ETV Bharat / state

ತುಮಕೂರು: ಕೆರೆಗೆ ಬಿದ್ದ ಇಬ್ಬರು ಮಕ್ಕಳ ಪ್ರಾಣ ಉಳಿಸಿ ಕೊನೆಯುಸಿರೆಳೆದ ತಾಯಿ

author img

By

Published : Jul 3, 2023, 9:13 AM IST

ನದಿಯಲ್ಲಿ ಮುಳgಇ ಮಹಿಳೆ ಸಾವು
ನದಿಯಲ್ಲಿ ಮುಳgಇ ಮಹಿಳೆ ಸಾವು

ಕೆರೆಗೆ ಬಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿದ ತಾಯಿ ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು: ಕೆರೆಯಲ್ಲಿ ಮುಳುಗುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಬದುಕಿಸಿ ಈಜು ಬಾರದೇ ತಾಯಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ಭಾನುವಾರ ನಡೆದಿದೆ. ಮನು (30) ಮೃತಪಟ್ಟ ಮಹಿಳೆ.

ಸುದ್ದಿಯ ವಿವರ: ಮನು ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ದಡದಲ್ಲಿ ಆಟವಾಡುತ್ತಿದ್ದ ಮಕ್ಕಳು ಕೆರೆಗೆ ಜಾರಿ ಬಿದ್ದಿದ್ದಾರೆ. ಇದನ್ನು ಕಂಡ ತಾಯಿ ಕೆರೆಗೆ ಹಾರಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ ಈಜು ಬರದೇ ಅವರು ಸಾವನ್ನಪ್ಪಿದ್ದಾರೆ.‌ ಮಕ್ಕಳಿಗೆ ಶಿರಾ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರದಲ್ಲೂ ಇಂಥದ್ದೇ ಘಟನೆ ನಡೆದಿತ್ತು..: ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ತಾಯಿ ಹಾಗು ಇಬ್ಬರು ಮಕ್ಕಳು ಸಾವನ್ನಪ್ಪಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಖೇಡಗಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಗೀತಾ ಹೊನ್ನೂರ, ಮಕ್ಕಳಾದ ಶೋಭಿತಾ, ವಾಸುದೇವ ಮೃತಪಟ್ಟಿದ್ದರು. ಗೀತಾ ನದಿ ದಡದಲ್ಲಿ ಬಟ್ಟೆ ತೊಳೆಯುವಾಗ ಮಗ ವಾಸುದೇವ ನದಿಗಿಳಿದಿದ್ದ. ಈಜು ಬಾರದೆ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಇದನ್ನು ಕಂಡ ಸಹೋದರಿ ಶೋಭಿತಾ ತಮ್ಮನನ್ನು ಕಾಪಾಡಲು ನದಿಗಿಳಿದಿದ್ದಳು. ಇಬ್ಬರಿಗೂ ಈಜು ಬಾರದೆ ಮುಳುಗಲಾರಂಭಿಸಿದ್ದರು. ಗೀತಾ ಪ್ರಾಣ ಉಳಿಸಲು ನದಿಗಿಳಿದಿದ್ದು ಮೂವರೂ ನದಿ ಪಾಲಾಗಿದ್ದರು.

ಈಜಲು ಹೋದ ಬಾಲಕರು ನೀರುಪಾಲು: ಈಜಲು‌ ಹೋದ‌ ಬಾಲಕರಿಬ್ಬರು ಭೀಮಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋನಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿನ ನದಿಗೆ ಬಾಲಕರು ಈಜಲು ತೆರಳಿದ್ದರು. ಕಾಲು ಜಾರಿ ಓರ್ವ ನೀರು ಪಾಲಾಗುವಾಗ ಇನ್ನೋರ್ವ ರಕ್ಷಣೆಗೆ ಇಳಿದಿದ್ದ. ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ.

ಹಾವು ಕಚ್ಚಿ ರೈತ ಸಾವು: ಹೊಲದಲ್ಲಿ ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ರೈತನೊಬ್ಬ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ತುಮಕೂರಿನ ಮಧುಗಿರಿ ತಾಲೂಕಿನ ಕೊಡಿಗೆನಹಳ್ಳಿಯಲ್ಲಿ ನಡೆದಿದೆ. ಪೆದ್ದಯ್ಯ (45) ಮೃತರು. ಇವರಿಗೆ ನಾಗರಹಾವು ಕಚ್ಚಿದೆ ಎಂದು ತಿಳಿದುಬಂದಿದೆ. ಪಕ್ಕದ ಜಮೀನಿನಲ್ಲಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಜಯಪುರ: ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದ ತಾಯಿ, ಇಬ್ಬರು ಮಕ್ಕಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.