ETV Bharat / state

ತಂದೆಗೆ ಚಿಕಿತ್ಸೆ ಕೊಡಿಸಲು ಬಂದು ಸಾವಿನ ಮನೆ ಸೇರಿದ ಮಗಳು: ಇಂಜೆಕ್ಷನ್ ಪಡೆದ ಮಹಿಳೆ ಕ್ಷಣಾರ್ಧದಲ್ಲೇ ಸಾವು ಆರೋಪ

author img

By

Published : Jun 20, 2023, 12:32 PM IST

Updated : Jun 20, 2023, 5:24 PM IST

karwar
ಇಂಜೆಕ್ಷನ್ ಪಡೆದು ಸಾವನಪ್ಪಿದ ಮಹಿಳೆ

ತಂದೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಹಿಳೆಯೊಬ್ಬರು ತನಗೆ ಆಗಾಗ ಕಾಡುತ್ತಿದ್ದ ಬೆನ್ನು ನೋವಿನ ಬಗ್ಗೆ ಹೇಳಿಕೊಂಡಿದ್ದೆ ಜೀವಕ್ಕೆ ಕುತ್ತು ತಂದಿದೆ. ವೈದ್ಯರ ಸಲಹೆ ಮೇರೆಗೆ ಆಕೆ ಇಂಜೆಕ್ಷನ್​ ಪಡೆಯುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ತಂದೆಗೆ ಚಿಕಿತ್ಸೆ ಕೊಡಿಸಲು ಬಂದು ಸಾವಿನ ಮನೆ ಸೇರಿದ ಮಗಳು

ಕಾರವಾರ (ಉತ್ತರ ಕನ್ನಡ): ಪಾರ್ಶ್ವವಾಯು ಪೀಡಿತ ತಂದೆಗೆ ಚಿಕಿತ್ಸೆ ಕೊಡಿಸಲು ಬಂದ ಮಹಿಳೆಯೋರ್ವಳು ತಾನು ಪಾರ್ಶ್ವವಾಯು ಬರದಂತೆ ಮುಂಚೆಯೇ ನೀಡುವ ಇಂಜೆಕ್ಷನ್ ಪಡೆದು ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿನ ಹಳಗಾದ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ. ಕೊಪ್ಪಳ ಮೂಲದ ಸ್ವಪ್ನ ರಾಯ್ಕರ್ (32) ಮೃತ ಮಹಿಳೆ.

ಘಟನೆಯ ವಿವರ: ಸ್ವಪ್ನ ಕುಟುಂಬದ ಜತೆ ಗೋವಾ ಹಾಗೂ ಉತ್ತರ ಕನ್ನಡ ಪ್ರವಾಸಕ್ಕಾಗಿ ಅವರು ಆಗಮಿಸಿದ್ದರು. ಗೋವಾದ ಕಾಮಾಕ್ಷಿ ದೇವಸ್ಥಾನಕ್ಕೆ ತೆರಳಿ ಸೋಮವಾರ ಕಾರವಾರಕ್ಕೆ ಆಗಮಿಸಿದ್ದರು. ಮಹಿಳೆಯ ತಂದೆಗೆ ಎರಡು ವರ್ಷದ ಹಿಂದೆ ಪ್ಯಾರಲಿಸಿಸ್ ಆಗಿದ್ದು ಹಳಗ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಈ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ ತಂದೆಯ ಆರೋಗ್ಯವನ್ನು ವೈದ್ಯರ ಬಳಿ ತೋರಿಸಲು ಮಹಿಳೆ ಮುಂದಾಗಿದ್ದಳು. ಇದೇ ವೇಳೆ ಆಕೆ ತನಗೆ ಆಗಾಗ ಕಾಡುತ್ತಿದ್ದ ಬೆನ್ನು ನೋವಿನ ಬಗ್ಗೆ ಹೇಳಿಕೊಂಡಿದ್ದಾಳೆ. ಈ ವೇಳೆ ಪ್ಯಾರಲಿಸಿಸ್​ಗೆ ಮುಂಜಾಗ್ರತೆಗಾಗಿ ಇಂಜೆಕ್ಷನ್ ತೆಗೆದುಕೊಳ್ಳಲು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ.

ವೈದ್ಯರ ಸೂಚನೆ ಮೇರೆಗೆ ಮಹಿಳೆ ಇಂಜೆಕ್ಷನ್ ಪಡೆದ ಒಂದೇ ನಿಮಿಷದಲ್ಲಿ ಕೂಗಿ ಕುಸಿದು ಬಿದ್ದಿದ್ದಳು. ತಕ್ಷಣ ಆಕೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಆದರೆ ಕುಸಿದುಬಿದ್ದ ವೇಳೆಯಲ್ಲಿಯೇ ಮಹಿಳೆಯ ಮೆದುಳು ನಿಷ್ಕ್ರಿಯವಾಗಿದ್ದು, ಆಕೆ ಮೃತಪಟ್ಟಿರುವುದಾಗಿ ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ.

ಮಹಿಳೆ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಸುಮ್ಮನೇ ಇಂಜೆಕ್ಷನ್ ತೆಗೆದುಕೊಂಡು ಸಾವು ತಂದುಕೊಂಡೆವು ಎಂದು ಕುಟುಂಬಸ್ಥರು ರೋದಿಸುತ್ತಿದ್ದರು. "ನನಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದೆ. ಬೆನ್ನು ನೋವು ಎಂದು ಮಗಳು ವೈದ್ಯರ ಬಳಿ ತೋರಿಸಿದಾಗ ವೈದ್ಯರು ಪ್ಯಾರಲಿಸಿಸ್ ಬರದಂತೆ ಮುಂಚೆಯೇ ಚುಚ್ಚುಮದ್ದು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ ನನ್ನ ಮಗಳು ಇಂಜೆಕ್ಷನ್​ ಕೊಡುತ್ತಿದ್ದಂತೆ ಪಪ್ಪಾ ಎಂದು ಹೇಳಿ ಕುಸಿದು ಬಿದ್ದಳು. ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ವೈದ್ಯರೇ ಇಂಜೆಕ್ಷನ್ ತೆಗೆದುಕೊಳ್ಳಿ ಎಂದು ಹೇಳಿದ್ದರು. ನಂತರ ಅವರೇ ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ತಂದಿದ್ದಾರೆ" ಎಂದು ಮೃತ ಮಹಿಳೆಯ ತಂದೆ ಕೇಶವ ಪಾವಸ್ಕರ್ ತಿಳಿಸಿದ್ದಾರೆ.

ಸ್ವಪ್ನ ರಾಯ್ಕರ್ ಅವರಿಗೆ ವೈದ್ಯರು ಯಾವುದೇ ಸಮಸ್ಯೆ ಇಲ್ಲದಿದ್ದರು ಇಂಜೆಕ್ಷನ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದರಿಂದ ತೆಗೆದುಕೊಂಡು ಮೃತಪಟ್ಟಿದ್ದಾರೆ. ಈ ಹಿಂದೆ ಸಹ ತಾನು ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದೆ. ಪ್ಯಾರಲಿಸಿಸ್​ಗೆ ಸರಿಯಾದ ಚಿಕಿತ್ಸೆ ಕೊಡುವುದಾದರೆ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ಕೊಡುವ ಚಿಕಿತ್ಸೆ ಎಲ್ಲಾ ಆಸ್ಪತ್ರೆಯಲ್ಲೂ ಕೊಡುವಂತೆ ಆಗ್ರಹಿಸಿದ್ದೆ. ಆದರೆ ಯಾರು ಕ್ರಮ ಕೈಗೊಂಡಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಿಲ್ಲದಿದ್ದರೇ ಬಂದ್ ಮಾಡುವಂತೆ ಆಗ್ರಹಿಸಿದ್ದರೂ ಕ್ರಮ ಕೈಗೊಂಡಿಲ್ಲ. ಮಹಿಳೆ ಸಾವಿಗೆ ಜಿಲ್ಲಾಡಳಿತವೂ ಕಾರಣವಾಗಲಿದ್ದು, ಈಗಲಾದರು ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಮಾಧವ ನಾಯಕ ಎಂಬುವವರು ಆಗ್ರಹಿಸಿದ್ದಾರೆ. ಆಸ್ಪತ್ರೆಗೆ ಕದ್ರಾ ಸಿಪಿಐ ಗೋವಿಂದ ದಾಸರಿ, ಚಿತ್ತಾಕುಲ ಠಾಣಾ ಪಿ.ಎಸ್.ಐ ಮಹಾಂತೇಶ್ ಬಿ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಆಸ್ಪತ್ರೆ ಆಡಳಿತಾಧಿಕಾರಿ ಲೆಸ್ಸಿ ಮಾತನಾಡಿ, ನಿನ್ನೆ ಸ್ವಪ್ನ ಎಂಬವರು ಆಸ್ಪತ್ರೆಗೆ ಬಂದಿದ್ದರು. ಅವರು ಸೊಂಟ ಹಾಗೂ ಕಾಲು ನೋವಿರುವ ಬಗ್ಗೆ ವೈದ್ಯರ ಬಳಿ ಸಲಹೆ ಕೇಳಿದ್ದರು. ಇವರ ಜೊತೆಗೆ ತಂದೆ, ತಾಯಿ ಮತ್ತು ಪತಿಯೂ ಇದ್ದರು. ಬಳಿಕ ಸ್ವಪ್ನ ಅವರ ಬಿಪಿ, ಶುಗರ್ ಎಲ್ಲವನ್ನು ಪರೀಕ್ಷೆ ಮಾಡಿದ ವೈದ್ಯರು ಇಂಜೆಕ್ಷನ್​ ಬರೆದುಕೊಟ್ಟಿದ್ದರು. ಸ್ವಲ್ಪ ಹೊತ್ತಿನ ಬಳಿಕ ತಲೆ ಸುತ್ತು ಬಂದ ಹಿನ್ನೆಲೆ ತಕ್ಷಣ ಅವರನ್ನು ತಪಾಸಣೆ ನಡೆಸಿ, ಬಳಿಕ ತಮ್ಮದೇ ವಾಹನದಲ್ಲಿ ಹೆಚ್ಚಿನ ಚಿಕಿತ್ಸೆಗೆ ಹತ್ತಿರದ ಕಾರವಾರ ಮೆಡಿಕಲ್ ಕಾಲೇಜಿಗೆ ಕಳುಹಿಸಿಕೊಟ್ಟಿದ್ದೇವೆ ಎಂದರು. ಸಾವು ಹೇಗೆ ಸಂಭವಿಸಿದೆ ಎಂಬ ಬಗ್ಗೆ ಗೊತ್ತಿಲ್ಲ. ಕೆಲವರಿಗೆ ಈ ಇಂಜೆಕ್ಸನ್ ಹೊಂದಬಹುದು, ಇನ್ನೂ ಕೆಲವರಿಗೆ ಇಂಜೆಕ್ಷನ್​ ಹೊಂದುವುದಿಲ್ಲ ಎಂದು ಹೇಳಿದ್ದಾರೆ.

ಆರೋಗ್ಯಾಧಿಕಾರಿ ಅನ್ನಪೂರ್ಣ ವಸ್ತ್ರದ್ ಪ್ರತಿಕ್ರಿಯಿಸಿ, ಪ್ರಕರಣದ ಬಳಿಕ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಮಹಿಳೆಗೆ ಬಿ ಕಾಂಪ್ಲೆಕ್ಸ್ ಇಂಜೆಕ್ಷನ್ ನೀಡಲಾಗಿದೆ. ಈ ಬಗ್ಗೆ ವೈದ್ಯರಲ್ಲೂ ಮಾತನಾಡಿದ್ದೇನೆ. ಸರಿಯಾಗಿಯೇ ಇಂಜೆಕ್ಷನ್ ನೀಡಿರುವುದಾಗಿ ಹೇಳುತ್ತಿದ್ದಾರೆ. ಆದರೆ ಇಂಜೆಕ್ಷನ್​ ಕೊಟ್ಟ ಬಳಿಕ ಅವರು ಕುಸಿದು ಬಿದ್ದಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಸ್ಪಂದಿಸದೇ ಇದ್ದಾಗ ತಕ್ಷಣ ಮೆಡಿಕಲ್ ಕಾಲೇಜಿಗೆ‌ ಕಳುಹಿಸಿದ್ದಾರೆ.

ಮೇಲ್ನೋಟಕ್ಕೆ ವೈದ್ಯರು ಚಿಕಿತ್ಸೆ ನೀಡದೆ ನರ್ಸ್ ಇಂಜೆಕ್ಷನ್ ನೀಡಿರುವುದು ಕಂಡುಬರುತ್ತಿದೆ. ಈ ಬಗ್ಗೆ ಸಮಸ್ಯೆಯಾದ ಮೇಲೆ ಡಾಕ್ಟರ್ ಬಂದು ಚಿಕಿತ್ಸೆ ನೀಡಿರುವುದು ಕಂಡುಬರುತ್ತಿದೆ. ಈ ಬಗ್ಗೆ ತಜ್ಞ ವೈದ್ಯರ ಸಮಿತಿ ರಚನೆ ಮಾಡಿ ತನಿಖೆ ನಡೆಸಲಾಗುವುದು. ಬಳಿಕ ಮಹಿಳೆಯ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಹೇಳಿದರು.

ಇದನ್ನೂ ಓದಿ: ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಗು ಸಾವು: ವೈದ್ಯರ ವಿರುದ್ಧ ಪೋಷಕರ ಆಕ್ರೋಶ

Last Updated :Jun 20, 2023, 5:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.