ETV Bharat / state

ಕೆಎಸ್ಆರ್​ಟಿಸಿ ಡ್ರೈವರ್ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದೆ: ಸಚಿವ ಚಲುವರಾಯಸ್ವಾಮಿ

author img

By

Published : Jul 11, 2023, 3:12 PM IST

Minister Chaluvarayaswamy
ಸಚಿವ ಚಲುವರಾಯಸ್ವಾಮಿ

ವರ್ಗಾವಣೆ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಕೆಎಸ್​ಆರ್​ಟಿಸಿ ಚಾಲಕ ಜಗದೀಶ್​ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಬೆಂಗಳೂರು/ಮಂಡ್ಯ: ''ನಾಗಮಂಗಲ ಕೆಎಸ್ಆರ್​ಟಿಸಿ ಡ್ರೈವರ್ ಆತ್ಮಹತ್ಯೆ ಯತ್ನ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದ್ದು, ಆದಷ್ಟು ಬೇಗ ವರದಿ ಬರಲಿದೆ'' ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ''ಕೆಎಸ್ಆರ್​ಟಿಸಿ ಚಾಲಕ ಆತ್ಮಹತ್ಯೆ ಯತ್ನ ಸಂಬಂಧ ನಾನು ಸದನದಲ್ಲೇ ಎಲ್ಲವನ್ನು ವಿವರವಾಗಿ ಹೇಳಿದ್ದೇನೆ. ಈ ವಿಚಾರಕ್ಕೂ, ನನಗೂ ಯಾವುದೇ ಸಂಬಂಧ ಇಲ್ಲಎಂದು ಅವತ್ತೇ ಸ್ಪಷ್ಟಪಡಿಸಿದ್ದೇನೆ ಎಂದರು.

''ಡಾಕ್ಟರ್, ವೆಂಟಿಲೇಟರ್ ಇರೋ ಆಂಬ್ಯುಲೆನ್ಸ್‌ ಅನ್ನೇ ಕಳುಹಿಸಿದ್ದಾರೆ. ರೋಗಿ ಹೋಗುವಾಗ ಯಾರೂ ಆಂಬ್ಯುಲೆನ್ಸ್ ತಡೆಯಲ್ಲ. ಆದರೆ ಡ್ರೈವರನ್ನೂ ಕೂಡ ಕೆಳಗೆ ಇಳಿಸಿ ಮಾತನಾಡಿಸಿದ್ದಾರೆ. ರೋಗಿ ಇದ್ದಾಗ ಒಂದೊಂದು ನಿಮಿಷವೂ ಮುಖ್ಯ. ಸಿಐಡಿ ತನಿಖೆ ನಡೆಯುತ್ತಿದೆ‌. ಅದರ ಬಗ್ಗೆ ಹೊರಗೆ ಮಾತನಾಡೋದು ಸರಿಯಲ್ಲ. ಶಾಸಕರು ಆಂಬ್ಯುಲೆನ್ಸ್ ತಡೆಯುವ ಕೆಲಸ ಮಾಡಬಾರದಿತ್ತು. ನಾನು ಅಂದೇ ಆತ್ಮಹತ್ಯೆ ಲೆಟರ್ ಬಗ್ಗೆ ಹೇಳಿದ್ದೆ. ಸದನ ಮುಗಿಯುವುದರೊಳಗೆ ಸಿಐಡಿ ತನಿಖೆ ವರದಿ ಬರಲಿದೆ'' ಎಂದು ಸ್ಪಷ್ಟಪಡಿಸಿದರು.

ಸಿಐಡಿ ಅಧಿಕಾರಿಗಳಿಂದ ತನಿಖೆ ಚುರುಕು: ಮಂಡ್ಯ ಜಿಲ್ಲೆಯಲ್ಲಿ ಕೆಎಸ್​ಆರ್​ಟಿಸಿ ಚಾಲಕ ಜಗದೀಶ್​ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಗಳವಾರ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ಸಂಬಂಧ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು, ಮಂಡ್ಯದ ನಾಗಮಂಗಲಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮೊನ್ನೆಯಷ್ಟೇ ಕೆಎಸ್​ಆರ್​ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ಈ ಬಗ್ಗೆ ಸದನದಲ್ಲೂ ಗದ್ದಲ ಕೋಲಾಹಲ ನಡೆದ ನಂತರ, ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು.

ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಭೇಟಿ ನೀಡಿರುವ ಸಿಐಡಿ ಅಧಿಕಾರಿಗಳು, ಪ್ರಕರಣದ ಸಂಬಂಧ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ತನಿಖೆ ಕುರಿತು ಜಿ. ಪರಮೇಶ್ವರ್​ ಭರವಸೆ: ಮೊನ್ನೆ ವಿಧಾನಸಭೆಯಲ್ಲಿ ನಾಗಮಂಗಲ ಕೆಎಸ್ಆರ್​ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಭರವಸೆ ನೀಡಿದ್ದರು. ವಿಧಾನಸಭೆಯಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಗಂಭೀರ ಚರ್ಚೆ ಮಾಡಿದ್ದರು. ಹೀಗಾಗಿ ಜಿ. ಪರಮೇಶ್ವರ್ ಅವರು, ಹೆಚ್​.ಡಿ ಕುಮಾರಸ್ವಾಮಿ ಎರಡು ಭಾರಿ ಮುಖ್ಯಮಂತ್ರಿ ಆಗಿ ಅನುಭವ ಇರುವವರು, ಅದೇ ರೀತಿಯಲ್ಲಿ ಸಚಿವ ಚಲುವರಾಯಸ್ವಾಮಿ ಅವರ ಜೊತೆಯಲ್ಲಿ ಕೆಲಸ ಮಾಡಿದವರು. ಒಂದು ಇತಿ ಮಿತಿಯಲ್ಲಿ ಚರ್ಚೆ ನಡೆದರೆ ಸದನಕ್ಕೆ ಗೌರವ ಬರುತ್ತೆ. ಪ್ರಕರಣದ ಕುರಿತು ಚರ್ಚೆ ನಡೆದಿದ್ದು ಎರಡೂ ಕಡೆಯಿಂದ ಸ್ವಲ್ಪ ಅತಿಯಾಯಿತು ಅನ್ನಿಸಿತು.‌ ಅದು‌ ಮರುಕಳಿಸಬಾರದು ಎಂದು ಮನವಿ ಮಾಡಿದ್ದರು. ಈ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸುತ್ತೇವೆ. ಕೆಎಸ್ಆರ್​ಟಿಸಿ ಇಲಾಖೆ ಹಿರಿಯ ಅಧಿಕಾರಿಗಳನ್ನು ಒಳಗೊಂಡು ತನಿಖೆ ನಡೆಸಿ ವರದಿ ತರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದರು.

ಸದನದ ಬಾವಿಗಿಳಿದು ಧರಣಿ ನಡೆಸಿದ್ದ ಸದಸ್ಯರು: ಪರಮೇಶ್ವರ್​ ಅವರು ಭರವಸೆ ನೀಡುವ ಮೊದಲು ಸದನದಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಉತ್ತರ ಬಂದಿಲ್ಲ ಎಂದು ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರು. ಈ ವೇಳೆ, ಉತ್ತರ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಜಗದೀಶ್ ಡ್ರೈವರ್ ಕಮ್‌ ಕಂಡಕ್ಟರ್ ಆಗಿದ್ದಾರೆ. ನಿಗಮದ ಸಿಬ್ಬಂದಿಯನ್ನು ಕೋರಿಕೆ ಮೇಲೆ ಮಾತ್ರ ವರ್ಗಾವಣೆ ಮಾಡುತ್ತೇವೆ. ಉದ್ದೇಶ ಪೂರ್ವಕವಾಗಿ ಏನು ಮಾಡಿಲ್ಲ. ಆಡಳಿತಾತ್ಮಕ ವಿಚಾರಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿಸುತ್ತೇನೆ. ಅಧಿಕಾರಿಗಳದ್ದು ತಪ್ಪು ಇದ್ದರೆ, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ: ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ: ಜಿ.ಪರಮೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.