ETV Bharat / state

ಹುಲಿಗಳು ಏಕೆ ಕಾಡಿನಿಂದ ಹೊರಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತವೆ: ತಜ್ಞರ ಸಂದರ್ಶನ

author img

By ETV Bharat Karnataka Team

Published : Nov 7, 2023, 10:18 PM IST

Updated : Nov 7, 2023, 10:49 PM IST

ಈಟಿವಿ ಭಾರತ ಜೊತೆ ವನ್ಯಜೀವಿ ತಜ್ಞೆ ಸಂದರ್ಶನ
ಈಟಿವಿ ಭಾರತ ಜೊತೆ ವನ್ಯಜೀವಿ ತಜ್ಞೆ ಸಂದರ್ಶನ

ಹುಲಿ ಮನುಷ್ಯನ ಮೇಲೆ ದಾಳಿ ಮಾಡಲು ಕಾರಣ ಏನು ಎಂಬುದರ ಬಗ್ಗೆ ಫಾರೆಸ್ಟ್ ವಾರ್ಡನ್ ಆಗಿ ಕೆಲಸ ಮಾಡಿರುವ ಕೃತಿಕಾ ಆಲನಹಳ್ಳಿ ಈಟಿವಿ ಭಾರತ ಜೊತೆ ಸಂದರ್ಶನದಲ್ಲಿ ವಿವರಿಸಿದ್ದಾರೆ.

ವನ್ಯಜೀವಿ ತಜ್ಞರೊಂದಿಗೆ ಈಟಿವಿ ಭಾರತ ಸಂದರ್ಶನ

ಮೈಸೂರು: ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ದಾಳಿಯಿಂದ ಮನುಷ್ಯರು ಹಾಗೂ ಸಾಕು ಪ್ರಾಣಿಗಳು ಸಾವನ್ನಪ್ಪುತ್ತಿದ್ದು, ಈ ಹಿನ್ನೆಲೆಯಲ್ಲಿ ಹುಲಿಗಳು ಕಾಡಿನಿಂದ ಹೊರಬಂದು ಏಕೆ ದಾಳಿ ಮಾಡುತ್ತವೆ, ಇದಕ್ಕೆ ಕಾರಣವೇನು, ಇದಕ್ಕೆ ಪರಿಹಾರವೇನು ಹಾಗೂ ಹುಲಿ ಸಂರಕ್ಷಿತ ಪ್ರದೇಶದ ನೀತಿ ನಿಯಮಗಳೇನು ಎಂಬ ಬಗ್ಗೆ ಫಾರೆಸ್ಟ್ ವಾರ್ಡನ್ ಆಗಿ ಕೆಲಸ ಮಾಡಿರುವ ವನ್ಯಜೀವಿ ತಜ್ಞರಾದ ಕೃತಿಕಾ ಆಲನಹಳ್ಳಿ ಈಟಿವಿ ಭಾರತ್ ಜೊತೆ ತಮ್ಮ ಸಂದರ್ಶನದಲ್ಲಿ ವಿವರಿಸಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ಪ್ರದೇಶ ಎಂಬ ಖ್ಯಾತಿ ಪಡೆದಿರುವ ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಕಾಡಂಚಿನ ಪ್ರದೇಶಗಳಲ್ಲಿ ಹುಲಿಗಳು ದಾಳಿ ಮಾಡಿ, ಸಾಕುಪ್ರಾಣಿಗಳು, ಹಲವಾರು ಜಾನುವಾರುಗಳನ್ನು ಕೊಂದು ಹಾಕಿವೆ. ಜತೆಗೆ ಜಾನುವಾರುಗಳನ್ನು ರಕ್ಷಿಸಲು ಹೋದ ಮನುಷ್ಯರ ಮೇಲೂ ಸಹ ದಾಳಿ ಮಾಡಿವೆ. ಬಂಡೀಪುರ ಹಾಗೂ ನಾಗರಹೊಳೆ ವ್ಯಾಪ್ತಿಯ ಮಡಿಕೇರಿ ಜಿಲ್ಲೆಯಲ್ಲೂ ಹುಲಿ ದಾಳಿಯಾಗಿದ್ದು, ಇದೇ ವರ್ಷ ಈ ಪ್ರದೇಶಗಳಲ್ಲಿ ಆರು ಜನ ಬಲಿಯಾಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಫಾರೆಸ್ಟ್ ವಾರ್ಡನ್ ಆಗಿ ಕೆಲಸ ನಿರ್ವಹಿಸಿರುವ ಕೃತಿಕಾ ಆಲನಹಳ್ಳಿ ವಿವರಿಸಿದ್ದಾರೆ.

ಹುಲಿ ಕಾಡಿನಿಂದ ಹೊರ ಬರಲು ಕಾರಣ: ಕಾಡಿನಲ್ಲಿ ಇರುವ ಹುಲಿಗಳು ಹೊರಗೆ ಬರಲು ಪ್ರಮುಖ ಕಾರಣ ಎಂದರೆ ಹುಲಿಗಳ ಸಂತತಿ ಹೆಚ್ಚಾಗಿರುವುದು, ಇದರಿಂದ ಹುಲಿಗಳು ತಮ್ಮ ಗಡಿಯನ್ನು ಗುರುತು ಮಾಡಿಕೊಳ್ಳಲು ಆಗುತ್ತಿಲ್ಲ. ಈ ಸಂದರ್ಭದಲ್ಲಿ ತಮ್ಮ ಗಡಿ ಗುರುತಿಸಿಕೊಳ್ಳಲು ಹುಲಿಗಳ ನಡುವೆ ಕದನವಾದಾಗ ಶಕ್ತಿಯುತ ಹುಲಿ ದುರ್ಬಲ ಹುಲಿಯನ್ನು ಹೊರಹಾಕುತ್ತದೆ. ಆಗ ಆಹಾರಕ್ಕಾಗಿ ಆ ಹುಲಿ ಕಾಡಿನಿಂದ ಹೊರ ಬಂದು ಆಹಾರ ಹುಡುಕಲು ಯತ್ನಿಸುತ್ತದೆ. ಆಗ ಜಾನುವಾರುಗಳ ಮೇಲೆ ದಾಳಿ ಮಾಡುತ್ತದೆ. ಎರಡನೇಯದಾಗಿ ವಯಸ್ಸಾದ ಹುಲಿ ಬೇಟೆಯಾಡಲು ಶಕ್ತಿ ಕಡಿಮೆ ಆದಾಗ ಸುಲಭವಾಗಿ ಸಿಗುವ ಆಹಾರಕ್ಕಾಗಿ ಕಾಡಿನಿಂದ ಹೊರಬಂದು ಜಾನುವಾರುಗಳ ಮೇಲೆ ದಾಳಿ ಮಾಡುತ್ತದೆ.
ಇದರ ಜೊತೆಗೆ ನವೆಂಬರ್​ ನಿಂದ ಫೆಬ್ರವರಿವರೆಗೆ ಹುಲಿಗಳಿಗೆ ಸಂತಾನೋತ್ಪತ್ತಿ ಸಮಯವಾದ್ದರಿಂದ, ಅಗ ಶಕ್ತಿಯುತವಾದ ಹುಲಿ ನಿಶ್ಯಕ್ತ ಹುಲಿಯನ್ನು ಹೊರಹಾಕುತ್ತದೆ ಎನ್ನುತ್ತಾರೆ ಕೃತಿಕಾ ಆಲನಹಳ್ಳಿ.

ಪರಿಹಾರವೇನು: ಹುಲಿಗಳು ಹೆಚ್ಚಾದಂತೆ ಅದಕ್ಕೆ ಅದರದೇ ಆದ ಪ್ರದೇಶಬೇಕು, ಆದರೆ ಕಾಡಿನ ಪ್ರದೇಶದಲ್ಲೇ ಕೃಷಿ, ರೆಸಾರ್ಟ್, ಹೊಂಸ್ಟೇಗಳ ನಿರ್ಮಾಣ ಮಾಡಿಕೊಂಡು ಅವುಗಳ ಜಾಗವನ್ನು ಆಕ್ರಮಿಸಿಕೊಂಡಿದ್ದೇವೆ. ಆದ್ದರಿಂದ ಮಾನವ ಹಾಗೂ ಕಾಡುಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇವುಗಳನ್ನು ನಿಯಂತ್ರಿಸಬೇಕಾಗಿದ್ದು, ಇದಕ್ಕಾಗಿ ಹುಲಿ ಸಂರಕ್ಷಿತ ಪ್ರದೇಶದ ಗೈಡ್​ಲೈನ್ಸ್​ಗಳನ್ನು ಅನುಸರಿಸಬೇಕು. ಇದರ ಜೊತೆಗೆ ಎನ್​ಟಿಸಿಎ ಗೈಡ್ ಲೈನ್ಸ್​ಗಳನ್ನು ಅನುಸರಿಸಬೇಕು.

ಅತಿಕ್ರಮಣ ಮಾಡಿಕೊಂಡಿರುವ ಅರಣ್ಯ ಪ್ರದೇಶಗಳನ್ನು ಬಿಡಿಸಿ ಅರಣ್ಯ ಇಲಾಖೆಯವರು ಆ ಪ್ರದೇಶಗಳನ್ನು ಅರಣ್ಯ ಪ್ರದೇಶಕ್ಕೆ ಸೇರಿಸಿಕೊಳ್ಳಬೇಕು. ಜೊತೆಗೆ ಅರಣ್ಯ ಇಲಾಖೆಯವರು ಕಾಡಂಚಿನ ಗ್ರಾಮದ ಜನರಿಗೆ ಕಾಡು ಪ್ರಾಣಿಗಳ ರಕ್ಷಣೆಗೆ ಫೆನ್ಸಿಂಗ್ ಹಾಗೂ ಉರುಳುಗಳನ್ನ ಹಾಕದಂತೆ, ಜೊತೆಗೆ ಕಾಡಿನ ಒಳಗೆ ಜಾನುವಾರುಗಳನ್ನು ಮೇಯಿಸಲು, ಕಟ್ಟಿಗೆ ತರಲು ಬರದಂತೆ ತಿಳಿವಳಿಕೆ ನೀಡಬೇಕು ಎಂದು ಹೇಳಿದ್ದಾರೆ.

ಮನುಷ್ಯನನ್ನು ನೋಡಿದರೆ ಹುಲಿ ಭಯ ಪಡುತ್ತದೆ: ಹುಲಿ ಮನುಷ್ಯರನ್ನು ನೋಡಿದರೆ ತುಂಬಾ ಭಯ ಪಡುತ್ತದೆ. ನಾವು ನೋಡಿದ ಮಟ್ಟಿಗೆ ಹಲವು ಘಟನೆಗಳಲ್ಲಿ ಮನುಷ್ಯನ ಬಳಿ ಬಂದು ಹುಲಿ ದಾಳಿ ಮಾಡಿ ಕೊಲ್ಲುವುದು ತುಂಬಾ ಕಡಿಮೆ, ಗಡಿ ವಿಚಾರದಲ್ಲಿ ಕದನ ನಡೆದು ಹೊರದಬ್ಬಿದ ಹುಲಿ ಅಥವಾ ಬೇಟೆಯಾಡಲು ನಿಶ್ಯಕ್ತವಾಗಿರುವ ಹುಲಿಯ ಕೊನೆಯ ಆಯ್ಕೆ ಮನುಷ್ಯ ಆಗಿದೆ.

ಕಾಡಿನಿಂದ ಹೊರಬಂದಾಗ ತಾನು ಬೇಟೆಗಾಗಿ ಕುರಿ, ಹಸು, ಮೇಕೆಗಳ ಮೇಲೆ ದಾಳಿ ಮಾಡುತ್ತದೆ. ಆಗ ತಮ್ಮ ಜಾನುವಾರುಗಳ ರಕ್ಷಣೆಗಾಗಿ ಹೋಗುವ ಮನುಷ್ಯರ ಮೇಲೆ ತನಗೆ ತೊಂದರೆ ಆಗಬಹುದು ಎಂದು ಮನುಷ್ಯನ ಮೇಲೂ ಸಹ ದಾಳಿ ಮಾಡುತ್ತದೆ ಅಷ್ಟೇ. ಆದರೆ, ಹುಲಿಗೆ ಮನುಷ್ಯನನ್ನು ಕಂಡರೆ ಭಯ ಎಂದು ಹೇಳುವ ಫಾರೆಸ್ಟ್ ವಾರ್ಡನ್ ಕೃತಿಕಾ, ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿದಾಗ ಶೀಘ್ರವೇ ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ಜೊತೆಗೆ ಕಾಡಂಚಿನ ಗ್ರಾಮದ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಬೇಕು ಎಂದು ತಮ್ಮ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಹುಲಿ ದಾಳಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಲಿ

Last Updated :Nov 7, 2023, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.