ಬಾಗಲಕೋಟೆಯಲ್ಲಿ ಭಾರೀ ಮಳೆ: ಕೋಳಿ ಫಾರ್ಮ್ಗೆ ನುಗ್ಗಿದ ನೀರು
ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಹಲವು ದಿನದಿಂದ ಮಳೆಯಾಗುತ್ತಿರುವ ಕಾರಣ, ಮುಧೋಳ ಹಾಗೂ ಜಮಖಂಡಿ ತಾಲೂಕಿನಲ್ಲಿ ಸಾಕಷ್ಟು ಹಾನಿ ಉಂಟಾಗಿದೆ. ಮುಧೋಳ ಪಟ್ಟಣದ ಹೊರ ವಲಯದಲ್ಲಿದ್ದ ಕೋಳಿ ಫಾರ್ಮ್ಗೆ ನೀರು ನುಗ್ಗಿ ಸಾವಿರಾರು ಸಂಖ್ಯೆ ಕೋಳಿಗಳು ಜಲಾವೃತಗೊಂಡು ಮೃತ ಪಟ್ಟಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿ ಪರದಾಡುವಂತಾಗಿದೆ. ಬಾಲಚಂದ್ರ ಹೀರೆಗೋಳಬಾಳ ಎಂಬ ರೈತ ತಮ್ಮ ಜಮೀನಿನಲ್ಲಿ ಸುಮಾರು ಐದು ಸಾವಿರದಷ್ಟು ಕೋಳಿ ಸಾಕಣೆ ಮಾಡಿದ್ದರು. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಶೆಡ್ಗೆ ನೀರು ನುಗ್ಗಿ ಅನಾಹುತ ಸಂಭವಿಸಿದೆ.