ETV Bharat / sukhibhava

ಮಕರ ಸಂಕ್ರಾಂತಿ ಸಂಭ್ರಮ... ಹಬ್ಬದ ವಿಶೇಷತೆ ಹೆಚ್ಚಿಸುವ ಆರೋಗ್ಯಕರ ಆಹಾರ ಪದಾರ್ಥಗಳು ಯಾವವು ಗೊತ್ತಾ?

author img

By

Published : Jan 14, 2023, 11:11 AM IST

This Special healthy foods  healthy foods that add to the Makar Sankranti  Makar Sankranti festival  Makar Sankranti 2023  ಎಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ  ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸಲು ಪ್ರಾರಂಭ  ಹಬ್ಬದ ವಿಶೇಷ ಭಕ್ಷ್ಯಗಳ ವಿವರ ಇಲ್ಲಿದೆ  ಡಯೆಟರಿ ಪ್ರೊಟೀನ್ ಮತ್ತು ಅಮೈನೋ ಆಮ್ಲಗಳು ಹೇರಳ  ದೇಹಕ್ಕೆ ನೈಸರ್ಗಿಕ ಉಷ್ಣತೆ  ದೇಹದಲ್ಲಿನ ಒಳ್ಳೆಯ ಕೊಲೆಸ್ಟ್ರಾಲ್  ಸರ್ವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ  ಮಕರ ಸಂಕ್ರಾಂತಿ ಹಬ್ಬ 2023
ಸಂಕ್ರಾಂತಿ ಹಬ್ಬ

ಇಂದು ಎಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ.. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸಲು ಪ್ರಾರಂಭ.. ಹಬ್ಬದ ವಿಶೇಷ ಭಕ್ಷ್ಯಗಳ ವಿವರ ಇಲ್ಲಿದೆ..

ಮಕರ ಸಂಕ್ರಾಂತಿ ಹಬ್ಬವೂ ಸುಗ್ಗಿ ಆರಂಭವನ್ನು ಸೂಚಿಸುತ್ತದೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ವೇಳೆ ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಸಂಕ್ರಾಂತಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರ ವಿಳಕ್ಕು, ಕರ್ನಾಟಕದಲ್ಲಿ ಎಳ್ಳು- ಬೆಲ್ಲದ ಹಬ್ಬ (ಎಳ್ಳು ಬೀರುವುದು), ಗುಜರಾತ್‌ನಲ್ಲಿ ಉತ್ತರಾಯಣ, ಪಂಜಾಬ್‌ನಲ್ಲಿ ಮಾಘಿ, ಉತ್ತರ ಭಾರತದಲ್ಲಿ ಲೋಹ್ರಿ, ಅಸ್ಸೋಂನಲ್ಲಿ ಮಾಘ ಬಿಹು, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಭೋಗಿ ಎಂಬ ಹೆಸರಲ್ಲಿ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಆದರೆ, ಹಬ್ಬದ ಭಕ್ಷ್ಯಗಳ ತಯಾರಿಕೆಗೆ ಎಳ್ಳು, ಬೆಲ್ಲ, ಅಕ್ಕಿ, ಬೇಳೆಗಳು ಮತ್ತು ಡ್ರೈ ಫ್ರೂಟ್ಸ್​ಗಳನ್ನು ಎಲ್ಲೆಡೆ ಬಳಸಲಾಗುತ್ತದೆ. ಈ ಆಹಾರಗಳು ಚಳಿಯ ವಾತಾವರಣದಲ್ಲಿ ದೇಹಕ್ಕೆ ಶಾಖ ನೀಡುವುದಲ್ಲದೇ, ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.

ಈ ಹಬ್ಬದಂದು ಸೇವಿಸುವ ಆಹಾರಗಳು ದೇಹಕ್ಕೆ ನೈಸರ್ಗಿಕ ಉಷ್ಣತೆಯನ್ನು ನೀಡುತ್ತದೆ ಮತ್ತು ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆಲಸ್ಯ, ಶಕ್ತಿಯ ಕೊರತೆ ಇತ್ಯಾದಿಗಳಂತಹ ಶೀತ ವಾತಾವರಣದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂಬುದು ಪೌಷ್ಟಿಕ ತಜ್ಞರ ಮಾತಾಗಿದೆ. ಕಲವು ಆಹಾರಗಳು ನಮಗೆ ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ ಬನ್ನಿ..

ಎಳ್ಳಿನ ಮಹತ್ವ ಏನು: ಎಳ್ಳಿನಲ್ಲಿ ಡಯೆಟರಿ ಪ್ರೊಟೀನ್ ಮತ್ತು ಅಮೈನೋ ಆಮ್ಲಗಳು ಹೇರಳವಾಗಿದ್ದು, ಇದು ಸ್ನಾಯು ಮತ್ತು ಮೂಳೆಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ವೈದ್ಯರು. ಎಳ್ಳು ಉಷ್ಣ ಸಾಮರ್ಥ್ಯ ಹೊಂದಿದೆ ಮತ್ತು ಇದು ಸೆಸಮಿನ್ ಎಂಬ ಉತ್ಕರ್ಷಣ ನಿರೋಧಕ ಹೊಂದಿರುತ್ತದೆ. ಇದಲ್ಲದೇ, ಫೈಬರ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸತು, ಸೆಲೆನಿಯಮ್, ಬಿ ಕಾಂಪ್ಲೆಕ್ಸ್ ಸೇರಿದಂತೆ ಸಾಕಷ್ಟು ಪೋಷಕಾಂಶಗಳು ಎಳ್ಳಿನಲ್ಲಿ ಕಂಡುಬರುತ್ತವೆ.

ಎಳ್ಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಿನ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟದ್ದನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಹೃದಯ ರೋಗಗಳ ಅಪಾಯ ಕಡಿಮೆ ಮಾಡುತ್ತದೆ. ಇದಲ್ಲದೆ, ಎಳ್ಳು ಹಸಿವನ್ನು ಹೆಚ್ಚಿಸುತ್ತದೆ. ಎಳ್ಳಿನಲ್ಲಿ ಕಪ್ಪು ಮತ್ತು ಬಿಳಿ ಎಳ್ಳು ಎಂದು ಎರಡು ವಿಧಗಳಿವೆ. ಈ ಎರಡೂ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ವಿಶೇಷವಾಗಿ ಬೆಲ್ಲದೊಂದಿಗೆ ಇದರ ಸೇವನೆಯು ಆರೋಗ್ಯಕರ ಎಂದು ಪರಿಗಣಿಸಲಾಗಿದೆ.

ಬೆಲ್ಲದ ಪ್ರಯೋಜನವೇನು?: ಬೆಲ್ಲವು ಆರೋಗ್ಯ ಪ್ರಯೋಜನಗಳ ನಿಧಿಯಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ಇದರ ಸೇವನೆಯು ದೇಹಕ್ಕೆ ನೈಸರ್ಗಿಕ ಶಾಖವನ್ನು ಒದಗಿಸಲು ಸಹಾಯ ಮಾಡುತ್ತದೆ. ಬೆಲ್ಲದಲ್ಲಿ ಜೀವಸತ್ವಗಳು, ಕಬ್ಬಿಣ ಮತ್ತು ಖನಿಜಗಳು ಹೇರಳವಾಗಿ ಕಂಡು ಬರುತ್ತವೆ. ಹೀಗಾಗಿ ಇದು ದೇಹಕ್ಕೆ ಸರಿಯಾದ ಪೋಷಣೆಯನ್ನು ಒದಗಿಸುವುದರ ಜೊತೆಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ಜೀರ್ಣಾಂಗ ವ್ಯವಸ್ಥೆಗೆ ಕೂಡ ಒಳ್ಳೆಯದು ಮತ್ತು ಈ ಋತುವಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಗಂಟಲು ಮತ್ತು ಶ್ವಾಸಕೋಶದ ಸೋಂಕು ತಡೆಗಟ್ಟಲು ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಇದರಲ್ಲಿ ಕಂಡು ಬರುವ ಕೆಲವು ಖನಿಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಖರ್ಜೂರ ಬಳಸೋದೇಕೆ?: ಈ ಹಬ್ಬಕ್ಕೆ ತಯಾರಿಸಲಾದ ಅನೇಕ ಸಿಹಿತಿಂಡಿಗಳಲ್ಲಿ ಡ್ರೈ ಫ್ರೂಟ್ಸ್​ಗಳಲ್ಲಿ ಒಂದಾದ ಖರ್ಜೂರ ಅನ್ನು ಸಹ ಬಳಸಲಾಗುತ್ತದೆ. ಖರ್ಜೂರವು ಪೊಟ್ಯಾಸಿಯಮ್‌ನ ಪ್ರಮುಖ ಮೂಲವಾಗಿದೆ, ಇದು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದಲ್ಲದೇ, ಆಂಟಿ ಆಕ್ಸಿಡೆಂಟ್‌ಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಇತ್ಯಾದಿಗಳು ಇದರಲ್ಲಿ ಕಂಡುಬರುತ್ತವೆ. ಹೀಗಾಗಿ ಇದು ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

ಗಂಜಿ ಅಥವಾ ಕಿಚಡಿ: ಭಾರತದಲ್ಲಿ ಸಾಮಾನ್ಯವಾಗಿ ಖಿಚಡಿ ಎಂದು ಕರೆಯಲ್ಪಡುವ ಕಪ್ಪು ಉದ್ದು ಹಾಗೂ ಅಕ್ಕಿಯಿಂದ ಮಾಡಿದ ಗಂಜಿ ಸರಳ ಭಕ್ಷ್ಯವಾಗಿದೆ. ಇದನ್ನು ವಿವಿಧ ರೀತಿಯಲ್ಲಿ ತಯಾರಿಸಬಹುದು, ಆದರೆ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಇದನ್ನು ಸಾಮಾನ್ಯವಾಗಿ ಕಪ್ಪು ಅಥವಾ ಹಸಿರು ಬೇಳೆಯಿಂದ ಸಿಹಿ ಗಂಜಿ ತಯಾರಿಸಲಾಗುತ್ತದೆ. ಇದರೊಂದಿಗೆ ತರಕಾರಿಗಳು ಮತ್ತು ಇತರ ಪದಾರ್ಥಗಳನ್ನು ಸೇರಿಸಿದರೂ ಕೂಡ ಹೆಚ್ಚು ಆರೋಗ್ಯಕರವಾಗಿಸುತ್ತದೆ. ಪ್ರೋಟೀನ್, ಕೊಬ್ಬು, ಕಬ್ಬಿಣ, ಫೋಲಿಕ್ ಆಮ್ಲ, ಜೀವಸತ್ವಗಳು, ಖನಿಜಗಳು ಮತ್ತು ನಾರಿನಾಂಶಗಳು ಕಿಚಡಿಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಮತ್ತು ದೇಹವನ್ನು ಪೋಷಿಸಲು ಸಹಾಯ ಮಾಡುತ್ತದೆ. ಇದು ಜೀರ್ಣವಾಗಲು ಸುಲಭ ಮತ್ತು ಒಂದು ಚಮಚ ತುಪ್ಪ ಸೇರಿಸಿದರೆ, ಇದು ಇನ್ನಷ್ಟು ರುಚಿಕರವಾಗಿರುತ್ತದೆ. ತುಪ್ಪ ಪ್ರತ್ಯೇಕವಾಗಿ ಒಂದು ಘಟಕಾಂಶವಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ಕೀಲು ನೋವನ್ನು ನಿವಾರಿಸುತ್ತದೆ.

ಶೇಂಗಾ ಅಥವಾ ನೆಲಗಡಲೆ ಉಪಯೋಗವೇನು?: ಕಡಲೆಕಾಯಿ, ಶೇಂಗಾ ಅಥವಾ ನೆಲಗಡಲೆಯು ಉಷ್ಣದ ಸಾಮರ್ಥ್ಯ ಹೊಂದಿದ್ದು, ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಅವುಗಳಲ್ಲಿರುವ ನೈಸರ್ಗಿಕ ಎಣ್ಣೆ ಮತ್ತು ಪೋಷಕಾಂಶಗಳು ದೇಹವನ್ನು ಪೋಷಿಸುತ್ತದೆ. ಶೇಂಗಾದಲ್ಲಿ ವಿಟಮಿನ್​​ಗಳು, ಖನಿಜಾಂಶಗಳು, ಪೋಷಕಾಂಶಗಳು ಮತ್ತು ಆ್ಯಂಟಿ ಆಕ್ಸಿಡೆಂಟ್​​ಗಳು ಹೇರಳವಾಗಿದ್ದು, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್, ನಿಯಾಸಿನ್, ರೈಬೋಫ್ಲಾವಿನ್, ಥಯಾಮಿನ್, ವಿಟಮಿನ್ ಬಿ6, ವಿಟಮಿನ್ ಬಿ9 ಮತ್ತು ಪ್ಯಾಂಟೊಥೆನಿಕ್ ಆಮ್ಲವಿದೆ. ಶೇಂಗಾ ಸೇವನೆಯಿಂದ ಮಲಬದ್ಧತೆ ಸೇರಿದಂತೆ ಜೀರ್ಣದ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಅಲ್ಲದೆ, ಇದರ ಸೇವನೆಯು ಮಹಿಳೆಯರಿಗೆ ಹೆಚ್ಚು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕಡಲೆಯನ್ನು ಬೆಲ್ಲದೊಂದಿಗೆ ಸೇವಿಸಿದಾಗ ಪೋಷಕಾಂಶಗಳು ದ್ವಿಗುಣಗೊಳ್ಳುತ್ತವೆ.

ತುಪ್ಪದ ಮಹತ್ವವೇನು?: ಮಕರ ಸಂಕ್ರಾಂತಿ ಸಮಯದಲ್ಲಿ ಹೆಚ್ಚಿನ ಭಕ್ಷ್ಯಗಳನ್ನು ಕಿಚಡಿ, ಲಡ್ಡು ಮತ್ತು ಇತರ ಸಿಹಿತಿಂಡಿಗಳನ್ನು ತುಪ್ಪದಲ್ಲಿ ತಯಾರಿಸಲಾಗುತ್ತದೆ. ತುಪ್ಪ ಮತ್ತು ಎಣ್ಣೆ ಎರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ, ಸೂಕ್ತ ಪ್ರಮಾಣದಲ್ಲಿ ತುಪ್ಪವು ಪ್ರಯೋಜನಕಾರಿಯಾಗಿದೆ. ತುಪ್ಪವು ವಿಟಮಿನ್ ಎ ಮತ್ತು ಡಿ ಯ ಮುಖ್ಯ ಮೂಲಗಳಲ್ಲಿ ಒಂದಾಗಿದೆ ಮತ್ತು ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗೆ ಹಬ್ಬದ ಜೊತೆ ಆರೋಗ್ಯಕರವಾದ ಭಕ್ಷ್ಯವನ್ನು ಸವಿದು ಸಂಭ್ರಮಿಸಿ... ಎಲ್ಲ ಓದುಗರಿಗೂ ಈಟಿವಿ ಭಾರತ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು..

ಓದಿ: ಶಬರಿಮಲೆಯಲ್ಲಿ ಇಂದು ಸಂಜೆ ಮಕರಜ್ಯೋತಿ ದರ್ಶನ... ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಭಕ್ತ ಸಾಗರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.