ಕರ್ನಾಟಕ ವಿವಿಯಿಂದ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್; ಘಟಿಕೋತ್ಸವದಲ್ಲಿ ಗೌನ್ ಇಲ್ಲ, ಖಾದಿ ಬಟ್ಟೆ ಕಡ್ಡಾಯ
Published : Oct 27, 2023, 5:54 PM IST
ಧಾರವಾಡ: ಅಕ್ಟೋಬರ್ 30ರಂದು ಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿಕೋತ್ಸವ ನಡೆಯಲಿದ್ದು, ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಹೇಳಿದರು. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ತತ್ವ ಪ್ರಸಾರದಲ್ಲಿ ಸಾಧನೆ ಮಾಡಿರುವ ಅರವಿಂದ ಜತ್ತಿ, ಆರೋಗ್ಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ ರವಿಶಂಕರ ಭೂಪಲಾಪೂರ ಹಾಗೂ ಸಮಾಜ ಸೇವೆಗಾಗಿ ಉದ್ಯಮಿ ಅರ್ಚನಾ ಸುರಾಣಾ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದರು.
ವಿವಿಧ ಕ್ಷೇತ್ರಗಳ 15 ಜನರ ಹೆಸರುಗಳನ್ನು ಕಳುಹಿಸಲಾಗಿತ್ತು. ಅದರಲ್ಲಿ ಮೂವರ ಹೆಸರನ್ನು ರಾಜ್ಯಪಾಲರು ಅಂತಿಮಗೊಳಿಸಿದ್ದಾರೆ. ಅ. 30ರಂದು ಬೆಳಿಗ್ಗೆ 10.30ಕ್ಕೆ ಕವಿವಿ ಗಾಂಧಿಭವನದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಭಾಗಿಯಾಗಲಿದ್ದಾರೆ. ಘಟಿಕೋತ್ಸವದಲ್ಲಿ 254 ಸ್ವರ್ಣ ಪದಕಗಳನ್ನು 109 ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುವುದು. 49 ಪಾರಿತೋಷಕ, 62 ಶಿಷ್ಯವೇತನ, 73 ರ್ಯಾಂಕ್ ಹಾಗೂ 265 ಪಿಹೆಚ್ಡಿ ಪದವಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಘಟಿಕೋತ್ಸವದಲ್ಲಿ ಖಾದಿ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದಿನಂತೆ ಯಾವುದೇ ಗೌನ್ ಹಾಕಿಕೊಳ್ಳುವ ಪದ್ಧತಿ ಇರುವುದಿಲ್ಲ ಎಂದರು.
ಇದನ್ನೂ ಓದಿ: ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕ ಇಸ್ರೇಲ್ನಲ್ಲಿ ಸೇಫ್, ಶೀಘ್ರವೇ ವಾಪಸ್: ಕುಲಪತಿ ಡಾ.ಪಿ.ಎಲ್.ಪಾಟೀಲ