ಯಾದಗಿರಿ : ರೈತರ ಜೀವನಾಧಾರವಾದ ಎತ್ತುಗಳ ಮೈ ತೊಳೆದು ಅವುಗಳನ್ನು ಅಲಂಕಾರಗೊಳಿಸಿ ನಂತರ ಆ ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಸುಗ್ಗಿ ಹಬ್ಬವಾದ ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಜಿಲ್ಲೆಯ ರೈತರು ಆಚರಿಸಿದರು.
ಪ್ರತಿ ವರ್ಷದಂತೆ ರೈತರ ಹಬ್ಬ ಎಂದೇ ಕರೆಯಲ್ಪಡುವ ಕಾರ ಹುಣ್ಣಿಮೆಯನ್ನು ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ರೈತರು ಅದ್ದೂರಿಯಾಗಿ ಆಚರಿಸಿದರು. ಎತ್ತುಗಳನ್ನು ದೇವರ ಭಾವದಲ್ಲಿ ನೋಡುವ ರೈತರು ಅವುಗಳ ಮೈಮೇಲೆ ಬಣ್ಣದ ಚಿತ್ರಗಳನ್ನು ಬಿಡಿಸಿ ಅವುಗಳಿಗೆ ಪೂಜೆ ಸಲ್ಲಿಸಿದರು. ಎತ್ತಿನ ದಂಡೆಗೂ ಅಲಂಕರಿಸಿ ನಂತರ ಮನೆಯಲ್ಲಿ ಕರಿಗಡುಬು ಹೋಳಿಗೆ ಸೇರಿ ಅನೇಕ ಸಿಹಿ ಪದಾರ್ಥಗಳನ್ನು ಮಾಡಿ ಅದರ ಸವಿಯನ್ನ ಸವೆದರು.
ಪ್ರತಿ ವರ್ಷ ಗ್ರಾಮದ ಬಸವಣ್ಣ ದೇವಸ್ಥಾನದ ಎದುರುಗಡೆ ಸಗರ ಗ್ರಾಮ ಸೇರಿ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನ ಸೇರಿ ಎತ್ತುಗಳ ಓಟದ ಸ್ಪರ್ಧೆ ಏರ್ಪಡಿಸುವ ಮೂಲಕ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಹಿನ್ನೆಲೆ ಸರ್ಕಾರದ ಆದೇಶ ಪಾಲನೆಗಾಗಿ ಗ್ರಾಮದ ಹಿರಿಯರ ಮಾರ್ಗದರ್ಶನದಂತೆ ಸಾಂಕೇತಿಕವಾಗಿ ಕಾರಹುಣ್ಣಿಮೆ ಆಚರಿಸಿದರು.
ಎತ್ತುಗಳನ್ನು ಬಸವಣ್ಣ ದೇವರು ಅಂತಾ ನಂಬಿಕೆ ಹೊಂದಿರುವ ಇಲ್ಲಿಯ ರೈತರು, ಹಬ್ಬದ ಪ್ರಯುಕ್ತ ಕರಿ ಮತ್ತು ಬಿಳಿ ಎತ್ತುಗಳ ಓಟದ ಸ್ಪರ್ಧೆ ಏರ್ಪಡಿಸಿ ಓಟದಲ್ಲಿ ಗೆದ್ದ ಎತ್ತಿನ ಮಾರ್ಗಸೂಚನೆಯಂತೆ ಮುಂಗಾರು ಮತ್ತು ಹಿಂಗಾರು ಬೆಳೆ ಬಿತ್ತನೆ ಮಾಡುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಇದಕ್ಕೆ ಬ್ರೇಕ್ ನೀಡಿದೆ.