ಕೊಪ್ಪಳ: ಸಾಮಾಜಿಕ ಹೋರಾಟಗಾರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಹಾಗೂ ಪೊಲೀಸ್ ಅಧಿಕಾರಿ ನಡುವೆ ತೀವ್ರ ವಾಗ್ವಾದ ನಡೆದ ಘಟನೆ ಕೊಪ್ಪಳದಲ್ಲಿ ನಡೆದಿದೆ. ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಕೆಆರ್ಎಎಸ್ ಪಕ್ಷದಿಂದ ಹಮ್ಮಿಕೊಂಡಿರುವ ‘ಚಲಿಸು ಕರ್ನಾಟಕ ಸೈಕಲ್ ಜಾಥಾ’ ಇಂದು ಕೊಪ್ಪಳಕ್ಕೆ ಆಗಮಿಸಿದ ವೇಳೆ ಘಟನೆ ನಡೆದಿದೆ.
ನಗರದ ಅಶೋಕ ಸರ್ಕಲ್ ಬಳಿ ಸೈಕಲ್ ಜಾಥಾ ಕುರಿತು ರವಿಕೃಷ್ಣಾ ರೆಡ್ಡಿ ಅವರು ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಪಕ್ಷದ ಯುವಘಟಕದ ರಾಜ್ಯಾಧ್ಯಕ್ಷ ಪ್ರಭು ಜಾಣಗೆರೆ ಹಾಗೂ ಪಿಎಸ್ಐ ಮಹಾಂತೇಶ ಮೇಟಿ ನಡುವೆ ವಾಗ್ವಾದ ಆರಂಭವಾಯಿತು. ಪಿಎಸ್ಐ ಮಹಾಂತೇಶ ಮೇಟಿ ಅವರು ಪಕ್ಷದ ಮುಖಂಡ ಪ್ರಭು ಜಾಣಗೆರೆ ಅವರಿಗೆ ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಆರೋಪಿಸಿ ಪಿಎಸ್ಐ ಜೊತೆ ಮಾತಿನ ಚಕಮಕಿ ನಡೆಸಿದರು.
ಈ ವೇಳೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. 'ನಾನು ಅವಾಚ್ಯ ಪದ ಬಳಸಿ ಮಾತನಾಡಿಲ್ಲ' ಎಂದು ಪಿಎಸ್ಐ ಮಹಾಂತೇಶ ಮೇಟಿ ಹೇಳಿದರು. ಪಿಎಸ್ಐ ಮಹಾಂತೇಶ್ ಏಕವಚನದಲ್ಲಿ ಮಾತನಾಡಿದ್ದರೆಂದು ಆರೋಪಿಸಿ ವಾಗ್ವಾದ ಮತ್ತಷ್ಟು ಜೋರಾಯಿತು. ಬಳಿಕ ಪಕ್ಷದ ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಓದಿ: ನಾಳೆ ಕರ್ನಾಟಕ ಬಂದ್ಗೆ ನಮ್ಮ ಅನುಮತಿ ಕೇಳಿಲ್ಲ : ನಗರ ಪೊಲೀಸ್ ಆಯುಕ್ತ ಪಂತ್ ಸ್ಪಷ್ಟನೆ