ETV Bharat / bharat

ಜಮ್ಮು- ಕಾಶ್ಮೀರದ ಶಾಲೆಗಳಲ್ಲಿ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಲು ಸೂಚನೆ

author img

By ETV Bharat Karnataka Team

Published : Jan 25, 2024, 10:16 PM IST

ಗಣರಾಜ್ಯೋತ್ಸವ
ಗಣರಾಜ್ಯೋತ್ಸವ

ಜಮ್ಮು ಕಾಶ್ಮೀರದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಕಳೆಗಟ್ಟುವಂತೆ ಮಾಡಲು ಎಲ್ಲ ಶಾಲಾ ಕಾಲೇಜುಗಳಲ್ಲಿ ನಾಳೆ ಧ್ವಜಾರೋಹಣ ಮಾಡಲು ಸೂಚಿಸಲಾಗಿದೆ.

ಶ್ರೀನಗರ: ಉಗ್ರರ ಕಾಟದಿಂದ ಬಳಲುತ್ತಿರುವ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ 77ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಎಲ್ಲ ಶಾಲಾ ಕಾಲೇಜುಗಳಲ್ಲಿ ಆಚರಿಸಬೇಕು ಎಂದು ಅಲ್ಲಿನ ಆಡಳಿತ ಸೂಚನೆ ನೀಡಿದೆ. ಜೊತೆಗೆ ಅದರ ವಿಡಿಯೋ, ಚಿತ್ರಗಳನ್ನು ಹಂಚಿಕೊಳ್ಳುವಂತೆ ತಾಕೀತು ಮಾಡಿದೆ.

ಈ ಬಗ್ಗೆ ಜಮ್ಮು ಕಾಶ್ಮೀರ ಆಡಳಿತವು ಎಲ್ಲ ಶಾಲೆಗಳ ಆಡಳಿತ ಮಂಡಳಿಗೆ ನೋಟಿಸ್​ ಜಾರಿ ಮಾಡಿದೆ. ಜನವರಿ 26 ರಂದು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವವನ್ನು ಉತ್ಸಾಹ ಮತ್ತು ರಾಷ್ಟ್ರೀಯ ಹೆಮ್ಮೆಯಿಂದ ಆಚರಿಸಬೇಕು. ಸಂಸ್ಥೆಗಳ ಮುಖ್ಯಸ್ಥರು ರಾಷ್ಟ್ರಧ್ವಜವನ್ನು ಹಾರಿಸಬೇಕು. ಎಲ್ಲಾ ಸಿಬ್ಬಂದಿ, ಸದಸ್ಯರ ಉಪಸ್ಥಿತಿಯಲ್ಲಿ ಇದನ್ನು ಮಾಡಬೇಕು ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಿ ಬಳಿಕ, ವಲಯ ಮಟ್ಟ, ಬ್ಲಾಕ್ ಮಟ್ಟ, ತಹಸಿಲ್ ಮಟ್ಟದಲ್ಲಿ ಧ್ವಜಾರೋಹಣ ಮಾಡಬೇಕು ಎಂದು ಜಿಲ್ಲೆಯ ಎಲ್ಲಾ ಸಂಸ್ಥೆಗಳಿಗೆ ಮುಖ್ಯ ಶಿಕ್ಷಣಾಧಿಕಾರಿಗಳು ನೋಟಿಸ್​ ರವಾನಿಸಿದ್ದಾರೆ.

ವಿಡಿಯೋ, ಚಿತ್ರ ಹಂಚಿಕೊಳ್ಳಿ: ಶಿಕ್ಷಣ ಸಂಸ್ಥೆಗಳಲ್ಲಿ ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಿಸಿದ ಬಳಿಕ, ಅದರ ವಿಡಿಯೋ, ಚಿತ್ರಗಳನ್ನು ಅಧಿಕೃತ ಅಂಚೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಶಾಲಾ ಮುಖ್ಯಸ್ಥರು ಕಳುಹಿಸಬೇಕು. ಕಾಶ್ಮೀರ ಕಣಿವೆಯ ಇತರ ಜಿಲ್ಲೆಗಳಲ್ಲಿರುವ ಎಲ್ಲ ಶಾಲೆಗಳಿಗೂ ಇದೇ ರೀತಿಯ ನಿರ್ದೇಶನಗಳನ್ನು ನೀಡಲಾಗಿದೆ. ಅಂದು ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಇಂಟರ್ನೆಟ್, ಜನರ ಸಂಚಾರದ ಮೇಲೆ ಯಾವುದೇ ನಿರ್ಬಂಧಗಳು ಇರುವುದಿಲ್ಲ ಎಂದು ಆಡಳಿತ ಹೇಳಿದೆ.

ಗಣರಾಜ್ಯೋತ್ಸವ ಸಂಭ್ರಮದಲ್ಲಿ ಜನರನ್ನು ಭಾಗವಹಿಸಲು ಆಹ್ವಾನಿಸುತ್ತಿದ್ದೇವೆ. ಅವರಿಗೆ ಯಾವುದೇ ಭದ್ರತಾ ಪಾಸ್‌ಗಳ ಅಗತ್ಯವಿಲ್ಲ. ಎಲ್ಲರೂ ರಾಷ್ಟ್ರೀಯ ಧ್ವಜಕ್ಕೆ ಗೌರವ ಸೂಚಿಸಬಹುದು ಎಂದು ಕಾಶ್ಮೀರದ ವಿಭಾಗೀಯ ಆಯುಕ್ತ ವಿಜಯ್ ಕುಮಾರ್ ಬಿದರಿ ಹೇಳಿದ್ದಾರೆ. ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಗಣರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.

2019ರ ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಳೆದ 5 ವರ್ಷಗಳಿಂದ ಇಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ಲೆಫ್ಟಿನೆಂಟ್ ಗವರ್ನರ್ ಅವರ ನೇತೃತ್ವದಲ್ಲೇ ನಡೆಯುತ್ತಿವೆ. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದ ಸಂಭ್ರಮಗಳ ಅಧ್ಯಕ್ಷತೆಯನ್ನೂ ಅವರೇ ವಹಿಸುತ್ತಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ಧತೆಗಳು ನಡೆದಿವೆ ಎಂದು ವರದಿಯಾಗಿದೆ. ಕಣಿವೆಗೆ ರಾಜ್ಯ ಸ್ಥಾನಮಾನ ನೀಡಿ, ವಿಧಾನಸಭೆ ಚುನಾವಣೆಯನ್ನು ಈ ವರ್ಷವೇ ನಡೆಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಆದೇಶಿಸಿದೆ.

ಇದನ್ನೂ ಓದಿ: ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವೇ ತಾತ್ಕಾಲಿಕ, ರದ್ದು ಮಾಡಿದ್ದು ತಪ್ಪಲ್ಲ: ಕೇಂದ್ರದ ನಿರ್ಧಾರ ಎತ್ತಿಹಿಡಿದ ಸುಪ್ರೀಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.