ETV Bharat / state

Kolar crime: ಮಗಳಿಗೆ ಕಿರುಕುಳ ನೀಡುತ್ತಿದ್ದ ಅಳಿಯನ ವಿಚಾರಿಸಲು ಹೋದ ಮಾವನ ಕೊಲೆ

author img

By

Published : Aug 17, 2023, 4:55 PM IST

Updated : Aug 17, 2023, 5:53 PM IST

ಮಾವನನ್ನೆ ಹತ್ಯೆಗೈದ ಅಳಿಯ
ಮಾವನನ್ನೆ ಹತ್ಯೆಗೈದ ಅಳಿಯ

Kolar Murder case: ಮಗಳಿಗೆ ಕಿರುಕುಳ ನೀಡುತ್ತಿರುವುದನ್ನು ವಿಚಾರಿಸಲು ಹೋದ ಮಾವನನ್ನು ಅಳಿಯ ಹತ್ಯೆಗೈದ ಘಟನೆ ಕೋಲಾರದಲ್ಲಿ ನಡೆದಿದೆ.

ಪ್ರಕರಣದ ಬಗ್ಗೆ ಪ್ರಭಾರ ಎಸ್ಪಿ ಹೇಳಿಕೆ

ಕೋಲಾರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಹತ್ಯೆ ಮಾಡಿರುವ ಘಟನೆ ಇಲ್ಲಿಯ ಷಾಹಿದ್​ ನಗರದಲ್ಲಿ ತಡರಾತ್ರಿ ನಡೆದಿದೆ. ಬಾಬು ಷರಿಫ್​ ಕೊಲೆಯಾದ ವ್ಯಕ್ತಿ. ತಬರೇಜ್​ ಹತ್ಯೆ ಮಾಡಿದ ಅಳಿಯ.

ಘಟನೆಯ ಸಂಪೂರ್ಣ ವಿವರ: ಕೆಲ ದಿನಗಳ ಹಿಂದೆ ಅಂದರೆ, 06-07-23ರಂದು ಬಾಬು ಷರೀಫ್​ ಅವರು ತಮ್ಮ ಮಗಳು ಸಾನಿಯಾ ಖಾನಂರನ್ನು ನಿಸಾರ್​ ಪಾಷಾ ಎಂಬವರ ಮಗ ತಬರೇಜ್​ ಪಾಷಾರಿಗೆ ಕೊಟ್ಟು ಮದುವೆ ಮಾಡಿದ್ದರು. ಮದುವೆಯಾದ ಎರಡೇ ದಿನಕ್ಕೆ ತಬರೇಜ್​ ತನ್ನ ಪತ್ನಿ ಸಾನಿಯಾ ಖಾನಂಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದನ್ನು ಸಹಿಸಿಕೊಳ್ಳಲಾಗದೆ ಆಗಸ್ಟ್​ 11ರಂದು ಸಾನಿಯಾ ತವರು ಮನೆಗೆ ವಾಪಸ್​ ಬಂದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ತಬರೇಜ್​, ಹೆಂಡತಿ​ಗೆ ಮೆಸೇಜ್​ ಮಾಡಿ ನಿನ್ನನ್ನು ಸುಮ್ಮನೆ ಬಿಡೋದಿಲ್ಲ ಎಂದೆಲ್ಲ ಧಮ್ಕಿ ಹಾಕಿದ್ದಾನಂತೆ. ಕಳೆದ ರಾತ್ರಿಯೂ ಮೆಸೇಜ್​ ಮಾಡಿ ಬೆದರಿಕೆ ಹಾಕಿದ್ದಾನೆ.

ವಿಷಯ ತಿಳಿದ ಸಾನಿಯಾ ತಂದೆ ಬಾಬು ಷರೀಫ್​​, ವಿಚಾರಿಸಲು ಅಳಿಯನ​ ಮೆನಗೆ ಹೋಗಿದ್ದಾರೆ. ಈ ವೇಳೆ ತಬರೇಜ್​ ಪಾಷಾ ಹಾಗೂ ಆತನ ತಾಯಿ ಜಬೀನಾ ತಾಜ್,​ ಷರೀಫ್​​ಗೆ ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಷರೀಫ್​ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದು ಕೋಲಾರ ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಿ ತಬರೇಜ್​ ಪಾಷಾ ತಲೆಮರೆಸಿಕೊಂಡಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಹೆದ್ದಾರಿ ಬಳಿ ಅವಿತುಕೊಂಡಿದ್ದ ಆರೋಪಿ ಹಾಗೂ ಜಬೀನಾ ತಾಜ್​ ಇಬ್ಬರನ್ನೂ ಬಂಧಿಸಿದ್ದಾರೆ.

ಘಟನೆ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮೃತ ಷರೀಫ್​ ಮಗಳು ಸಾನಿಯಾ ಖಾನಂ, ನಿನ್ನೆ ಸಂಜೆ ತಬರೇಜ್​ ನನಗೆ ಕಾಲ್​ ಮಾಡಿ ಧಮ್ಕಿ ಹಾಕಿದ್ದಾನೆ. ನಿಮ್ಮ ಕುಟುಂಬದಿಂದ ನನಗೆ ತೊಂದರೆಯಾಗುತ್ತಿದೆ. ನಿನ್ನ ತಂದೆಯನ್ನು ಸಾಯಿಸುವುದಾಗಿ ಬೆದರಿಕೆವೊಡ್ಡಿದ್ದಾನೆ. ಈ ಬಗ್ಗೆ ನನ್ನ ತಂದೆ ವಿಚಾರಣೆ ಮಾಡಲು ರಾತ್ರಿ ಆತನ ಮನೆಗೆ ಹೋದಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದಕ್ಕೂ ಮೊದಲು ನನಗೂ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಮನೆಯಲ್ಲಿ ಗ್ಯಾಸ್​ ಸಿಲಿಂಡರ್​ ಹಚ್ಚಿ ಸಾಯಿಸುವುದಾಗಿ ಮತ್ತು ಚಾಕುವಿನಿಂದ ಇರಿಯುವುದಾಗಿ ಹೆದರಿಸುತ್ತಿದ್ದ. ಅಲ್ಲದೇ ಎರಡು ಬಾರಿ ಚಾಕುವನ್ನು ತೋರಿಸಿದ್ದ ಎಂದು ಸಾನಿಯಾ ಖಾನಂ ಹೇಳಿದ್ದಾರೆ.

ಜಿಲ್ಲಾ ಪ್ರಭಾರ ಎಸ್ಪಿ ಶಾಂತಾರಾಜು ಹೇಳಿಕೆ: "ಬಾಬು ಷರೀಫ್​ ಅವರು ತಮ್ಮ ಮಗಳು ಮತ್ತು ಅಳಿಯನ ನಡುವಿನ ಮನಸ್ತಾಪದ ಬಗ್ಗೆ ವಿಚಾರ ಮಾಡಲು ನಿನ್ನೆ ರಾತ್ರಿ ಹೋಗಿದ್ದಾರೆ. ಈ ವೇಳೆ ಅಳಿಯ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದಾನೆ. ಕೋಲಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮಾಡಲಾಗುತ್ತಿದೆ" ಎಂದರು.

ಇದನ್ನೂ ಓದಿ: ಆಹ್ವಾನ ಪತ್ರ ಕೊಡುವ ನೆಪದಲ್ಲಿ ಬಂದ ಅಪರಿಚಿತರು: ದಂಪತಿಗೆ ಚಾಕುವಿನಿಂದ ಇರಿದು ಪರಾರಿ

Last Updated :Aug 17, 2023, 5:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.