ETV Bharat / state

ಸಹಕಾರ ಸಂಘದಲ್ಲಿ ಹೆಚ್ಚಿನ ಫಲಾನುಭವಿಗಳಿಗೆ ಸಾಲ ವಿತರಣೆ : ಸಚಿವ ಸೋಮಶೇಖರ್

author img

By

Published : May 17, 2020, 12:10 AM IST

Minister Somashekhar
ಮೈಸೂರು ಪ್ರಾಂತದ ಸಹಕಾರ ಇಲಾಖೆಯ ಅಧಿಕಾರಿಗಳ ಸಭೆ

ಎಸ್ಸಿ - ಎಸ್ಟಿ ಸಮುದಾಯದವರಿಗೆ ಅಲ್ಪ ಪ್ರಮಾಣದ ಕೃಷಿ ಸಾಲ ವಿತರಣೆಯಾಗಿದ್ದು, ಮುಂದೆ ಹೀಗಾಗಬಾರದು. ಹೆಚ್ಚಿನ ಫಲಾನುಭವಿಗಳಿಗೆ ಸಾಲ ವಿತರಣೆ ಮಾಡಬೇಕು ಎಂದು ಸಚಿವ ಎಸ್‌.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರು: ಈ ಬಾರಿ 14 ಸಾವಿರ ಕೋಟಿ ರೂಪಾಯಿ ಸಾಲವನ್ನು ರೈತರಿಗೆ ಕೊಡಲೇಬೇಕು. ಅಲ್ಲದೇ ಹೊಸ ಸದಸ್ಯರಿಗೆ ಸಾಲ ವಿತರಣೆಯನ್ನು ಕಡ್ಡಾಯವಾಗಿ ಕೊಡಲೇಬೇಕು. ಜೊತೆಗೆ ಎಸ್ಸಿ ಎಸ್ಟಿ ಸಮುದಾಯದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಣೆಯಾಗಬೇಕು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮೈಸೂರು ಪ್ರಾಂತದ ಸಹಕಾರ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸಿ -ಎಸ್ಟಿ ಸಮುದಾಯದವರಿಗೆ ಅಲ್ಪ ಪ್ರಮಾಣದ ಕೃಷಿ ಸಾಲ ವಿತರಣೆಯಾಗಿದ್ದು, ಮುಂದೆ ಹೀಗಾಗಬಾರದು. ಹೆಚ್ಚಿನ ಫಲಾನುಭವಿಗಳಿಗೆ ಸಾಲ ವಿತರಣೆ ಮಾಡಬೇಕು ಎಂದು ಸೂಚಿಸಿದರು.

ಬಡವರ ಬಂಧು ಯೋಜನೆಯಡಿ ಹೆಚ್ಚಿನ ಆದ್ಯತೆ ನೀಡಿ: ಬೀದಿ ಬದಿ ವ್ಯಾಪಾರ ಮಾಡುವವರ ಬಗ್ಗೆ ಆಸಕ್ತಿ ವಹಿಸಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಈ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಸಾಲ ನೀಡಿಕೆಯ ಪ್ರಗತಿ ಕುಂಠಿತವಾಗಿದ್ದು, ಹೆಚ್ಚಿನ ಪ್ರಗತಿ ಸಾಧಿಸಬೇಕು. ವ್ಯಾಪಾರಿಗಳು ಸ್ವಾಭಿಮಾನಿಗಳಿದ್ದು, ಸಾಲ ಮರುಪಾವತಿಯಾಗೇ ಆಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಿವಿಲ್ - ಕ್ರಿಮಿನಲ್ ಪ್ರಕರಣ ಬಗೆಹರಿಸಿ: ಸಹಕಾರ ಸಂಘಗಳ ಹಣ ದುರುಪಯೋಗಕ್ಕೆ ಸಂಬಂಧಪಟ್ಟಂತೆ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು, ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಲು ಕ್ರಮವಹಿಸಿ ಎಂದು ಎಚ್ಚರಿಕೆ ನೀಡಿದರು. ಸಹಕಾರ ಸಂಘಗಳ ಹಣ ದುರುಪಯೋಗ ಪ್ರಕರಣವನ್ನು ಸಹಿಸುವುದಿಲ್ಲ. ಅಂಥವರ ಮೇಲೆ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ಹೂಡಿ ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಪ್ರಕರಣಗಳ ಮೇಲೆ ಶೀಘ್ರವಾಗಿ ಕ್ರಮ ಕೈಗೊಳ್ಳಿ. ಆದಷ್ಟು ಜನರ ಪರವಾಗಿ ಕಾರ್ಯನಿರ್ವಹಿಸಿ. ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತಂದರೆ ಬಗಹರಿಸುವೆ. ಕೆಲಸ ಮಾಡಲು ಆಗುವುದಿಲ್ಲ ಎಂದಾದರೆ ತಿಳಿಸಿ, ನಿಮ್ಮನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಒಂದೊಂದೆ ಸಮಸ್ಯೆ ಬಗೆಹರಿಸುವೆ: ಹೌಸಿಂಗ್ ಸೊಸೈಟಿಯಲ್ಲಿ ಸಮಸ್ಯೆ ಇದ್ದರೆ ಗಮನ ಹರಿಸುತ್ತೇನೆ. ನಾನೂ ಈ ಮೊದಲು ಸುಮಾರು 20 ವರ್ಷ ಅಧ್ಯಕ್ಷನಾಗಿದ್ದೆ. ಹಾಗಾಗಿ ಎಲ್ಲ ಕೆಲಸಗಳ ಬಗ್ಗೆ ನಿಗಾ ವಹಿಸುತ್ತೇನೆ. ಜೊತೆಗೆ ಮುಡಾ ಸೇರಿದಂತೆ ಹಲವು ಕಡೆ ಇರುವ ಸಮಸ್ಯೆಗಳನ್ನು ಒಂದೊಂದಾಗಿ ಗಮನಹರಿಸಿ ಬಗೆಹರಿಸುತ್ತೇನೆ ಎಂದು ತಿಳಿಸಿದರು. ಕಾಸ್ಕಾರ್ಡ್ ಬ್ಯಾಂಕ್ ಗಳಲ್ಲಿ ಸಾಲ ವಿತರಣೆ ಹಾಗೂ ವಸೂಲಾತಿಗಳ ಪ್ರಮಾಣ ಬಹಳ ಕಡಿಮೆ ಇದ್ದು, ಪ್ರಗತಿ ಸಾಧಿಸಬೇಕು. ಸುಸ್ತಿ ಸಾಲಗಳ ಪ್ರಮಾಣ ಹೆಚ್ಚಾಗಿದ್ದು, ಅವುಗಳ ವಸೂಲಾತಿಗಾಗಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.


ಇನ್ನು ಅಲ್ಪಾವಧಿ ಸಾಲ ಸೇರಿದಂತೆ ಬಹುತೇಕ ಸಾಲ ವಿತರಣೆ ಇನ್ನೂ ಮೊದಲ ಹಂತದಲ್ಲೇ ಇದೆ. ಆದರೆ, ಸಭೆ ನಡೆಸಿದ ಮೇಲಷ್ಟೇ ಸಾಲ ವಿತರಣೆ ಎಂಬ ಕಟ್ಟು ಪಾಡಿಗೆ ಬೀಳದೆ ಶೀಘ್ರ ಸಾಲ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಜೊತೆಗೆ ಪ್ರತಿವರ್ಷ ಸಾಲ ವಿತರಣೆ ಪ್ರಮಾಣದ ಗುರಿಯನ್ನು ಹಾಕಿಕೊಳ್ಳುವಾಗ ಹೆಚ್ಚಿನ ವಿತರಣೆ ಮಾಡುವ ಬಗ್ಗೆ ಗುರಿ ನಿಗದಿಪಡಿಸಿಕೊಂಡರೆ ಸಾಲ ವಿತರಣೆ ಪ್ರಮಾಣದಲ್ಲೂ ಹೆಚ್ಚಳವಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.