ETV Bharat / state

ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೆಳೆ ನಾಶ: ರೈತರ ಆಕ್ರೋಶ

author img

By

Published : Mar 23, 2022, 10:33 AM IST

Updated : Mar 23, 2022, 10:57 AM IST

ಬೆಳೆ ನಾಶ
ಬೆಳೆ ನಾಶ

ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೆಳೆ ನಾಶವಾದ ಘಟನೆ ತಿ.ನರಸೀಪುರ ತಾಲೂಕಿನ ಹೊಸೂರುಹುಂಡಿ ಗ್ರಾಮದಲ್ಲಿ ನಡೆದಿದ್ದು, ಲೈನ್‌ಮನ್‌ಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು: ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಬೆಳೆ ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಚೆಸ್ಕಾಂ ಅಧಿಕಾರಿಗಳ ವಿರುದ್ಧ ತಿ.ನರಸೀಪುರ ತಾಲೂಕಿನ ಹೊಸೂರು ಹುಂಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ಷಾಂತರ ರೂ. ಸಾಲ ಮಾಡಿ ಜಮೀನುಗಳಲ್ಲಿ ಬೆಳೆ ಬೆಳೆದಿದ್ದೇವೆ. ಆದರೆ, ಟಿಸಿ ಅಳವಡಿಸಲು ಚೆಸ್ಕಾಂಗೆ ಹಣ ಕಟ್ಟಿಲ್ಲ ಎಂದು ಲೈನ್‌ಮನ್‌ಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಬೆಳೆ ಒಣಗಿ ಹೋಗುತ್ತಿದೆ. ಫಸಲು ಬಂದಿರುವ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ?, ರೈತರಿಗೆ ಯಾವುದೇ ನೋಟಿಸ್ ನೀಡದೇ ಅಧಿಕಾರಿಗಳು ಏಕಾಏಕಿ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಲೈನ್‌ಮನ್‌ಗಳು ಜಮೀನಿನ ಬಳಿ ಬಂದು ರೈತರೊಂದಿಗೆ ಅಸಭ್ಯವಾಗಿ ವರ್ತಿಸಿ, ದೌರ್ಜನ್ಯವೆಸಗಿ ದರ್ಪ ತೋರಿದ್ದಾರೆ ಎಂದು ಅನ್ನದಾತರು ಅಸಮಾಧಾನ ಹೊರಹಾಕಿದರು.

ಚೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ

ಈಗಾಗಲೇ ಕೊರೊನಾ ಮತ್ತು ಬರಗಾಲದಿಂದ ನಾವು ತತ್ತರಿಸಿ ಹೋಗಿದ್ದೇವೆ. ಇಂತಹ ಸಂದರ್ಭದಲ್ಲಿ ಬೆಳೆ ಬೆಳೆದು ಸಾಲ ತೀರಿಸೋಣವೆಂದ್ರೆ ಚೆಸ್ಕಾಂ ಇಲಾಖೆ ಏಕಾಏಕಿ ವಿದ್ಯುತ್ ಕಡಿತಗೊಳಿಸಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಚೆಸ್ಕಾಂನ ಕಾರ್ಯ ವೈಖರಿಯಿಂದ ವಿಷ ಕುಡಿದು ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ ಎಂದು ರೈತರು ಈಟಿವಿ ಭಾರತದೊಂದಿಗೆ ನೋವು ತೋಡಿಕೊಂಡರು.

ನಂತರ ರೈತ ಮುಖಂಡ ರಾಜಪ್ಪ ಮಾತನಾಡಿ, ಹಲವಾರು ಜಮೀನುಗಳಿಗೆ ಅಕ್ರಮ ವಿದ್ಯುತ್ ಸಂಪರ್ಕವಿದ್ದರೂ ಅದನ್ನು ಕಡಿತಗೊಳಿಸದೇ, ಹೊಸಹುಂಡಿ ಗ್ರಾಮದಲ್ಲಿ ಮಾತ್ರ ಸಂಪರ್ಕ ಕಡಿತಗೊಳಿಸಲಾಗಿದೆ. ಟಿಸಿ ಇಲ್ಲವೆಂದು ಜಮೀನುಗಳಲ್ಲಿದ್ದ ವೈರ್ ತೆಗೆದುಕೊಂಡು ಹೋಗಿದ್ದಾರೆ. ನೋಟಿಸ್ ನೀಡಿ ಸಮಂಜಸ ಉತ್ತರ ಬಾರದೇ ಇದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು. ಆದರೆ, ಯಾವುದೇ ಮುನ್ಸೂಚನೆ ನೀಡಿದೆ ಹೀಗೆ ಮಾಡಿದ್ದಾರೆ. ಲೈನ್‌ಮನ್‌ಗಳ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದರು.

ರೈತ ಮಂಜುನಾಥ್ ಮಾತನಾಡಿ, ಯಾವುದೇ ಮುನ್ಸೂಚನೆ ನೀಡಿದೆ ಟಿಸಿ ತೆಗೆದುಕೊಂಡು ಹೋಗಿದ್ದಾರೆ. ಟಿಸಿ ಹಾಕಲು 25 ಸಾವಿರ ರೂ.ಕೇಳುತ್ತಿದ್ದಾರೆ. ಅಷ್ಟೊಂದು ಹಣ ಎಲ್ಲಿಂದ ತರುವುದು?. ಈಗಾಗಲೇ 5 ಲಕ್ಷ ಸಾಲ ಮಾಡಿ ಬೆಳೆದ ಬಾಳೆ ಬೆಳೆ ನಷ್ಟವಾಗಿದೆ. ನರಸೀಪುರದಲ್ಲಿ ನಾಲ್ಕೈದು ಜನರು ಮಾತ್ರ ಬಿಲ್ ಕೊಟ್ಟಿಲ್ಲ. ಲೈನ್‌ಮನ್‌ಗಳು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಧಾರವಾಡ: ಕಾಟನ್​ ಮಿಲ್​ನಲ್ಲಿ ಭಾರಿ ಅಗ್ನಿ ಅವಘಡ- ಕೋಟ್ಯಂತರ ರೂ. ಮೌಲ್ಯದ ಹತ್ತಿ ಬೆಂಕಿಗಾಹುತಿ!

Last Updated :Mar 23, 2022, 10:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.