ಮುದ್ದೇಬಿಹಾಳ (ವಿಜಯಪುರ): ನಗರದ ಬನಶಂಕರಿ ವೃತ್ತದ ಬಳಿ ಹಲವು ವರ್ಷಗಳಿಂದ ಸುಸಲಾಬಾಯಿ ರಜಪೂತ ಹಾಗೂ ಬಾಬು ರಜಪೂತ ಎಂಬ ವೃದ್ಧ ದಂಪತಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಇತ್ತೀಚಿಗೆ ರಸ್ತೆ ಅಭಿವೃದ್ಧಿಗಾಗಿ ಇವರ ಗುಡಿಸಲನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ಪಾತ್ರೆ, ಆಹಾರ ಸಾಮಗ್ರಿ, ಬಟ್ಟೆಯೊಂದಿಗೆ ಕಳೆದ ಹಲವು ದಿನಗಳಿಂದ ಬೀದಿಯಲ್ಲೇ ಜೀವನ ಸಾಗಿಸುತ್ತಿದ್ದರು. ವೃದ್ದ ಬಾಬು ರಜಪೂತ ಅವರಿಗೆ ಕಣ್ಣು ಕಾಣಿಸುವುದಿಲ್ಲ. ಇರಲು ತಲೆಮೇಲೊಂದು ಸೂರಿಲ್ಲದೆ ಈ ಬಡ ಕುಟುಂಬ ಕೊರೆಯುವ ಚಳಿಯಲ್ಲೇ ಕಷ್ಟಕರ ಜೀವನ ನಡೆಸುತ್ತಿತ್ತು.
ಇದನ್ನು ಗಮನಿಸಿದ ಯುವಕರಾದ ಅಬ್ದುಲ್ ಮಜೀದ್ ಶಿರೋಳ, ವಿಲಾಸ ಮೇಲ್ಮನಿ ಎಂಬವರು ತಮ್ಮ ತಂಡದೊಂದಿಗೆ ಸೇರಿ ತಾತ್ಕಾಲಿಕವಾಗಿ ಶೆಡ್ಡು ನಿರ್ಮಾಣ ಮಾಡಿಕೊಡಲು ನಿರ್ಧರಿಸಿ, ಕಾರ್ಯರೂಪಕ್ಕೆ ತಂದಿದ್ದಾರೆ. ಇವರಿಗೆ ಅಫ್ತಾಬ್ ಮನಿಯಾರ, ರಾಮು ಪೂಜಾರಿ, ಮುಜಾಮಿಲ್ಲ, ಇರ್ಫಾನ್, ಫರ್ಹಾನ್, ಆಸಿಫ್, ಆಯಾಝ್, ಕೈಪ, ನೂರಮೇಸ್ತ್ರಿ, ಅಬ್ದುಲಸಲಾಮ್ ಮುಲ್ಲಾ ಮುಂತಾದ ಯುವಕರು ಸಾಥ್ ಕೊಟ್ಟಿದ್ದಾರೆ. ಈ ಕಾರ್ಯ ಇದೀಗ ಎಲ್ಲೆಡೆ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ : ಕಾರವಾರ: ಭಿಕ್ಷುಕರ ಕೈಹಿಡಿದು ನೆರವಿಗೆ ನಿಂತ ಮದರ್ ತೆರೆಸಾ ಸಂಸ್ಥೆ.. ಅಲೆದಾಟಕ್ಕೆ ಶಾಶ್ವತ ಮುಕ್ತಿ