ETV Bharat / state

ಕಲಬುರಗಿಯಲ್ಲಿ 'ಕಲ್ಯಾಣ ಕರ್ನಾಟಕ ಉತ್ಸವ'ಕ್ಕೆ‌ ಹಸಿರು ನಿಶಾನೆ: ಫೆ 24 ರಿಂದ ಮೂರು ದಿನಗಳ ಐತಿಹಾಸಿಕ ಸಂಭ್ರಮ

author img

By

Published : Feb 3, 2023, 11:35 AM IST

Meeting of Committees
ಸಮಿತಿಗಳ ಸಭೆ

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳದಲ್ಲಿಯೇ ಈ ಕಲ್ಯಾಣ ಕರ್ನಾಟಕ ಉತ್ಸವ ನಡೆಯಲಿದೆ.

ಕಲಬುರಗಿ: ಐತಿಹಾಸಿಕ ಕಲಬುರಗಿ ಕಂಪು ಕಾರ್ಯಕ್ರಮದ ಬಳಿಕ ಇದೀಗ 12 ವರ್ಷಗಳ ನಂತರ ಮತ್ತೊಂದು ಅದೇ ಮಾದರಿಯಲ್ಲಿ 'ಕಲ್ಯಾಣ ಕರ್ನಾಟಕ ಉತ್ಸವ' ಕಾರ್ಯಕ್ರಮ ನಡೆಸೋದಕ್ಕೆ ಸರ್ಕಾರ ಮನಸ್ಸು ಮಾಡಿದೆ. ಕಲ್ಯಾಣ ಕರ್ನಾಟಕದ ಕಲೆ, ಸಂಸ್ಕೃತಿ, ಸ್ಥಳೀಯ ಪರಂಪರೆ ಅನಾವರಣಗೊಳಿಸಲು ಮೂರು ದಿನಗಳ “ಕಲ್ಯಾಣ ಕರ್ನಾಟಕ ಉತ್ಸವ” ವನ್ನು ಇದೇ ಫೆಬ್ರವರಿ 24 ರಿಂದ 26ರ ವರೆಗೆ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಗುಲಬರ್ಗಾ ವಿ.ವಿ. ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳದಲ್ಲಿಯೇ ಉತ್ಸವ ನಡೆಯಲಿದೆ. 100x60 ಚದುರ ಅಡಿ ಮುಖ್ಯ ವೇದಿಕೆ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ವಿ.ವಿ ಬಯಲು ರಂಗಮಂದಿರದಲ್ಲಿ ಎರಡು ಉಪ ವೇದಿಕೆ ನಿರ್ಮಿಸಿ ಸಾಂಸ್ಕೃತಿಕ ಮತ್ತು ಜಾನಪದ ಕಾರ್ಯಕ್ರಮಗಳಿಗೆ ಅನಕೂಲ ಕಲ್ಪಿಸಲಾಗುತ್ತಿದೆ.

ಮೂರು ದಿನಗಳ ಉತ್ಸವ ಆಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದ್ದರಿಂದ ಕಾರ್ಯಕ್ರಮ ಐತಿಹಾಸಿಕವಾಗುವಂತೆ ಮಾಡಬೇಕು ಎಂದು ಗುರುವಾರ ಉತ್ಸವ ಯಶಸ್ಸಿಗೆ ರಚನೆ ಮಾಡಿರುವ ವಿವಿಧ ಸಮಿತಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಅನಿರುದ್ಧ ಶ್ರವಣ ಅವರು ಅಧಿಕಾರಿಗಳಿಗೆ ತಮ್ಮ ತಮ್ಮ ಕಾರ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸೂಚಿಸಿದ್ದಾರೆ.

ಈ ಉತ್ಸವಕ್ಕೆ ದೇಶದ ಹಲವಡೆಯಿಂದ ಜನಪ್ರತಿನಿಧಿಗಳು, ಗಣ್ಯರು, ಕಲಾವಿದರು, ಬಾಲಿವುಡ್ ಮತ್ತು ಸ್ಯಾಂಡಲ್‍ವುಡ್ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಎಲ್ಲರಿಗೂ ಊಟ, ವಸತಿ, ಸಾರಿಗೆ ಹೀಗೆ ಪ್ರತಿಯೊಂದು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲು ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ನೀಡಲಾಗಿದೆ. ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಉತ್ಸವಕ್ಕೆ ಸಂಪೂರ್ಣ ಖರ್ಚು - ವೆಚ್ಚವನ್ನು ಮಂಡಳಿ ಭರಿಸಲಿದೆ ಎಂದು ಅನಿರುದ್ಧ ಶ್ರವಣ ಸ್ಪಷ್ಟಪಡಿಸಿದ್ದಾರೆ.

ಗಮನ ಸೆಳೆಯಲಿರುವ ಪ್ರದರ್ಶನಗಳು: ಉತ್ಸವದ ನಿಮಿತ್ತ ಶ್ವಾನಗಳ ಪ್ರದರ್ಶನ, ಕೃಷಿ ಮೇಳ, ಮಕ್ಕಳ ಮತ್ತು ಮಹಿಳೆಯರ ಹಬ್ಬ, ಗಾಳಿಪಟ ಉತ್ಸವ, ಚಿತ್ರಕಲೆ ಮತು ಶಿಲ್ಪ ಕಲೆಗಳ ಕಾರ್ಯಾಗಾರ, ಫಲಪುಷ್ಪ ಪ್ರದರ್ಶನ, ಚಿತ್ರ ಸಂತೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕುಸ್ತಿ, ಮಲ್ಲಕಂಬ ಸೇರಿದಂತೆ ಗ್ರಾಮೀಣ ಮತ್ತು ಸಾಹಸ ಕ್ರೀಡೆಗಳು ಹಾಗೂ ಜಲ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ.

ಕಲಬುರಗಿ ಕೋಟೆ ಸೇರಿದಂತೆ ಸ್ಥಳೀಯ ಪ್ರಮುಖ ಸರ್ಕಾರಿ ಕಚೇರಿಗಳು,ವೃತ್ತಗಳು, ಐತಿಹಾಸಿಕ ಸ್ಮಾರಕಗಳನ್ನು ವಿದ್ಯುದೀಪಗಳಿಂದ ಆಲಂಕೃತಗೊಳಿಲಾಗುತ್ತದೆ. ವಸ್ತು ಪ್ರದರ್ಶನ, ಕವಿಗಳೊಂದಿಗೆ ಮುಕ್ತ ಸಂವಾದ, ಮೂರು ದಿನಗಳ ಉತ್ಸವದಲ್ಲಿ ವಸ್ತು ಪ್ರದರ್ಶನ ಮಳಿಗೆ ಹಾಕಲಾಗುತ್ತಿದ್ದು, ಸ್ಥಳೀಯ ಕೈಗಾರಿಕೆ, ಆಹಾರ, ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಇಲ್ಲಿ ಅವಕಾಶ ನೀಡಲಾಗುತ್ತದೆ. ಹಾಗೂ ಸ್ಥಳೀಯ ಖ್ಯಾತ ಬರಹಗಾರರು, ಕವಿಗಳು ಸಾರ್ವಜನಿಕರು, ಓದುಗರೊಂದಿಗೆ ಮುಕ್ತವಾಗಿ ಸಂವಾದ ನಡೆಸಲಿದ್ದಾರೆ.

ಹೆಲಿರೈಡ್ ಪ್ರಮುಖ ಆಕರ್ಷಣೆ : ಉತ್ಸವದಲ್ಲಿ ಪ್ರಮುಖವಾಗಿ ಹೆಲಿಕಾಫ್ಟರ್ ರೈಡ್ ಸಾರ್ವಜನಿಕರ ಆಕರ್ಷಣೆಯಾಗಲಿದೆ. ಹೆಲಿಪ್ಯಾಡ್ ನಿರ್ಮಾಣ ಮತ್ತು ಹೆಲಿರೈಡ್‍ಗೆ ಸಿದ್ಧತೆ ಮಾಡಿಕೊಳ್ಳುವಂತೆ ಹಾಗೂ ಸಂಬಂಧಿಸಿದ ಸಂಸ್ಥೆಗಳೊಂದಿಗೆ ಚರ್ಚಿಸುವಂತೆ ಅಧಿಕಾರಿಗಳಿಗೆ ಅನಿವೃದ್ಧ ಶ್ರವಣ ಸೂಚಿಸಿದ್ದಾರೆ. ಜೊತೆಗೆ ಮ್ಯಾರಥಾನ್, ಸೈಕ್ಲಥಾನ್, ಹಾಟ ಏರ್ ಬಲೂನ್‍ಗಳ ಹಾರಾಟ ಸಹ ಆಯೋಜಿಸಲಾಗುತ್ತಿದೆ.

ಉತ್ಸವಕ್ಕೆ ಖಾದ್ಯ, ಮತ್ಸ್ಯ ಮೇಳ ಮೆರಗು: ಕಲ್ಯಾಣ ಕರ್ನಾಟಕದ ಮಾಮು ಮಾಲ್ ಪುರಿ, ಸುಸಲಾ ಭಜಿ ಸೇರಿದಂತೆ ಸ್ಥಳೀಯ ತಿಂಡಿ ತಿನುಸು ಖಾದ್ಯಗಳ ಜೊತೆಗೆ ಇತರ ಪ್ರದೇಶ ಹಾಗೂ ಹೊರ ರಾಜ್ಯದ ಖಾದ್ಯಗಳ ಮೇಳ ಸಹ ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಕಲಾ ರಸಿಕರು ವಿವಿಧ ತಿಂಡಿಗಳನ್ನು ಸವಿಯಬಹುದಾಗಿದೆ. ಇದರ ಜೊತೆಗೆ ಮತ್ಸ್ಯ ಮೇಳ ಸಹ ಆಯೋಜಿಸಲಾಗುತ್ತಿದ್ದು, ರಂಗು - ರಂಗೀನ ಮೀನುಗಳ ಪ್ರದರ್ಶನ ನಡೆಯಲಿದೆ.

ಮೂರು ದಿನಗಳ ಉತ್ಸವಕ್ಕೆ ಜಿಲ್ಲೆಯ ವಿವಿಧ ಕಡೆಯಿಂದ ಸಾರ್ವಜನಿಕರ ಆಗಮಿಸಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವೇದಿಕೆ ಸುತ್ತಮುತ್ತ ವಾಹನಗಳ ಪಾರ್ಕಿಂಗ್ ವ್ಯಸವ್ಥೆ, ಪೊಲೀಸ್ ಬಂದೋಬಸ್ತ್ ಮತ್ತು ತಾತ್ಕಾಲಿಕ ಆರೋಗ್ಯ ಕೇಂದ್ರ ಅಲ್ಲಿ ಸ್ಥಾಪಿಸಲಾಗುತ್ತದೆ. ಉತ್ಸವದ ಮೊದಲನೇ ದಿನದಂದು ಪ್ರದೇಶದ ಏಳು ಜಿಲ್ಲೆಗಳ ಸಾಂಸ್ಕೃತಿಕ, ಜಾನಪದ ಕಲಾ ತಂಡಗಳು ಮತ್ತು ಕುಂಭಕಳಸದೊಂದಿಗೆ ಭವ್ಯ ಮೆರವಣಿಗೆ ನಗರದ ನಿಗದಿತ ಸ್ಥಳದಿಂದ ವೇದಿಕೆ ಸ್ಥಳದ ವರೆಗೆ ಜಾನಪದ ಶೋಭಾ ಯಾತ್ರೆ ಸಾಗಲಿದೆ ಎಂದು‌ ಅನಿರುದ್ಧ ಶ್ರವಣ ತಿಳಿಸಿದ್ದಾರೆ.

ಇದನ್ನೂ ಓದಿ :ಗುಲ್ಬರ್ಗಾ ವಿವಿ 36ನೇ ಅಂತರ ವಿಶ್ವವಿದ್ಯಾಲಯ ದಕ್ಷಿಣ ಪೂರ್ವ ವಲಯ ಬೃಹತ್‌ ಯುವಜನೋತ್ಸವಕ್ಕೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.