ಹಾವೇರಿ: ಜಿಲ್ಲೆಯಲ್ಲಿ ಇದೀಗ ರಾತ್ರಿ ರಾಣಿಯರದೇ ಮಾತು. ರಾತ್ರಿ ವೇಳೆಯಲ್ಲಿ ಮಾತ್ರ ಅರಳುವ ಈ ಶ್ವೇತ ಸುಂದರಿಯರ ಸೊಬಗಿಗೆ ಹೆಂಗಳೆಯರು ಮನಸೋತಿದ್ದಾರೆ. ಹಿಮಾಲಯದ ತಪ್ಪಲಿನಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಬೆಡಗಿಯರು ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕಂಡು ಬರುತ್ತಿದ್ದಾರೆ. ಪ್ರತಿ ವರ್ಷ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಅದೂ ವರ್ಷದಲ್ಲಿ ಒಂದು ದಿನ ಕೇವಲ 5 ಗಂಟೆಗಳ ಕಾಲ ತಮ್ಮ ಬಿನ್ನಾಣದಿಂದ ಎಲ್ಲರ ಮನಸೆಳೆಯುವ ಈ ಬಿಳಿ ಸುಂದರಿಯರ ವಿಶೇಷವಿದು.
ಹಿಮಾಲಯ ತಪ್ಪಲು ಮತ್ತು ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಬ್ರಹ್ಮಕಮಲ ಕಳೆದ ಕೆಲವು ವರ್ಷಗಳಿಂದ ಹಾವೇರಿ ಜಿಲ್ಲೆಯಾದ್ಯಂತ ಕಾಣಲಾರಂಭಿಸಿದೆ. ಜೂನ್ ಮತ್ತು ಜುಲೈ ತಿಂಗಳು ಬಂತೆಂದರೆ ಸಾಕು ಬ್ರಹ್ಮಕಮಲ ಗಿಡ ಹೂವುಗಳಿಂದ ಕಂಗೊಳಿಸುತ್ತದೆ. ಈ ಗಿಡದ ವಿಶೇಷ ಅಂದರೆ ಎಲೆಯಲ್ಲಿ ಬೇರು ಬಿಟ್ಟು ಎಲೆಯಲ್ಲಿ ಕಾಂಡವಾಗಿ ಎಲೆಯಲ್ಲಿ ಹೂ ಬಿಡುವುದು. ಕ್ಯಾಕಸ್ ಜಾತಿಗೆ ಸೇರಿದ ಈ ಬ್ರಹ್ಮಕಮಲದ ವೈಜ್ಞಾನಿಕ ನಾಮಧೇಯ ಎಪಿಪಿಲಮ್ ಆಕ್ಸಿಪೆಟಲ್. ವರ್ಷದಲ್ಲಿ ಒಂದು ಬಾರಿ ಅದೂ ರಾತ್ರಿ ವೇಳೆ ಕೇವಲ 5 ಗಂಟೆ ಅರಳುವ ಈ ಬ್ರಹ್ಮಕಮಲವನ್ನ ರಾತ್ರಿ ರಾಣಿಯೆಂದು ಕರೆಯಲಾಗುತ್ತದೆ.
ಮಳೆಗಾಲದ ಈ ದಿನಗಳಲ್ಲಿ ಹೂ ಬಿಡುವ ಈ ಶ್ವೇತ ಸುಂದರಿಯ ದರ್ಶನಕ್ಕೆ ಜನತೆ ಕಾಯುತ್ತಾರೆ. ರಾತ್ರಿ 8 ಗಂಟೆಯಿಂದ 12 ಗಂಟೆಯವರೆಗೆ ಮಾತ್ರ ಕಾಣುವ ಇದರ ಸೌಂದರ್ಯವನ್ನು ಅಸ್ವಾದಿಸುತ್ತಾರೆ. ದೇಶದಲ್ಲಿ ಎಲ್ಲ ದೇವರ ದೇವಸ್ಥಾನಗಳಿದೆ, ಆದರೆ ಬ್ರಹ್ಮದೇವನ ದೇವಸ್ಥಾನ ಇಲ್ಲ. ಆದ್ದರಿಂದ ಈ ಬ್ರಹ್ಮಕಮಲದಲ್ಲಿ ಬ್ರಹ್ಮನನ್ನ ಕಾಣುವುದಾಗಿ ಜನರು ಸಂತಸ ವ್ಯಕ್ತಪಡಿಸುತ್ತಾರೆ. ರಾಮಾಯಣ- ಮಹಾಭಾರತ ಸೇರಿದಂತೆ ಹಲವು ಪುರಾಣಗಳಲ್ಲಿ ಕಾವ್ಯಗಳಲ್ಲಿ ಇದರ ವರ್ಣನೆ ಇದೆ ಎನ್ನುತ್ತಾರೆ ಸಾಹಿತಿಗಳು.
ಬ್ರಹ್ಮಕಮಲ ಅರಳುತ್ತಿದ್ದಂತೆ ಅಕ್ಕಪಕ್ಕದ ಮನೆಯ ಮುತ್ತೈದೆಯರನ್ನು ಕರೆದು ಅದಕ್ಕೆ ಆರತಿ ಮಾಡುವ ಸಂಪ್ರದಾಯ ಜಿಲ್ಲೆಯಲ್ಲಿ ಕಂಡುಬರುತ್ತಿದೆ. ಅಲ್ಲದೇ ಅರಿಶಿಣ ಕುಂಕುಮ ವಿನಿಮಯ ಮಾಡಿಕೊಳ್ಳುವ ಮುತ್ತೈದೆಯರು ಬ್ರಹ್ಮ ಕಮಲಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆಯಾಗಿ ತಮ್ಮ ವಿಶೇಷತೆ ಸ್ನಿಗ್ದ ಸೌಂದರ್ಯಕ್ಕೆ ಬ್ರಹ್ಮಕಮಲಗಳು ಪುಷ್ಪಪ್ರಿಯರನ್ನು ಆಕರ್ಷಿಸುತ್ತವೆ.