ETV Bharat / state

ಅಂಗಡಿ ಬೀಗ ಮುರಿದು ಅಡಿಕೆ ಕಳ್ಳತನ: ಮೂವರು ಆರೋಪಿಗಳ ಬಂಧನ

author img

By

Published : Nov 21, 2022, 3:26 PM IST

three arrested for areca nut theft
ಅಂಗಡಿ ಬೀಗ ಮುರಿದು ಅಡಿಕೆ ಕಳ್ಳತನ: ಮೂವರ ಬಂಧನ

ಅಡಿಕೆ ಅಂಗಡಿ ಬೀಗ ಮುರಿದು ಸಂಗ್ರಹಿಸಿಡಲಾಗಿದ್ದ 5 ಕ್ವಿಂಟಾಲ್ ಅಡಿಕೆ ಕದ್ದೊಯ್ದ ಮೂವರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.

ಕಾರವಾರ(ಉತ್ತರ ಕನ್ನಡ): ಅಂಗಡಿಯಲ್ಲಿ ಸಂಗ್ರಹಿಸಿ ಇಡಲಾಗಿದ್ದ 5 ಕ್ವಿಂಟಾಲ್ ಅಡಿಕೆ ಕದ್ದೊಯ್ದ ಮೂವರನ್ನು ಹೊನ್ನಾವರ ಪೊಲೀಸರು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊನ್ನಾವರ ತಾಲೂಕಿನ ಸರಳಗಿಯ ವ್ಯಾಪಾರಿ ಅಬ್ದುಲ್ ರವೂಫ್ ಶಬ್ಬೀರ್ ಸಾಬ್ ಎಂಬವರಿಗೆ ಸೇರಿದ್ದ ಅಡಿಕೆ ಇದಾಗಿದೆ. ಬಂಧಿತ ಆರೋಪಿಗಳು ಅಡಿಕೆ ವ್ಯಾಪಾರಸ್ಥರಾಗಿದ್ದು, ಹಳದೀಪುರ ಪಳ್ಳಿಕೇರಿಯ ಇನಾಯತುಲ್ಲಾ ಅಬ್ದುಲ್ ಹಸನ್(26), ಮೊಹ್ಮದ್ ಹುಸೇನ್ ಅಬ್ದುಲ್ ರವೂಫ್ ಖಾನ್(21) ಮೊಹಮ್ಮದ್ ಗೌಸ್ ಖಾನ್(19) ಎಂದು ಗುರುತಿಸಲಾಗಿದೆ.

ಅಬ್ದುಲ್ ರವೂಫ್ ತಮ್ಮ ಅಂಗಡಿಯಲ್ಲಿ ಸುಮಾರು 2 ಲಕ್ಷ ಮೌಲ್ಯದ ಅಡಿಕೆಯನ್ನು 10 ಚೀಲದಲ್ಲಿ ದಾಸ್ತಾನು ಇರಿಸಿದ್ದರು. ಸೆಪ್ಟೆಂಬರ್ 18ರ ತಡರಾತ್ರಿ ಅಂಗಡಿಯ ಬೀಗ ಮುರಿದ ಕಳ್ಳರು ಅಡಿಕೆಯನ್ನು ಕದ್ದೊಯ್ದಿದ್ದರು. ಈ ಸಂಬಂಧ ಮಾಲೀಕ ಅಬ್ದುಲ್ ರವೂಫ್ ಸೆ.19 ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಆಪಾಧಿತರ ಪತ್ತೆ ಹಚ್ಚಲು ಪೊಲೀಸರು ವಿಶೇಷ ತಂಡವನ್ನು ರಚಿಸಿ ಇದೀಗ ಮೂವರನ್ನು ಬಂಧಿಸಿದ್ದಾರೆ. ಅಲ್ಲದೇ ಕಳ್ಳತನವಾಗಿದ್ದ ಎರಡು ಲಕ್ಷ ಮೌಲ್ಯದ 5 ಕ್ವಿಂಟಾಲ್ ಅಡಿಕೆಯನ್ನು ಹಾಗೂ ಆಪಾದಿತರು ಕಳವು ಮಾಡಲು ಉಪಯೋಗಿಸಿದ ಸುಮಾರು ಒಂದು ಲಕ್ಷ ಮೌಲ್ಯದ ಓಮ್ನಿಯನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಕಲಂ 454, 457, 380ರ ಅಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ ಎಸ್, ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ಹಾಗೂ ಹೊನ್ನಾವರ ಸಿಪಿಐ ಶ್ರೀಧರ ಎಸ್.ಆರ್ ಇವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಮಂಜೇಶ್ವರ ಚಂದಾವರ ಇವರ ತಂಡವು ಪ್ರಕರಣವನ್ನು ಬೇಧಿಸಿದ್ದಾರೆ. ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಸಾಯಿಖಾನೆಗೆ ಸಾಗಿಸುತ್ತಿದ್ದ 58 ಜಾನುವಾರು ರಕ್ಷಣೆ; 7 ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.