ರಾಮನಗರ: ಕನ್ನಸಂದ್ರ ಗ್ರಾಮದಲ್ಲಿ ನಾಯಿ ಹೊತ್ತೊಯ್ದ ಚಿರತೆ- ವಿಡಿಯೋ
Published : Nov 5, 2023, 11:57 AM IST
ರಾಮನಗರ: ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಚನ್ನಪಟ್ಟಣ ತಾಲ್ಲೂಕಿನ ಕನ್ನಸಂದ್ರ ಗ್ರಾಮದಲ್ಲಿ ನಾಯಿಯನ್ನು ಹೊತ್ತೊಯ್ದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಡರಾತ್ರಿ ಘಟನೆ ನಡೆದಿದೆ. ಕನ್ನಸಂದ್ರ ಗ್ರಾಮದ ಅಶೋಕ್ ಎಂಬವರ ಮನೆ ಮುಂದೆ ಸಾಕಿದ್ದ ನಾಯಿಯನ್ನು ಚಿರತೆ ಬಲಿ ಪಡೆದಿದೆ.
ರಾಮನಗರ ಜಿಲ್ಲೆಯಲ್ಲಿ ಗ್ರಾಮಗಳತ್ತ ಆಗಮಿಸುತ್ತಿರುವ ಕಾಡಾನೆಗಳ ಹಾವಳಿ ಒಂದೆಡೆಯಾದರೆ, ಮತ್ತೊಂದೆಡೆ ಚಿರತೆಗಳ ಉಪಟಳದಿಂದ ಜನತೆ ಬೇಸತ್ತಿದ್ದಾರೆ. ಕಾಡು ಪ್ರಾಣಿಗಳು ಪದೇ ಪದೇ ನಾಡಿಗೆ ಬರುತ್ತಿದ್ದರೂ ಕೂಡ ಅರಣ್ಯಾಧಿಕಾರಿಗಳು ಮೌನವಹಿಸಿದ್ದಾರೆ ಎಂದ ಆಕ್ರೋಶ ವ್ಯಕ್ತಪಡಿಸಿರುವ ಜನರು ಉಪಟಳ ನೀಡುತ್ತಿರುವ ಚಿರತೆಯನ್ನು ಶೀಘ್ರದಲ್ಲೇ ಸೆರೆ ಹಿಡಿಯಬೇಕು ಎಂದು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಕೆಲವು ರೈತರು ಕೂಡ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, ಅಪಾರ ಪ್ರಮಾಣದ ಬೆಳೆಗಳು ಕಾಡು ಪ್ರಾಣಿಗಳ ಪಾಲಾಗಿವೆ. ಇನ್ನಾದರೂ ಸರ್ಕಾರ ಕಾಡು ಪ್ರಾಣಿಗಳಿಂದ ರಕ್ಷಣೆಗೆ ಮುಂದಾಗಬೇಕಿದೆ.
ಇದನ್ನೂ ಓದಿ: ಹಾಡಹಗಲೇ ಕೋಳಿ ಶೆಡ್ ಮೇಲೆ ದಾಳಿ ಮಾಡಿದ ಚಿರತೆ.. ನೂರಕ್ಕೂ ಹೆಚ್ಚು ನಾಟಿ ಕೋಳಿಗಳು ಸಾವು