ETV Bharat / state

ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು: ಕಿಮ್ಮನೆ ರತ್ನಾಕರ್ ಆಗ್ರಹ

author img

By

Published : Jan 12, 2023, 5:05 PM IST

Updated : Jan 12, 2023, 9:58 PM IST

kimmane-ratnakar
ಕಿಮ್ಮನೆ ರತ್ನಾಕರ್

ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಮೊದಲನೇ ಆರೋಪಿ ಆರಗ ಜ್ಞಾನೇಂದ್ರ ಬಳಿಕ ಎರಡನೇ ಆರೋಪಿ ಸ್ಯಾಂಟ್ರೋ ರವಿ ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.

ಆರಗ ಜ್ಞಾನೇಂದ್ರ ವಿರುದ್ಧ ರತ್ನಾಕರ್ ಆರೋಪ

ಶಿವಮೊಗ್ಗ: ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಮೊದಲನೇ ಆರೋಪಿ. ಅವರ ರಾಜೀನಾಮೆಯನ್ನು ಸಿಎಂ ಪಡೆಯಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ. ಇಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಮೊದಲ ಆರೋಪಿ ರವಿ ಅಲ್ಲ, ಗೃಹ ಸಚಿವ ಆರಗ ಜ್ಞಾನೇಂದ್ರ. ಬಳಿಕ ಎರಡನೇ ಆರೋಪಿ ಸ್ಯಾಂಟ್ರೋ ರವಿ ಆಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಸ್ಯಾಂಟ್ರೋ ರವಿ ತೀರ್ಥಹಳ್ಳಿಗೆ ನಾಲ್ಕೈದು ಭಾರಿ ಬಂದಿದ್ದಾನೆ. ಅವರಿಗೆ ಆರಗ ಜ್ಞಾನೇಂದ್ರ ಅವರ ಮಗನೇ ದಾರಿ ತೋರಿಸಿದ್ದಾನೆ.

ಆರಗ ಜ್ಞಾನೇಂದ್ರ ಅವರ ರಾಜೀನಾಮೆ ಪಡಿಯಲಿ: ಇದರಿಂದ ನಾನು ಮಾಧ್ಯಮಗಳ ಮೂಲಕ ಸಿಎಂಗೆ ಒತ್ತಾಯ ಮಾಡುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ರಾಜೀನಾಮೆ ಪಡೆಯಬೇಕು. ಇಲ್ಲವಾದಲ್ಲಿ ಗೃಹ ಸಚಿವರೇ ರಾಜೀನಾಮೆ ನೀಡಬೇಕು. ಅಲ್ಲದೇ ಆರಗ ಜ್ಞಾನೇಂದ್ರ ಅವರ ಮೇಲೆ ಕೇಸ್ ದಾಖಲಿಸಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಎಂಪಿಎಂ ಹಾಗೂ ಸ್ಯಾಂಟ್ರೋ ರವಿ ವಿಚಾರದಲ್ಲಿ ರಾಜ್ಯಪಾಲರು ಗೃಹ ಸಚಿವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಗೃಹ ಸಚಿವರಿಗೆ ರತ್ನಾಕರ್​ ಸವಾಲು: ಮುಂದುವರಿದು ಮಾತನಾಡಿ, ನನ್ನ ಮೇಲೆ ಆಪಾದನೆ ಮಾಡಿದರೆ ಚುನಾವಣೆ ಗೆಲ್ಲಬಹುದು ಎಂದು ಕೊಂಡಿದ್ದಾರೆ. ನನ್ನ ಮೇಲೆ ಯಾವುದೇ ಆರೋಪಗಳಿದ್ದರೆ, ಆರಗ ಜ್ಞಾನೇಂದ್ರ ಹಾಗೂ ಅವರ ಅಣ್ಣ ಅಮಿತ್​ ಶಾ, ನನ್ನ ವಿರುದ್ಧ ಸಿಬಿಐಗೆ ದೂರು ನೀಡಲಿ ಎಂದು ಸವಾಲು ಹಾಕಿದರು. ಬಿಜೆಪಿ ಅವರು ಚುನಾವಣೆ ಸಂದರ್ಭದಲ್ಲಿ ಕೋಮುಗಲಭೇ ಸೃಷ್ಠಿ ಮಾಡುವ ಕೆಟ್ಟ ತತ್ವವನ್ನು ಹೊಂದಿದ್ದು, ದೇಶದ ಜನರನ್ನು ಮಂಗನನ್ನಾಗಿ ಮಾಡುತ್ತಿದ್ದಾರೆ. ಪಿಎಸ್​ಐ ಹಗರಣ ಮತ್ತು ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಮೊದಲನೇ ಆರೋಪಿ ಆರಗ ಜ್ಞಾನೇಂದ್ರ ಎಂದು ಕಿಮ್ಮನೆ ರತ್ನಾಕರ್​ ಆರೋಪಿಸಿದರು.

’ಗೃಹ ಸಚಿವರ ಅಕ್ಕನ ಮಗನೇ ಎಲ್ಲ ಕಾಮಗಾರಿ ಮಾಡ್ತಿದ್ದಾರೆ’: ಹೊಸನಗರದ ತಾಲೂಕಿನದ್ಯಾಂತ ಲೋಕೋಪಯೋಗಿ ಇಲಾಖೆಯಲ್ಲಿ ಗೃಹ ಸಚಿವರ ಅಕ್ಕನ ಮಗನೇ ಎಲ್ಲಾ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಬೆರೆಯವರಿಗೆ ಇದರಲ್ಲಿ ಕಾಂಟ್ರ್ಯಾಕ್ಟ್​ ಇಲ್ಲ. ಇದೆಲ್ಲ ಯಾಕೆ ಹೊರಗೆ ಬರುತ್ತಿಲ್ಲ? ಇದರ ಬಗ್ಗೆ ತನಿಖೆ ನಡೆಯಲಿ ಎಂದರು. ತೀರ್ಥಹಳ್ಳಿಯಲ್ಲಿ ಟೆಂಡರ್ ಆದವರು ಸಹ ಇವರಿಗೆ ಕಮಿಷನ್ ನೀಡಬೇಕಾಗಿದೆ. ತೀರ್ಥಹಳ್ಳಿ ಸುತ್ತ ಲೇಔಟ್​ಗಳಾಗುತ್ತಿವೆ. ಅದರಲ್ಲಿ ಜ್ಞಾನೇಂದ್ರ ಅವರ ಮಗ ಪಾಲುದಾರರಾಗಿದ್ದಾರೆ. ಈ ಲೇಔಟ್​ಗೆ ಕಾಂಕ್ರೀಟ್​ ​ ರೋಡ್​ ಮಂಜೂರು ಮಾಡಲಾಗಿದೆ. ಸರ್ಕಾರಿ ಜಾಗವನ್ನು‌ ಖಾಸಗಿ ಜಾಗ ಎಂದು ರೆಜಿಸ್ಟರ್ ಮಾಡಿದ್ದಾರೆ.

ಇದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ. ಫೆಬ್ರವರಿ ಮೊದಲು ಅಥವಾ ಎರಡನೇ ವಾರದಲ್ಲಿ ಗೃಹ ಸಚಿವರೆ ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ತೀರ್ಥಹಳ್ಳಿಯಲ್ಲಿ ಬೃಹತ್​ ಹೋರಾಟ ನಡೆಸಲಿದ್ದೇವೆ. ಹಿಂದಿನ ಚುನಾವಣೆಯಲ್ಲಿ ನಂದಿತಾ ಅವರ ಆತ್ಮಹತ್ಯೆಯನ್ನು ಅತ್ಯಾಚಾರ ಎಂದು ಬಿಂಬಿಸಿ ರಾಜ್ಯಾದ್ಯಂತ ಪ್ರಚಾರ ಮಾಡಿ ಕೋಮುಗಲಭೆ ಸೃಷ್ಟಿಸಿ ಚುನಾವಣೆ ಗೆದ್ದಿದ್ದರು. ಈ ಬಾರಿ ಕುಕ್ಕರ್ ತಗೊಂಡು ಬಂದಿದ್ದಾರೆ ಎಂದರು. ನಾಥೂರಾಮ್ ಗೊಡ್ಸೆ ದೇಶದ ಪ್ರಥಮ‌ ಭಯೋತ್ಪಾದಕ. ‌ಆತ ಅಹಿಂಸೆ, ಸತ್ಯವನ್ನು ಕೊಂದಿದ್ದಾನೆ ಎಂದು ಮಾಜಿ ಸಚಿವರು ಹೇಳಿದ್ದಾರೆ. ‌

ಇನ್ನು ಸ್ಯಾಂಟ್ರೋ ರವಿ ಪ್ರಕರಣ ತನಿಖೆಯನ್ನು ವಿಶೇಷ ತಂಡಕ್ಕೆ ವಹಿಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದಲ್ಲಿ ಯುವ ಕಾಂಗ್ರೆಸ್​ ನಾಯಕರು ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಸ್ಯಾಂಟ್ರೋ ರವಿ ಪ್ರಕರಣವನ್ನು ಹೈಕೋರ್ಟ್​ ನ್ಯಾಯಮೂರ್ತಿಗಳಿಗೆ ಇಲ್ಲವೇ ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಅವರು ಕೋರಿದ್ದಾರೆ.

ಇದನ್ನೂ ಓದಿ: ಸ್ಯಾಂಟ್ರೋ ರವಿ ಪ್ರಕರಣ ನ್ಯಾಯಾಂಗ ಇಲ್ಲವೇ ವಿಶೇಷ ತನಿಖಾ ತಂಡಕ್ಕೆ ವಹಿಸಿ: ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ

Last Updated :Jan 12, 2023, 9:58 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.