ಆಯತಪ್ಪಿದ ಸೋಮಣ್ಣನನ್ನ ಹಿಡಿದೆತ್ತಿದ ಸುದೀಪ್: ಫ್ಯಾನ್ಸ್ ನೂಕುನುಗ್ಗಲು, ಪೊಲೀಸರಿಂದ ಲಾಠಿ ಚಾರ್ಜ್
ಚಾಮರಾಜನಗರ: ಕಳೆದ 15 ದಿನಗಳಿಂದ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿರುವ ಚಿತ್ರನಟ ಸುದೀಪ್ ಇಂದು ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ನಡೆಸಿದರು. ಮೈಸೂರು ಮೂಲಕ ಮೊದಲು ಗುಂಡ್ಲುಪೇಟೆಗೆ ಎಂಟ್ರಿ ಕೊಟ್ಟ ಕಿಚ್ಚ 15 ನಿಮಿಷ ರೋಡ್ ಶೋ ನಡೆಸಿ, ನಿರಂಜನಕುಮಾರ್ ಪರ ಮತಯಾಚಿಸಿದರು.
ಅಭಿಮಾನಿಗೆ ಎದೆಗೆ ಆಟೋಗ್ರಾಫ್: ಗುಂಡ್ಲುಪೇಟೆಯಲ್ಲಿ ನೆಚ್ಚಿನ ನಟನನ್ನು ಕಾಣಲು ಆಭಿಮಾನಿ ಸಮೂಹವೇ ನೆರೆದಿತ್ತು. ಈ ವೇಳೆ, ಪ್ರಚಾರ ವಾಹನ ಹತ್ತಿದ ಹೊಸೂರಿನ ಅಜಿತ್ ಕುಮಾರ್ ಎಂಬ ಅಭಿಮಾನಿ ಎದೆ ಮೇಲೆ ಸುದೀಪ್ ಆಟೋಗ್ರಾಫ್ ಹಾಕಿದರು.
ಆಯತಪ್ಪಿ ಬಿದ್ದ ಸೋಮಣ್ಣ: ಗುಂಡ್ಲುಪೇಟೆ ಪ್ರಚಾರದ ಬಳಿಕ ಚಾಮರಾಜನಗರಕ್ಕೆ ಎಂಟ್ರಿ ಕೊಟ್ಟ ಸುದೀಪ್, ಸೋಮಣ್ಣ ಪರ ಪ್ರಚಾರ ನಡೆಸಿದರು. ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಲ್ಲಿ ಸುದೀಪ್ ಅವರನ್ನು 5 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳು ಜಮಾಯಿಸಿ ಕಿಚ್ಚನಿಗೆ ಸ್ವಾಗತ ಕೋರಿದರು. ಪ್ರಚಾರದ ವೇಳೆ ಕಾರಿನ ಮೇಲೆ ನಿಂತಿದ್ದ ಸೋಮಣ್ಣ ಆಯತಪ್ಪಿ ಬೀಳುತ್ತಿದ್ದಾಗ ಸುದೀಪ್ ಕೈ ಹಿಡಿದೆತ್ತಿ ಅವಘಡ ತಪ್ಪಿಸಿದರು. ಬಳಿಕ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಯಳಂದೂರು ಮತ್ತು ಹನೂರಿನಲ್ಲಿ ಪ್ರಚಾರ ಕೈಗೊಂಡರು. ಕಿಚ್ಚನಿಗೆ ಕ್ರೇನ್ ಮೂಲಕ ಸೇಬು, ಹೂವಿನ ಹಾರಗಳನ್ನು ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ರುಚಿ ತೋರಿಸಿದರು.
ಇದನ್ನೂ ಓದಿ: ಗುಂಡ್ಲುಪೇಟೆಯಲ್ಲಿ ಸುದೀಪ್ ರೋಡ್ ಶೋ: ಮತಬೇಟೆಯಲ್ಲಿ 'ವೀರ ಮದಕರಿ' ಸಿನಿಮಾ ಡೈಲಾಗ್