೊಂದಿಗೆ ಇರುತ್ತದೆ ಎಂದು ನನಗೆ ತಿಳಿದಿದೆ. ಕೃಷ್ಣನಗರದಲ್ಲಿರುವ ನನ್ನ ಇಎನ್‌ಟಿ ಕ್ಲಿನಿಕ್ ಕೂಡ ನನ್ನ ವಾಪಸಾತಿಗಾಗಿ ಕಾಯುತ್ತಿದೆ'' ಎಂದು ಡಾ. ಹರ್ಷವರ್ಧನ್ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಶಾಕ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.