ETV Bharat / state

ಭದ್ರಾವತಿ ಲಾಡ್ಜ್​ನಲ್ಲಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

author img

By

Published : Jan 13, 2023, 8:39 PM IST

Updated : Jan 14, 2023, 6:24 PM IST

ಭದ್ರಾವತಿ ಲಾಡ್ಜ್​ನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಕೊಲೆ ಶಂಕೆ ವ್ಯಕ್ತಪಡಿಸಿದ ಮೃತನ ಪೋಷಕರು. ಆತ್ಮಹತ್ಯೆ ಎಂದು ಮಾಹಿತಿ ನೀಡಿದ ಮಹಿಳೆ.

Murder at Bhadravati Lodge
ಭದ್ರಾವತಿ ಲಾಡ್ಜ್​ನಲ್ಲಿ ಕೊಲೆ

ಶಿವಮೊಗ್ಗ: ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಭದ್ರಾವತಿ ಪಟ್ಟಣದ ಹೇರಿಟೇಜ್ ಲಾಡ್ಜ್​ನಲ್ಲಿ ಈ ಶವ ಪತ್ತೆಯಾಗಿದ್ದು ಪರ್ವೆಜ್ ಖಾನ್ (40) ಮೃತ ವ್ಯಕ್ತಿ. ಈತನ ಕುತ್ತಿಗೆ ಭಾಗದಲ್ಲಿ ಗಾಯವಾಗಿದ್ದು, ಕೊಲೆ ಮಾಡಲಾಗಿದೆ ಎಂದು ಮೃತರ ಸಂಬಂಧಿಕರು ದೂರಿದ್ದಾರೆ. ಮೃತ ಪರ್ವೆಜ್ ಖಾನ್ ಹಾಸನ ಜಿಲ್ಲೆ ಚನ್ನರಾಯನಪಟ್ಡಣ ಮೂಲದವರು ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾಡ್ಜ್ ಮ್ಯಾನೇಜರ್ ಭದ್ರಾವತಿಯ ಹಳೇ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಪರ್ವೆಜ್ ಹಾಗೂ ಓರ್ವ ಮಹಿಳೆ ರಾತ್ರಿ ಇಲ್ಲಿಗೆ ಬಂದು ಒಂದು ರೂಮ್​ ಅನ್ನು ಬಾಡಿಗೆ ಪಡೆದಿದ್ದರು. ಆದರೆ, ಬೆಳಗ್ಗೆ ಬಹಳ ಹೊತ್ತಾದರೂ ರೂಮ್​ನ ಬಾಗಿಲು ತೆಗೆಯದ ಕಾರಣ ಅನುಮಾನ ಬಂದಿತು. ಹಾಗಾಗಿ ಪೊಲೀಸರಿಗೆ ತಿಳಿಸಿ ಅವರ ಸಮ್ಮುಖದಲ್ಲಿಯೇ ಬಾಗಿಲು ತೆರೆದೆವು. ಈ ವೇಳೆ ಅಲ್ಲಿ ಪರ್ವಜ್ ಬೆತ್ತಲೆಯಾಗಿ ರಕ್ತದ ಮಡುವಿನಲ್ಲಿ ಮಲಗಿದ್ದು ಕಂಡು ಬಂದಿತು. ನಾವು ನೋಡಿದಾಗ ಆ ಮಹಿಳೆ ರೂಮ್​ನಲ್ಲಿ ಇರಲಿಲ್ಲ. ಇದರಿಂದ ಆ ಮಹಿಳೆ ಮೇಲೆ ಅನುಮಾನ ವ್ಯಕ್ತವಾಗಿದೆ ಎಂದು ಲಾಡ್ಜ್ ಮ್ಯಾನೇಜರ್​ ತಮ್ಮ ದೂರು ಪ್ರತಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ದೂರಿನ ಅನ್ವಯ ಹಳೆ ನಗರ ಪೊಲೀಸರು ಮೃತ ಪರ್ವೆಜ್ ಖಾನ್ ಅವರ ಸಂಬಂಧಿಕರನ್ನು ಪತ್ತೆ ಹಚ್ಚಿ ಲಾಡ್ಜ್​ಗೆ ಕರೆತಂದಿದ್ದರು. ಮೃತನ ಕುಟುಂಬಸ್ಥರು ಬಂದು ವ್ಯಕ್ತಿಯನ್ನು ಗುರುತಿಸಿದ್ದಾರೆ. ಅಲ್ಲದೇ ನಮ್ಮ ಹುಡುಗನನ್ನು ಆ ಮಹಿಳೆಯೇ ಕೊಲೆ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಸದ್ಯ ಆ ಮಹಿಳೆ ಪೊಲೀಸರ ವಶದಲ್ಲಿದ್ದಾಳೆ.

ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಈಗಾಗಲೇ ಆ ಮಹಿಳೆಯನ್ನು ವಶಕ್ಕೆ ಪಡೆದಿದ್ದೇವೆ. ವಿಚಾರಣೆ ಸಹ ನಡೆಸಲಾಗುತ್ತಿದೆ. ಆಕೆಯ ವಿಚಾರಣೆ ಮುಗಿದ ನಂತರ ಈ ಬಗ್ಗೆ ನಿಖರ ಮಾಹಿತಿ ಒದಗಿಸುವುದಾಗಿ ಎಸ್​ಪಿ ಮಿಥುನ್ ಕುಮಾರ್ ಅವರು ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಹಾಸನದ ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆ: ಪರ್ವೆಜ್ ಖಾನ್ ಜೊತೆ ರಾತ್ರಿ ಭದ್ರಾವತಿಯ ಹೇರಿಟೇಜ್ ಲಾಡ್ಜ್​ನಲ್ಲಿದ್ದ ಆ ಮಹಿಳೆ ಬೆಳಗ್ಗೆ ನೇರವಾಗಿ ಹಾಸನದ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಅಲ್ಲದೇ ಭದ್ರಾವತಿ ಲಾಡ್ಜ್​ನಲ್ಲಿ ಪರ್ವೆಜ್ ಖಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾಳೆ. ಮಹಿಳೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಹಾಸನದ ಪೊಲೀಸರು ತಕ್ಷಣ ಭದ್ರಾವತಿಯ ಪೊಲೀಸರನ್ನು ಸಂಪರ್ಕಿಸಿ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಬಳಿಕವೇ ಕೊಲೆಯಾದ ಸ್ಥಿತಿಯಲ್ಲಿ ಪರ್ವೆಜ್ ಖಾನ್ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಬಡತನ, ಸಾಲಕ್ಕೆ ಹೆದರಿ ಪಾರ್ಶ್ವವಾಯು ಪುತ್ರನೊಂದಿಗೆ ದಂಪತಿ ಆತ್ಮಹತ್ಯೆ..

ಪ್ರತ್ಯೇಕ ಪ್ರಕರಣ: ಶಿವಮೊಗ್ಗದಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ಇಂದು ನಡೆದಿದೆ. ಮಗನ ಪಾರ್ಶವಾಯು ಕಾಯಿಲೆಗೆ ಮತ್ತು ಬಡತನ ಹೊರೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ನಗರದ ಅಣ್ಣನಗರದ ಮೊದಲನೇ ತಿರುವಿನಲ್ಲಿ ಘಟನೆ ನಡೆದಿದೆ. ಅಣ್ಣನಗರದ ಬಾಡಿಗೆ ಮನೆಯಲ್ಲಿ ಪರದಾಮಯ್ಯ(65), ದಾನಮ್ಮ(58) ಹಾಗೂ ಮಂಜುನಾಥ್(25) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಳಗ್ಗೆ 12 ಗಂಟೆಯಾದರೂ ಸಹ ಮನೆ ಬಾಗಿಲು ತೆರೆಯದೇ ಹೋದಾಗ ಪಕ್ಕದ ಮನೆಯ ಜಯಮ್ಮ ಎಂಬುವರು ದಾನಮ್ಮನವರ ಮನೆ ಬಾಗಿಲು ನೂಕಿದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಮಗ ಅಡುಗೆ ಮನೆಯಲ್ಲಿ ಅಸ್ವಸ್ಥರಾಗಿದ್ದ ಮಂಜುನಾಥ್ ಬಿದ್ದಿರುವುದು ಕಂಡುಬಂದಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಂಜುನಾಥ್​ಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಕಳೆದ ಎರಡು ದಿನಗಳ ಹಿಂದೆ ಮನೆ ಮಾಲೀಕ ಬಂದು ಮನೆ ಬಾಡಿಗೆ ನೀಡುವಂತೆ ಜೋರು ಮಾಡಿ ಹೋಗಿದ್ದರು. ಇದರಿಂದಲೇ ಬೇಸತ್ತು ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಷಯ ತಿಳಿದ ಕೂಡಲೇ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಮನೆಯ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಂಬಂಧಿಕರಿಗೆ ಶವಗಳನ್ನು ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆ: ಆರು ತಿಂಗಳ ಬಳಿಕ ತಾಯಿಗೆ ಉರುಳಾದ ಮಕ್ಕಳ ಹೇಳಿಕೆ

Last Updated :Jan 14, 2023, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.