ದಾವಣಗೆರೆ: ಸೇತುವೆ ದಾಟಲು ಮುಂದಾಗಿ ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದ ಶಿಕ್ಷಕನ ರಕ್ಷಣೆ -ವಿಡಿಯೋ
Published : Nov 7, 2023, 3:54 PM IST
ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ ವರುಣನ ಆರ್ಭಟ ಜೋರಾಗಿತ್ತು. ಈ ಮಳೆಯಿಂದ ಜಿಲ್ಲೆಯ ಹಳ್ಳಕೊಳ್ಳಲು ತುಂಬಿ ಹರಿದಿವೆ. ಹೀಗೆ ತುಂಬಿ ಹರಿಯುತ್ತಿದ್ದ ಹಳ್ಳದ ಸೇತುವೆ ದಾಟಲು ಮುಂದಾಗಿ ಬೈಕ್ ಸಮೇತ ಶಿಕ್ಷಕ ಕೊಚ್ಚಿ ಹೋಗಿದ್ದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನಡೆದಿದ್ದು, ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಶಿಕ್ಷಕನ ಜೀವ ಉಳಿದಿದೆ. ಕಳೆದ ರಾತ್ರಿ ಚನ್ನಗಿರಿ ಭಾಗದಲ್ಲಿ ಭಾರೀ ಮಳೆಯಾಗಿದ್ದರಿಂದ ದೊಡ್ಡಘಟ್ಟ- ಚೊರಡೋಣಿ ಹಳ್ಳ ತುಂಬಿ ಹರಿಯುತ್ತಿದೆ. ಇದೇ ಮಾರ್ಗವಾಗಿ ಶಿಕ್ಷಕ ತಿಮ್ಮಯ್ಯ ಎಂಬುವರು ಬಸವಪಟ್ಟಣದಿಂದ ದೊಡ್ಡಘಟ್ಟ ಗ್ರಾಮದ ಶಾಲೆಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿತ್ತು.
ಈ ವೇಳೆ ಸೇತುವೆ ದಾಟುವಾಗ ಬೈಕ್ ಸಮೇತ ನೀರಿನ ಸೆಳೆತಕ್ಕೆ ಶಿಕ್ಷಕ ತಿಮ್ಮಯ್ಯ ಕೊಚ್ಚಿ ಹೋಗಿದ್ದರು. ಈ ಸಂದರ್ಭದಲ್ಲಿ ಹಳ್ಳದ ಬಳಿ ಇದ್ದ ಸ್ಥಳೀಯರು ಇದನ್ನು ಗಮನಿಸಿ ಕೂಡಲೇ ಶಿಕ್ಷಕನ ನೆರವಿಗೆ ಧಾವಿಸಿ ಬೈಕ್ ಸಮೇತವಾಗಿ ರಕ್ಷಣೆ ಮಾಡಿದ್ದಾರೆ. ಘಟನೆಯ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಘಟನೆ ಬಸವಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ರಾಜ್ಯದ ಹಲವೆಡೆ ಹಿಂಗಾರು ಮಳೆ ಮಜ್ಜನ; ಯಲಹಂಕದ ಕೋಗಿಲು ಕ್ರಾಸ್ ಜಲಾವೃತ