ಕಲಬುರಗಿ: ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡ ಪ್ರೇಮಿಗಳಿಗೆ ಪೋಷಕರು ಈಗ ಜೀವಬೆದರಿಕೆ ಹಾಕಿದ್ದಾರೆ. ಯುವತಿ ಪೋಷಕರು ಮತ್ತು ಪೊಲೀಸರು ಧಮ್ಕಿ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿಂದೆ.
ತಮಗೆ ಜೀವ ಭಯವಿದೆ ಎಂದು ರಕ್ಷಣೆ ಕೋರಿ ಪ್ರೇಮಿಗಳಿಬ್ಬರು ಠಾಣೆ ಮೆಟ್ಟಿಲೇರಿದ್ದಾರೆ. ಯುವಕ ಅಯ್ಯಪ್ಪ ಸ್ವಾಮಿ ಮತ್ತು ಯುವತಿ ಕಸ್ತೂರಿ ಈ ಗಂಭೀರ ಆರೋಪ ಮಾಡಿದ್ದಾರೆ.
ಅಯ್ಯಪ್ಪಸ್ವಾಮಿ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ನಿವಾಸಿ ಹಾಗೂ ಕಸ್ತೂರಿ ಕಲಬುರಗಿ ನಿವಾಸಿಯಾಗಿದ್ದಾಳೆ. ಕಳೆದ ನವೆಂಬರ್ನಲ್ಲಿ ಇಬ್ಬರು ಮದುವೆಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಯುವತಿ ಪೋಷಕರ ದೂರಿನ ಹಿನ್ನೆಲೆ ಯುವಕನ ತಂದೆ-ತಾಯಿಯನ್ನು ಠಾಣೆಗೆ ಕರೆತಂದು ಮನಬಂದಂತೆ ಥಳಿಸಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಅದೇ ಕಾರಣಕ್ಕೆ ಮಹಿಳಾ ಠಾಣೆಯ ಸಿಪಿಐ ಸಂಗಮೇಶ ಪಾಟೀಲ ಮತ್ತು ಪಿಸಿ ನೆಹರು ಸಿಂಗ್ ಎಂಬುವರನ್ನು ಅಮಾನತು ಮಾಡಲಾಗಿತ್ತು. ಇದೆಲ್ಲಾ ಬೆಳವಣಿಗೆ ನಂತರ ಹೈಕೋರ್ಟ್ಗೆ ಹಾಜರಾಗಿದ್ದ ನವವಿವಾಹಿತರಿಗೆ ಇಬ್ಬರೂ ಮೇಜರ್ ಆಗಿರೋದ್ರಿಂದ ಮದುವೆಗೆ ಹೈಕೋರ್ಟ್ ಸಮ್ಮತಿ ಸೂಚಿಸಿತ್ತು.
ಆದರೆ, ಇದೀಗ ಪೊಲೀಸರು ಮತ್ತು ಯುವತಿ ಪೋಷಕರಿಂದ ಪದೇ ಪದೆ ಕಿರುಕುಳ ಮುಂದುವರೆದಿದೆಯಂತೆ. ದೂರವಾಣಿ ಕರೆ ಮಾಡಿ ನಿಮ್ಮನ್ನು ಸುಮ್ಮನೇ ಬಿಡಲ್ಲ, ಪೊಲೀಸರನ್ನು ಎದುರು ಹಾಕಿಕೊಂಡರೆ ಏನು ಗತಿ ಅಂತ ಮಾಡಿ ತೋರಿಸೋದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರೇಮಿಗಳು ಆರೋಪಿಸಿದ್ದಾರೆ. ಅಲ್ಲದೆ ಮಹಿಳಾ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಸಹ ಇವರ ಮೇಲೆ ರೇಗಾಡಿದ್ದಾರೆ ಎಂಬ ಆರೋಪ ಇದೆ.
ಒಂದು ಕಡೆ ಯುವತಿ ಪೋಷಕರಿಂದ ಬೆದರಿಕೆ ಕರೆ, ಮತ್ತೊಂದು ಕಡೆ ರಕ್ಷಣೆ ನೀಡಬೇಕಾದ ಪೊಲೀಸರಿಂದಲೂ ಬೆದರಿಕೆ ಬರುತ್ತಿವೆ. ಇವರಿಂದ ನಮ್ಮ ಮತ್ತು ನಮ್ಮ ಪೋಷಕರಿಗೆ ಜೀವ ಭಯವಿದೆ. ಸೂಕ್ತ ರಕ್ಷಣೆ ನೀಡುವಂತೆ ಯುವಕ ಮನವಿ ಮಾಡಿದ್ದಾನೆ.