ETV Bharat / state

ನಾಗರಹೊಳೆಯಲ್ಲಿ ಗಜಕಾಳಗ: ಒಂದೇ ವಾರದಲ್ಲಿ ಎರಡು ಆನೆಗಳು ಸಾವು

author img

By

Published : Dec 2, 2022, 12:51 PM IST

Updated : Dec 2, 2022, 1:41 PM IST

Elephant death in Nagarahole Tiger Reserve
ಕಾದಾಟದಲ್ಲಿ ಮರಣ ಹೊಂದಿದ ಎರಡು ಆನೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಒಂದೇ ವಾರದಲ್ಲಿ ಎರಡು ಆನೆಗಳು ಸಾವನ್ನಪ್ಪಿವೆ.

ಮೈಸೂರು: ಎರಡು ಕಾಡಾನೆಗಳು ಪರಸ್ಪರ ಕಾದಾಟ ನಡೆಸಿ ಗಂಭೀರವಾಗಿ ಗಾಯಗೊಂಡು ಪ್ರತ್ಯೇಕ ಸ್ಥಳಗಳಲ್ಲಿ ಸಾವನ್ನಪ್ಪಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಅರಣ್ಯದಲ್ಲಿ ಪ್ರದೇಶದಲ್ಲಿ ನಡೆದಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಅರಣ್ಯ ವ್ಯಾಪ್ತಿಯಲ್ಲಿ ಮಂಗಳವಾರ ಗಂಡಾನೆಯೊಂದು (25 ವರ್ಷ) ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಆದರೆ ಕಳೆದ ನಾಲ್ಕು ದಿನಗಳ ಹಿಂದೆಯೂ ಸಹ ಒಂದು ಗಂಡಾನೆ (25) ಕಾದಾಟದಿಂದ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಎರಡೂ ಆನೆಗಳು ಸಹ ಮತ್ತೊಂದು ಆನೆಯೊಡನೆ ಕಾದಾಟ ನಡೆಸಿಯೇ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಮಂಗಳವಾರ ಹಾಗೂ ಕಳೆದ ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ ಎಂದಿನಂತೆ ಗಸ್ತು ತಿರುಗುತ್ತಿರುವ ಸಂದರ್ಭದಲ್ಲಿ ಆನೆಗಳು ಸತ್ತಿರುವುದು ಕಂಡುಬಂದಿದೆ. ಘಟನಾ ಸ್ಥಳದ ಹತ್ತಿರ ಹೋಗಿ ನೋಡಿದಾಗ ಮೇಲ್ನೋಟಕ್ಕೆ ಆನೆಯ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಕೂಡಲೇ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ನಾಗರಹೊಳೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೇಟಿಕುಪ್ಪೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಪಶುವೈದ್ಯಾಧಿಕಾರಿ ಡಾ.ರಮೇಶ್ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಬೇರೊಂದು ಆನೆಯೊಂದಿಗಿನ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಸ್ಥಳವು ಹುಲಿ ಸಂರಕ್ಷಿತ ಪ್ರದೇಶವಾಗಿದ್ದು ಮೃತ ಆನೆಯ ಕಳೇಬರವನ್ನು ವನ್ಯಪ್ರಾಣಿಗಳಿಗೆ ಆಹಾರವಾಗಲೆಂದು ಸ್ಥಳದಲ್ಲಿಯೇ ಬಿಡಲಾಯಿತು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ತಿ.ನರಸೀಪುರ: ತಾಯೂರಿನ ಬಳಿ ಚಿರತೆ ಓಡಾಟ-ವಿಡಿಯೋ

Last Updated :Dec 2, 2022, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.