ETV Bharat / state

ಶಾಸನ, ಇತಿಹಾಸ, ರಾಮಾಯಣದಲ್ಲೂ ಕಿಷ್ಕಿಂಧೆ ಉಲ್ಲೇಖವಿದೆ: ಇತಿಹಾಸಕಾರ ಡಾ. ಶರಣಬಸಪ್ಪ

author img

By

Published : Apr 22, 2021, 3:45 PM IST

Updated : Apr 22, 2021, 6:43 PM IST

Dr. Sharanabasappa
ಇತಿಹಾಸಕಾರ ಡಾ. ಶರಣಬಸಪ್ಪ

ಟಿಟಿಡಿ ಮಂಡಿಸಿರುವ ವರದಿಯಲ್ಲಿ ಕೇವಲ ವೆಂಕಟೇಶ್ವರ ಪುರಾಣ ಮಹಾತ್ಮೆಯಲ್ಲಿ ಉಲ್ಲೇಖಿತ ಅಂಶಗಳನ್ನು ಮಾತ್ರ ಪರಿಗಣಿಸಲಾಗಿದೆ. ಆದರೆ, ಇಲ್ಲಿನ ಶಾಸನ, ಜನಪದ ಇತಿಹಾಸ, ರಾಮಾಯಣದಂತಹ ಮಹಾಕಾವ್ಯದಲ್ಲೂ ಕಿಷ್ಕಿಂಧೆ ಮತ್ತು ಅಂಜನಾದ್ರಿಯ ಉಲ್ಲೇಖವಿದೆ ಎಂದು ಹಿರಿಯ ಇತಿಹಾಸಕಾರ ಹಾಗೂ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ.

ಗಂಗಾವತಿ: ಆಂಧ್ರಪ್ರದೇಶದಲ್ಲಿರುವ ತಿರುಪತಿಯಲ್ಲಿನ ಅಂಜನಾದ್ರಿ ಬೆಟ್ಟದಲ್ಲಿಯೇ ಆಂಜನೇಯ ಜನಿಸಿದ್ದಾನೆಂದು ಟಿಟಿಡಿ ಘೋಷಿಸಿರುವ ಬಗ್ಗೆ ಗಂಗಾವತಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಟಿಟಿಡಿ ಹೇಳಿಕೆಯು ಅಸಮಂಜಸ ಹಾಗೂ ಬಾಲೀಶತನದಿಂದ ಕೂಡಿದೆ ಎಂದು ಇತಿಹಾಸಕಾರರು, ಸಂಶೋಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತಿಹಾಸಕಾರ ಡಾ. ಶರಣಬಸಪ್ಪ

ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಇತಿಹಾಸಕಾರ ಹಾಗೂ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ, ಹಿರಿಯ ಕನ್ನಡ ಉಪನ್ಯಾಸಕ ಪವನಕುಮಾರ ಗುಂಡೂರು ಹಾಗೂ ಹಿಂದೂ ಮುಖಂಡ ಸಂತೋಷ್ ಕೇಲೋಜಿ ಅಂಜನಾದ್ರಿಯ ಬಗ್ಗೆ ವಿವಾದ ಹುಟ್ಟು ಹಾಕಿರುವ ಟಿಟಿಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಟಿಟಿಡಿ ಮಂಡಿಸಿರುವ ವರದಿಯಲ್ಲಿ ಕೇವಲ ವೆಂಕಟೇಶ್ವರ ಪುರಾಣ ಮಹಾತ್ಮೆಯಲ್ಲಿ ಉಲ್ಲೇಖಿತ ಅಂಶಗಳನ್ನು ಮಾತ್ರ ಪರಿಗಣಿಸಲಾಗಿದೆ. ಆದರೆ, ಇಲ್ಲಿನ ಶಾಸನ, ಜನಪದ ಇತಿಹಾಸ, ರಾಮಾಯಣದಂತಹ ಮಹಾಕಾವ್ಯದಲ್ಲೂ ಕಿಷ್ಕಿಂಧೆ ಮತ್ತು ಅಂಜನಾದ್ರಿಯ ಉಲ್ಲೇಖವಿದೆ. ರಾಮಾಯಣದ ಕಾಲಘಟ್ಟದಲ್ಲಿ ತಿರುಪತಿ ಕೇವಲ ಒಂದು ನಿರ್ಜನ ಪ್ರದೇಶವಾಗಿತ್ತು ಎಂಬ ಉಲ್ಲೇಖವಿದೆ. ವೆಂಕಟಾಚಲಕ್ಕೆ 19 ಹೆಸರುಗಳಿವೆ ಎಂದು ಸ್ವತಃ ಟಿಟಿಡಿ ಹೇಳುತ್ತದೆ. ಆದರೆ, ಅಂಜನಾದ್ರಿಗೆ ಇರುವುದು ಒಂದೇ ಹೆಸರು ಎಂದು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ತಿಳಿಸಿದರು.

ಆಂಜನೇಯ ಜನ್ಮಸ್ಥಳದ ಕುರಿತು ಉಪನ್ಯಾಸಕರು ಪ್ರತಿಕ್ರಿಯಿಸಿದ್ದಾರೆ

ಹಿರಿಯ ಉಪನ್ಯಾಸಕ ಪವನ ಕುಮಾರ ಮಾತನಾಡಿ, ರಾಮಾಯಣದ ಕಾಲಘಟ್ಟವು ತ್ರೇತಾಯುಗದ್ದಾಗಿದೆ. ದ್ವಾಪರ ಯುಗದ ಅಂತ್ಯದಲ್ಲಿ ವೇದವ್ಯಾಸರಿಂದ ಪುರಾಣಗಳು ರಚನೆಯಾಗಿವೆ. ಅಂದರೆ, ರಾಮಾಯಣ ಕಾಲಘಟ್ಟಕ್ಕೂ ಪುರಾಣಗಳ ಕಾಲಘಟ್ಟಕ್ಕೂ 20 ಸಾವಿರ ವರ್ಷಗಳ ಅಂತರವಿದೆ. ರಾಮಾಯಣದಲ್ಲಿ ಕಿಷ್ಕಿಂಧೆ, ಅಂಜನಾದ್ರಿ, ಮಾತಂಗ ಪರ್ವತ, ವಾಲಿಕಿಲ್ಲಾದಂತ ಎಲ್ಲಾ ಐತಿಹಾಸಿಕ ಉಲ್ಲೇಖವಿದೆ. ಸ್ವತಃ ಕೇಂದ್ರ ಸರ್ಕಾರವೂ ಕಿಷ್ಕಿಂಧೆ ಎಂದರೆ ಕರ್ನಾಟಕದ ಅಂಜನಾದ್ರಿ ಎಂದು ಒಪ್ಪಿಕೊಂಡಿದೆ. ಇಂತಹ ಸಂದರ್ಭದಲ್ಲಿ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಟಿಟಿಡಿ ಮಾಡಬಾರದು ಎಂದು ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಹಿಂದೂ ಮುಖಂಡ ಸಂತೋಷ್ ಕೇಲೋಜಿ, ತಿರುಮಲ ತಿರುಪತಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ವೈ.ವಿ. ಸುಬ್ಬಾರೆಡ್ಡಿ ಹಾಗೂ ಆಂಧ್ರ ಸಿಎಂ ಜಗನ್​ಮೋಹನ್​ ರೆಡ್ಡಿ ಅವರು ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಟಿಟಿಡಿ ಹುಟ್ಟುಹಾಕಿರುವ ಅಂಜನಾದ್ರಿ ಸ್ಥಳದ ಬಗ್ಗೆ ಮಾತ್ರವಲ್ಲ. ಈ ಹಿಂದೆಯೂ ಸಾಕಷ್ಟು ಇಂತಹ ಅವಾಂತರಕ್ಕೆ ಇವರು ಕೈಹಾಕಿದ್ದಾರೆ. ಇದರ ಭಾಗವಾಗಿಯೇ ತಿರುಮಲ, ತಿರುಪತಿಯಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಹುಟ್ಟಿಕೊಳ್ಳಲು ಸಾಧ್ಯವಾಗಿದ್ದು ಎಂದು ಆರೋಪಿಸಿದ್ದಾರೆ.

ಹನುಮ ಜನಿಸಿದ್ದು ಕರ್ನಾಟಕದಲ್ಲಿ, ಅದೂ ಗಂಗಾವತಿಯ ಅಂಜನಾದ್ರಿ ಪರ್ವತದಲ್ಲಿ ಎಂಬುದು ಸಾವಿರಾರು ವರ್ಷಗಳ ಹಿಂದಿನ ನಂಬಿಕೆ. ಕೇವಲ ಸ್ಥಳ ಪುರಾಣ ಆಧರಿಸಿ ಟಿಟಿಡಿ ಅಂಜನಾದ್ರಿಯು ಆಕಾಶಗಂಗೆಯ ಪಕ್ಕದಲ್ಲಿರುವ ಬೆಟ್ಟ ಎಂದು ಹೇಳುತ್ತಿರುವುದು ಸಮಂಜಸವಲ್ಲ. ಸ್ವತಃ ಅಯೋಧ್ಯೆ ರಾಮ ಜನ್ಮ ಭೂಮಿಯ ವಿನ್ಯಾಸ ಸಮಿತಿ ಅಧ್ಯಕ್ಷ ನಿತ್ಯ ಗೋಪಾಲ ದಾಸ್ ಕೂಡ ಅಂಜನಾದ್ರಿಯೇ ಹನುಮ ಜನ್ಮ ಭೂಮಿ ಎಂದು ಒಪ್ಪಿಕೊಂಡಿದ್ದಾರೆ ಎಂದರು.

ಓದಿ: ಮೈಸೂರಿಗೆ ತುರ್ತಾಗಿ 3 ಲಕ್ಷ ಲಸಿಕೆ ಅಗತ್ಯ ಇದೆ: ಸಚಿವ ಎಸ್.ಟಿ.ಸೋಮಶೇಖರ್

Last Updated :Apr 22, 2021, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.