ಶಿವಮೊಗ್ಗ; ಜಿಲ್ಲೆಯ ವಿವಿಧ ಠಾಣೆ ವ್ಯಾಪ್ತಿಯಲ್ಲಿನ 23 ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ದೊಡ್ಡಪೇಟೆ ಪೊಲೀಸ್ ರು ಯಶಸ್ವಿಯಾಗಿದ್ದು ,ಆರು ಆರೋಪಿಗಳನ್ನು ಬಂಧಿಸಿ ,ಅವರಿಂದ 24.79 ಲಕ್ಷ ರೂ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಎಂ ಶಾಂತರಾಜು ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಅವರು ಇತ್ತೀಚಿನ ದಿನಗಳಲ್ಲಿ ನಗರದ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ 11 ಹಾಗೂ ವಿನೋಬಾ ನಗರ ಠಾಣಾ ವ್ಯಾಪ್ತಿಯಲ್ಲಿ 10 ಮನೆ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು .ಈ ಸಂಬಂಧ ವಿಶೇಷ ತಂಡ ರಚಿಸಲಾಗಿತ್ತು . ಈಗ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಸಾಗರದಲ್ಲಿ ನಡೆದ ಒಂದು ಪ್ರಕರಣವನ್ನು ಹಾಗೂ ಹಾವೇರಿ ಜಿಲ್ಲೆ ನಗರ ಪೊಲೀಸ್ ಠಾಣೆಯಲ್ಲಿನ ಪ್ರಕರಣವನ್ನು ಸಹ ಪತ್ತೆ ಹಚ್ಚಿದ್ದಾರೆ ಎಂದರು.
ಜಿಲ್ಲೆಯ ಬೊಮ್ಮನಕಟ್ಟೆ ನಿವಾಸಿ ಕೆ ಸಿ ಪ್ರಕಾಶ್, ಹೊನ್ನಾಳಿ ತಾಲೂಕು ಚೀಲೂರು ಗ್ರಾಮದ ವಾಸಿ ಇಲಿಯಾಸ್, ಹಾಸನ ಜಿಲ್ಲೆಯ ರಾಜ್ಯ ಘಟ್ಟದ ವಿಜಯ ಕುಮಾರ್, ಶಿವಮೊಗ್ಗ ನಗರ ಕ್ಲಾರ್ಕ್ ಪೇಟೆ ವಾಸಿ ಅಬ್ದುಲ್ ರೋಷನ್, ಮತ್ತು ಸೈಫ್ ಉಲ್ಲಾ ಖಾನ್ ಹಾಗೂ ಶಿವಮೊಗ್ಗದ ಆಜಾದ್ ನಗರದ ಸೈಫುಲ್ಲಾ ಖಾನ್ ಬಂಧಿತ ಆರೋಪಿಗಳು.
ಇವರಿಂದ 754 ಗ್ರಾಂ ಚಿನ್ನಾಭರಣಗಳು, 4 ಕೆಜಿ 441 ಗ್ರಾಂ ತೂಕದ ಬೆಳ್ಳಿ ಒಡವೆಗಳು , 10 ಸಾವಿರ ನಗದು ಹಾಗೂ 30 ಸಾವಿರ ರೂ ಮೌಲ್ಯದ ಹೀರೋ ಹೋಂಡಾ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಅಭಿನಂದಿಸಲಾಗಿದೆ.