ಕೋಡಿ ಬಿದ್ದ ವಿಜಯನಗರ ಕಾಲದ ಕಮಲಾಪುರ ಕೆರೆ: ರೈತರ ಮೊಗದಲ್ಲಿ ಖುಷಿ
ಹೊಸಪೇಟೆ: ವಿಜಯನಗರ ಕಾಲದ ಪುರಾತನ ಕಮಲಾಪುರ ಕೆರೆ ಕೋಡಿ ಹರಿದು ರೈತರಲ್ಲಿ ಸಂತಸ ಮೂಡಿಸಿದೆ. ಕೆರೆಯು 476 ಎಕರೆ ವಿಸ್ತೀರ್ಣ ಹೊಂದಿದ್ದು, 105,00 ಮಿಲಿಯನ್ ಘನ ಅಡಿಗಳಷ್ಟು ವಿಸ್ತೀರ್ಣ ಹೊಂದಿದೆ. ಕೆರೆಯು ನಾಲ್ಕು ತೂಬುಗಳನ್ನು ಒಳಗೊಂಡಿದ್ದು, ಸುಮಾರು 714 ಎಕರೆಗಳಿಗೆ ಕೆರೆ ನೀರುಣಿಸುತ್ತದೆ. ಕಮಲಾಪುರ ಹಾಗೂ ಕಡ್ಡಿರಾಂಪುರ ರೈತರ ಜೀವನಾಡಿಯಾಗಿದ್ದು, ರೈತರು ಬಾಳೆ, ಕಬ್ಬು, ಭತ್ತ ಬೆಳೆಯುತ್ತಾರೆ. ಈ ಜಲಾಗಾರವು ಕೃಷಿ ಹಾಗೂ ಅಂತರ್ಜಲಕ್ಕೆ ಮಾತ್ರ ಸಿಮೀತವಾಗಿಲ್ಲ. ಮೀನುಗಾರಿಕೆಗೂ ಆಸರೆಯಾಗಿದೆ. ಈಗ ಕೆರೆ ಭರ್ತಿಯಾಗಿದ್ದು, ಪ್ರವಾಸಿಗರ ತಾಣವಾಗಿಯೂ ಮಾರ್ಪಾಡಾಗಿದೆ. ಕೆರೆಯ ಬಳಿ ಕುಳಿತುಕೊಳ್ಳುವ ಆಸನಗಳಿದ್ದು, ಕೆರೆಯ ಸೌಂದರ್ಯವನ್ನು ಸವಿಯಬಹುದು.