ETV Bharat / state

ಇದು ಹಣ ಪ್ರತಿನಿಧಿ ಸರ್ಕಾರ: ಸಾಹಿತಿ ದೇವನೂರು ಮಹಾದೇವ

author img

By

Published : Jan 10, 2023, 9:23 AM IST

Literary Devanur Mahadev speaking at the meeting against the government
ಸರ್ಕಾರದ ವಿರುದ್ದ ಸಭೆಯಲ್ಲಿ ಮಾತನಾಡುತ್ತಿರುವ ಸಾಹಿತಿ ದೇವನೂರು ಮಹಾದೇವ

ಮೈಸೂರಿನಲ್ಲಿ ನಡೆದ ಭಾವೈಕ್ಯತಾ ಜಾಥಾದ ಸಭೆಯಲ್ಲಿ ಪಾಲ್ಗೊಂಡ ಸಾಹಿತಿ ದೇವನೂರು ಮಹಾದೇವ ರಾಜ್ಯ ಸರ್ಕಾರದ ಕಾಯ್ದೆ, ನೀತಿಗಳನ್ನು ಟೀಕಿಸಿದರು.

ಮೈಸೂರು : ತನ್ನ ರಾಜ್ಯದ ಜನತೆಯ ಮಾತನ್ನು ಕೇಳಿಸಿಕೊಳ್ಳದ, ಅವರ ಸಮಸ್ಯೆಯನ್ನು ನಿಭಾಯಿಸದ ಸರ್ಕಾರ ಹಣ ಪ್ರತಿನಿಧಿ ಸರಕಾರವೇ ಹೊರತು ಜನಪ್ರತಿನಿಧಿ ಸರ್ಕಾರವಲ್ಲ ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದರು. ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಸಹಕಾರದೊಂದಿಗೆ ಶೋಷಿತರ ಅರಿವಿನ ಗುರು ಕುದ್ಮುಲ್ ರಂಗರಾವ್ ಸ್ಮರಣೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಭಾವೈಕ್ಯತಾ ಜಾಥಾ ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಮೀಪ ನಡೆದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಈ ಸರ್ಕಾರಕ್ಕೆ ನಾಡ ಜನತೆಯ ಸಂಕಷ್ಟ ಬೇಕಾಗಿಲ್ಲ. ಅವರದ್ದು ಕೇವಲ ಹಣ ಪ್ರತಿನಿಧಿ ಸರ್ಕಾರ. ಮೂರು ಕಾಯ್ದೆಗಳ ವಿರುದ್ಧ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟಗಳಾಗಿವೆ. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಗಳನ್ನೂ ಸಲ್ಲಿಸಲಾಗಿದೆ. ರೈತ ಸಂಘಟನೆ ಸೇರಿದಂತೆ ಅನೇಕ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಆದರೂ, ಸರಕಾರ ನಮ್ಮ ಸಮಸ್ಯೆಗಳನ್ನು ಆಲಿಸಿತೇ ಎಂದು ಪ್ರಶ್ನಿಸಿದರು.

ರಾಜ್ಯ ಭೂ ಸುಧಾರಣಾ ಕಾಯ್ದೆಗಳ ಮೂಲಕ ರೈತರಿಂದ ಭೂಮಿ ಕಸಿದುಕೊಳ್ಳುತ್ತಾರೆ. ಕೃಷಿಕರನ್ನು ಭೂಮಿಯಿಂದ ಕಿತ್ತು ಬೀದಿಗೆ ಎಸೆಯುವುದು ಸುಧಾರಣೆಯೇ? ಇಂತಹ ಕಾಯ್ದೆ ವಿರುದ್ಧ ಹೋರಾಟ ನಡೆಸಿದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ರೈತರು ಕೃಷಿ ಉತ್ಪನ್ನಗಳಿಗೆ ಬೆಲೆ ಏರಿಕೆ ಮಾಡುವಂತೆ ಕೇಳುತ್ತಿದ್ದಾರೆ. ರೈತರ ಬೇಡಿಕೆ ಈಡೇರಿಸುವ ಬದಲು ಅವರನ್ನು ಭೂಮಿಯಿಂದ ಕಿತ್ತು ಬೀದಿಗೆ ಎಸೆದುಬಿಟ್ಟರೆ ಬೆಲೆ ಏರಿಸುವ ಅಗತ್ಯವೇ ಬೀಳುವುದಿಲ್ಲವಲ್ಲ?, ಈ ಸರಕಾರಕ್ಕೆ ರೈತರ ಹಿತ ಬೇಕಿಲ್ಲ ಎಂದರು.

ಇಡಬ್ಲ್ಯುಎಸ್ (ಆರ್ಥಿಕವಾಗಿ ಹಿಂದುಳಿದವರು) ಎಂಬ ವರ್ಗವನ್ನು ರೂಪಿಸಿ ಕೇವಲ ಮೂರು ದಿನಗಳಲ್ಲೇ ಮೀಸಲಾತಿ ನೀಡಿದ ಇಂತಹ ಸರ್ಕಾರದಿಂದ ಸಾಮಾನ್ಯ ಜನರು ಏನನ್ನು ನಿರೀಕ್ಷಿಸಲು ಸಾಧ್ಯ?, ಮಕ್ಕಳ ಶಿಕ್ಷಣಕ್ಕೆ ಆಸರೆಯಾದ ಸರ್ಕಾರಿ ಶಾಲೆಗಳನ್ನೇ ಮುಚ್ಚುವ, ವಿದ್ಯಾರ್ಥಿವೇತನವನ್ನೂ ನಿಲ್ಲಿಸಿರುವ ಸರಕಾರವಿದು. ಗೋಹತ್ಯೆ ನಿಷೇಧಿಸಿದ್ದೇವೆ ಎನ್ನುತ್ತಾರೆ. ಆದರೆ, ಗೋಮಾಂಸ ರಫ್ತಿನಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಹಾಗಾದರೆ ಸಾಕಲಾಗದ ದನಗಳನ್ನು ರೈತರು ಏನು ಮಾಡಬೇಕು ಎಂದು ಕೇಳಿದರು. ಸಭೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಹೊಸಕೋಟೆ ಬಸವರಾಜು, ಕೆ.ವಿ.ಭಟ್, ರವಿಕಿರಣ್ ಪೂಣಚ್ಚ, ಉಗ್ರನರಸಿಂಹೇಗೌಡ, ಪ್ರಕಾಶಕ ಅಭಿರುಚಿ ಗಣೇಶ್ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಶಿವಮೊಗ್ಗ: ಗೃಹ ಸಚಿವರೆದುರು ಕಪ್ಪು ಬಾವುಟ ಪ್ರದರ್ಶಿಸಿದ ಗ್ರಾ.ಪಂ ಅಧ್ಯಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.