ETV Bharat / bharat

ಆಪರೇಷನ್​ ಕಮಲ ಆರೋಪ: 2ನೇ ಸಲ ವಿಶ್ವಾಸಮತ ಯಾಚಿಸಿದ ದೆಹಲಿ ಸಿಎಂ ಕೇಜ್ರಿವಾಲ್​

author img

By ETV Bharat Karnataka Team

Published : Feb 17, 2024, 10:25 AM IST

ದೆಹಲಿ ಸಿಎಂ ಕೇಜ್ರಿವಾಲ್​
ದೆಹಲಿ ಸಿಎಂ ಕೇಜ್ರಿವಾಲ್​

ಸಿಎಂ ಅರವಿಂದ್ ಕೇಜ್ರಿವಾಲ್​ ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಂಡಿಸಿದ್ದಾರೆ. ಇದರ ಮೇಲೆ ಚರ್ಚೆಗಳು ಇಂದು (ಶನಿವಾರ) ನಡೆಯಲಿವೆ.

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ತನ್ನನ್ನು ಬಂಧಿಸುವ ಯತ್ನ, ಸರ್ಕಾರವನ್ನು ಬೀಳಿಸಲು ಬಿಜೆಪಿ ಸಂಚು ಯತ್ನದ ಆರೋಪದ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿಲುವಳಿಯನ್ನು ಶುಕ್ರವಾರ ಮಂಡಿಸಿದರು. ಇಂದು (ಶನಿವಾರ) ಅದರ ಮೇಲೆ ಚರ್ಚೆ ನಡೆಯಲಿದೆ.

ಲೆಫ್ಟಿನೆಂಟ್ ಗವರ್ನರ್ ಅವರ ಭಾಷಣದ ವೇಳೆ ಅಡ್ಡಿ ಉಂಟು ಮಾಡಿದ ಆರೋಪದ ಮೇಲೆ 8 ಬಿಜೆಪಿ ಶಾಸಕರ ಪೈಕಿ 7 ಮಂದಿಯನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಇದರಿಂದ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಶಾಸಕರು ವಿರೋಧ ಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ ಅವರ ಸಮ್ಮುಖದಲ್ಲಿ ಶನಿವಾರ ವಿಧಾನಸಭೆಯಲ್ಲಿ ಈ ಪ್ರಸ್ತಾಪವನ್ನು ಚರ್ಚೆಗೆ ತರಲಿದ್ದಾರೆ.

70 ಸದಸ್ಯ ಬಲದ ವಿಧಾನಸಭೆಯಲ್ಲಿ ಸಿಎಂ ಕೇಜ್ರಿವಾಲ್ ಸರ್ಕಾರ ವಿಶ್ವಾಸ ಮತ ಯಾಚಿಸುತ್ತಿರುವುದು ಇದು ಎರಡನೇ ಬಾರಿ. ಪ್ರಸ್ತುತ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 8 ಶಾಸಕರನ್ನು ಹೊಂದಿದೆ. ಹೀಗಾಗಿ ನಿಲುವಳಿ ಸಲೀಸಾಗಿ ಪಾಸ್​ ಆಗಲಿದೆ. ಇದರಿಂದ ತಮ್ಮ ಸರ್ಕಾರ ಸುಭದ್ರವಾಗಿದೆ. ಶಾಸಕರ ಖರೀದಿ ಸಾಧ್ಯವಿಲ್ಲ ಎಂಬುದನ್ನು ಕೇಜ್ರಿವಾಲ್​ ಸಾಬೀತು ಮಾಡಲಿದ್ದಾರೆ. ಇದರ ಜೊತೆಗೆ ಆಪ್​ ಶಾಸಕರ ನಿಷ್ಠೆಯೂ ಇಲ್ಲಿ ಬಯಲಾಗಲಿದೆ. ಬಿಜೆಪಿಯ ವಿರುದ್ಧ ಹರಿಹಾಯಲು ಸದನದಲ್ಲಿ ಅವಕಾಶ ಕೂಡ ಸಿಗಲಿದೆ.

ಬಿಜೆಪಿ ವಿರುದ್ಧ ಸಿಎಂ ಕೇಜ್ರಿ 'ಖರೀದಿ' ಆರೋಪ: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿಲುವಳಿ ಮಂಡಿಸಿದ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಆಪ್​ನ ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂಪಾಯಿ ಆಫರ್​ ಮಾಡಿದೆ. ಈ ಬಗ್ಗೆ ನಮ್ಮ ಪಕ್ಷದ ಇಬ್ಬರು ಶಾಸಕರು ನನ್ನ ಬಳಿ ದೂರಿದ್ದಾರೆ. ನನ್ನನ್ನು ಬಂಧಿಸಿ, ಸರ್ಕಾರ ಬೀಳಿಸುವುದೇ ಜೆಪಿಯ ದುರುದ್ದೇಶವಾಗಿದೆ ಎಂದು ಆರೋಪಿಸಿದರು.

ಆಪ್​ನ 21 ಶಾಸಕರೊಂದಿಗೆ ಸಂಪರ್ಕ ಸಾಧಿಸಲಾಗಿದೆ. ಆದರೆ, ಅವರೆಲ್ಲರೂ 'ಆಪರೇಷನ್ ಕಮಲ'ಕ್ಕೆ ಬಲಿಯಾಗಲು ಸಿದ್ಧರಿಲ್ಲ. ಬಿಜೆಪಿ ಸಂಪರ್ಕಿಸಿದ ಯಾವೊಬ್ಬ ಶಾಸಕರೂ ಆಫರ್​ ಸ್ವೀಕರಿಸಿಲ್ಲ. ನಮ್ಮ ಸರ್ಕಾರಕ್ಕೆ ಬಹುಮತ ಇದೆಯೇ ಇಲ್ಲವೇ ಎಂಬುದು ನಿಲುವಳಿ ಮೂಲಕ ಬಹಿರಂಗವಾಗಲಿದೆ ಎಂದು ಹೇಳಿದರು.

ಬಂಧಿಸುವ ಯತ್ನ: ದೆಹಲಿ ಅಬಕಾರಿ ನೀತಿ ಹಗರಣ ಸುಳ್ಳೆಂದು ಸಮರ್ಥಿಸಿಕೊಂಡ ಕೇಜ್ರಿವಾಲ್​, ಪ್ರಕರಣದಲ್ಲಿ ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ತಥಾಕಥಿತ ಮದ್ಯದ ಪ್ರಕರಣದಲ್ಲಿ ನನ್ನನ್ನೂ ಬಂಧಿಸಿ, ಸರ್ಕಾರವನ್ನು ಬೀಳಿಸುವುದೇ ಉದ್ದೇಶವಾಗಿದೆ. ಆದರೆ, ಇದ್ಯಾವುದೂ ನಡೆಯಲು ನಮ್ಮ ಶಾಸಕರು ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಚುನಾವಣೆಯಿಂದ ಆಪ್​ ವಿರುದ್ಧ ಗೆಲ್ಲಲು ಸಾಧ್ಯವೇ ಇಲ್ಲ ಎಂಬುದು ಬಿಜೆಪಿಗೆ ಗೊತ್ತಿದೆ. ಅದಕ್ಕಾಗಿಯೇ ಅವರು ಆಪ್​ ಸರ್ಕಾರವನ್ನು ಬೀಳಿಸಲು ಅನ್ಯ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ನಮ್ಮ ಯಾವ ಶಾಸಕರೂ ಪಕ್ಷಾಂತರ ಮಾಡಲ್ಲ ಎಂದು ತೋರಿಸಲು, ನಾನು ಈ ನಿರ್ಣಯವನ್ನು ಮಂಡಿಸಿದ್ದೇನೆ. ಸದನವು ಸರ್ಕಾರ ಮೇಲೆ ನಂಬಿಕೆಯನ್ನು ಸಾಬೀತು ಮಾಡುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮದ್ಯ ನೀತಿ ಹಗರಣ: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ 6ನೇ ಸಮನ್ಸ್​ ಕಳುಹಿಸಿದ ಇಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.