ETV Bharat / bharat

ಬಿಹಾರ ಸಿಎಂ ನಿತೀಶ್​ಗೆ ಬಾಂಬ್​ ಬೆದರಿಕೆ: ಆರೋಪಿ ಕರ್ನಾಟಕದಲ್ಲಿ ಬಂಧನ

author img

By ETV Bharat Karnataka Team

Published : Feb 15, 2024, 2:05 PM IST

ಬಿಹಾರ ಸಿಎಂ ನಿತೀಶ್​ಗೆ ಬಾಂಬ್​ ಬೆದರಿಕೆ
ಬಿಹಾರ ಸಿಎಂ ನಿತೀಶ್​ಗೆ ಬಾಂಬ್​ ಬೆದರಿಕೆ

ಬಿಹಾರ ಸಿಎಂ ನಿತೀಶ್​ಕುಮಾರ್​ಗೆ ಬಾಂಬ್​ ಬೆದರಿಕೆ ಹಾಕಿದ ಆರೋಪಿಯನ್ನು ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಬಂಧಿಸಲಾಗಿದೆ.

ಪಾಟ್ನಾ(ಬಿಹಾರ) : ಮುಖ್ಯಮಂತ್ರಿ ನಿತೀಶ್​ಕುಮಾರ್​ಗೆ ಬಾಂಬ್​ ದಾಳಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಯನ್ನು ಕರ್ನಾಟಕದಲ್ಲಿ ಬುಧವಾರ ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಬಿಹಾರ ಮೂಲದವನಾಗಿದ್ದು, ದಾವಣಗೆರೆಯ ಹರಿಹರ ತಾಲೂಕಿನಲ್ಲಿ ರೈಸ್​ ಮಿಲ್​ನಲ್ಲಿ ಕೆಲಸಕ್ಕಿದ್ದ ಎಂದು ತಿಳಿದುಬಂದಿದೆ.

ಸಿಎಂ ನಿತೀಶ್​ಕುಮಾರ್​ ಬಿಜೆಪಿ ಸಖ್ಯ ಬಿಡಬೇಕು, ಇಲ್ಲವಾದಲ್ಲಿ ಬಾಂಬ್​ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಹಾಕಿದ ಆಡಿಯೋವನ್ನು ಜನವರಿ 30 ರಂದು ರಾತ್ರಿ 8 ಗಂಟೆಗೆ ನೇರವಾಗಿ ಬಿಹಾರ ಪೊಲೀಸ್ ಮಹಾನಿರ್ದೇಶಕ ಆರ್.ಎಸ್.ಭಟ್ಟಿ ಅವರ ಮೊಬೈಲ್ ಫೋನ್‌ಗೆ ವಾಟ್ಸ್​ಆ್ಯಪ್​ ಮೂಲಕ ಕಳುಹಿಸಿದ್ದ. ಇದರ ವಿಚಾರಣೆ ನಡೆಸಿದ ಆರ್ಥಿಕ ಅಪರಾಧ ವಿಭಾಗದ ಪೊಲೀಸರು, ಆರೋಪಿಯು ಕರ್ನಾಟಕದಲ್ಲಿ ಇರುವುದನ್ನು ಗುರುತಿಸಿದ್ದಾರೆ. ಬಳಿಕ, ಮೊಬೈಲ್​ ನೆಟ್​ವರ್ಕ್​ ಆಧಾರದ ಮೇಲೆ ದಾವಣಗೆರೆಯ ಹರಿಹರಿ ತಾಲೂಕಿನಲ್ಲಿ ಆರೋಪಿ ಇರುವುದನ್ನು ಪತ್ತೆ ಮಾಡಿದ್ದಾರೆ. ಬುಧವಾರ ದಾಳಿ ಮಾಡಿ ಬಂಧಿಸಿ, ಪಟ್ನಾಗೆ ಕರೆದೊಯ್ದಿದ್ದಾರೆ.

ಆರೋಪಿಯನ್ನು ಸೋನು ಪಾಸ್ವಾನ್​ ಎಂದು ಗುರುತಿಸಲಾಗಿದೆ. ಈತ ಬಿಹಾರದ ಸಮಷ್ಠಿಪುರ ಜಿಲ್ಲೆಯ ಹಸ್ನುಪುರದ ದಯಾನಗರ ನಿವಾಸಿಯಾಗಿದ್ದಾನೆ. ಕರ್ನಾಟಕದ ದಾವಣಗೆರೆಯ ಹರಿಹರ ತಾಲೂಕಿನ ರೈಸ್​ ಮಿಲ್​ನಲ್ಲಿ ಕೆಲಸಕ್ಕೆ ಸೇರಿದ್ದ. ಈಚೆಗೆ ನಿತೀಶ್​ಕುಮಾರ್​ ಆರ್​ಜೆಡಿ ಸಖ್ಯ ತೊರೆದು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದು, ಆರೋಪಿಯ ಅಸಮಾಧಾನಕ್ಕೆ ಕಾರಣವಾಗಿತ್ತು. ಕೆಲ ದಿನಗಳ ಹಿಂದೆ ಆರೋಪಿ, ಬಾಂಬ್​ ದಾಳಿ ಬೆದರಿಕೆಯ ಅಲ್ಲಿನ ಪೊಲೀಸ್​ ಮಹಾನಿರ್ದೇಶಕರ ಮೊಬೈಲ್​ಗೆ ಆಡಿಯೋ ಕ್ಲಿಪ್​ ಕಳುಹಿಸಿದ್ದ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ತಂಡ ರಚಿಸಿಕೊಂಡು ತನಿಖೆ ನಡೆಸಿದ್ದಾರೆ.

ತಪ್ಪೊಪ್ಪಿಕೊಂಡ ಆರೋಪಿ: ನಿತೀಶ್​ಕುಮಾರ್​ಗೆ ಬಾಂಬ್​ ಬೆದರಿಕೆ ಹಾಕಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಬಡತನ ಮತ್ತು ನಿರುದ್ಯೋಗದ ಕಾರಣದಿಂದ ಮುಖ್ಯಮಂತ್ರಿಯ ಮೇಲೆ ಸಿಟ್ಟಾಗಿದ್ದ. ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವಿಲ್ಲ ಎಂದು ತಿಳಿಸಿದ್ದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ನಿತೀಶ್​ಕುಮಾರ್ ಅವರಿಗೆ ಬಿಜೆಪಿಯಿಂದ ದೂರವಾಗಲು ಹೇಳಿ, ಇಲ್ಲದಿದ್ದರೆ ಬಾಂಬ್ ದಾಳಿ ಮಾಡಲಾಗುವುದು. ಶಾಸಕರನ್ನೂ ಕೊಲ್ಲುತ್ತೇನೆ ಎಂಬ ಬೆದರಿಕೆ ಕ್ಲಿಪ್ ಅನ್ನು ಡಿಜಿಪಿಗೆ ಕಳುಹಿಸಿದ್ದ. ಐದು ಬೆದರಿಕೆ ಕ್ಲಿಪ್​ಗಳನ್ನು ಆತ ರವಾನಿಸಿದ್ದ.

ಇನ್ನೊಂದು ಪ್ರಕರಣದಲ್ಲಿ ಪಾಟ್ನಾದಲ್ಲಿ ಯೂಟ್ಯೂಬರ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಇಂಥದ್ದೇ ಪ್ರಕರಣದಲ್ಲಿ ಬಂಧಿಸಲಾಗಿದೆ. ಮುಖ್ಯಮಂತ್ರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ, ಪಾಟ್ನಾ ಜಂಕ್ಷನ್‌ನಲ್ಲಿರುವ ಗೋಲಾಂಬರ್‌ನ ಇಬ್ಬರು ಯುವಕರನ್ನು ಪಾಟ್ನಾ ಪೊಲೀಸ್ ವಿಶೇಷ ದಳ ಬಂಧಿಸಿದೆ.

ಇದನ್ನೂ ಓದಿ: ವಿಶ್ವಾಸಮತ ಗೆದ್ದ ನಿತೀಶ್​ ಕುಮಾರ್‌ಗೆ ಬಿ'ಹಾರ'​: ವಿಪಕ್ಷಗಳಿಂದ ಸದನ ಬಹಿಷ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.