ETV Bharat / state

ರಾಜ್ಯದ ಚುನಾವಣೆಯಿಂದ ನಾನು ನಿವೃತ್ತಿಯಾಗ್ತೇನೆ, ಮಗನಿಗೆ ಅವಕಾಶ ಕಲ್ಪಿಸುತ್ತೇನೆ: ಕೋಳಿವಾಡ ಘೋಷಣೆ

author img

By

Published : Jul 22, 2022, 7:46 PM IST

im-retired-from-state-politics-i-will-give-my-son-a-chance-says-congress-leader-kb-koliwada
ರಾಜ್ಯ ಚುನಾವಣಾ ಕ್ಷೇತ್ರದಿಂದ ನಾನು ನಿವೃತ್ತಿ, ಮಗನಿಗೆ ಅವಕಾಶ ಕಲ್ಪಿಸುತ್ತೇನೆ: ಕೋಳಿವಾಡ ಘೋಷಣೆ

ರಾಜಕೀಯದಲ್ಲಿ ಐದು ದಶಕಗಳ ಕಾಲ ಸಕ್ರಿಯ ರಾಜಕಾರಣ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ಸಮಕಾಲೀನರು. ಪಕ್ಷ ಬಯಸಿದರೆ ಲೋಕಸಭೆ ಮತ್ತು ರಾಜ್ಯಸಭೆಗೆ ಸ್ಪರ್ಧಿಸುವುದಾಗಿ ಎಂದು ಹಿರಿಯ ಕಾಂಗ್ರೆಸ್​ ನಾಯಕ ಕೆ.ಬಿ.ಕೋಳಿವಾಡ ಹೇಳಿದ್ದಾರೆ.

ಹಾವೇರಿ: ರಾಜ್ಯದ ಚುನಾವಣಾ ಕ್ಷೇತ್ರದಿಂದ ನಾನು ನಿವೃತ್ತಿಯಾಗಿದ್ದು, ಇನ್ಮುಂದೆ ರಾಜ್ಯದಲ್ಲಿ ಯಾವುದೇ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ನಾನು ಹಿಂದೆ ಸರಿದು ಮಗನಿಗೆ ಅವಕಾಶ ಕಲ್ಪಿಸಿ ಕೊಡುತ್ತೇನೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಘೋಷಿಸಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮಗನಿಗೆ ಅವಕಾಶ ಕಲ್ಪಿಸುವಂತೆ ಪಕ್ಷದ ಹೈಕಮಾಂಡ್​ನಿಂದಲೇ ಸೂಚನೆ ಬಂದಿದೆ. ಅದರಂತೆ ನಾನು ನಡೆದುಕೊಳ್ಳುತ್ತೇನೆ. 1972ರಿಂದ ರಾಜಕೀಯದಲ್ಲಿ ಐದು ದಶಕಗಳ ಕಾಲ ಸಕ್ರಿಯ ರಾಜಕಾರಣ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ಸಮಕಾಲೀನರು. ಸಿದ್ದರಾಮಯ್ಯ ನನಗಿಂತ 11 ವರ್ಷ ಕಿರಿಯರು, ಶಿವಕುಮಾರ್​ ಇನ್ನೂ ಕಿರಿಯ. ನಾನು, ಖರ್ಗೆ, ವೀರಪ್ಪ ಮೊಯ್ಲಿ ಹಿರಿಯ ನಾಯಕರು. ಪಕ್ಷ ಬಯಸಿದರೆ ಲೋಕಸಭೆ ಮತ್ತು ರಾಜ್ಯಸಭೆಗೆ ಸ್ಪರ್ಧಿಸುವುದಾಗಿ ತಿಳಿಸಿದರು.

ರಾಜ್ಯ ಚುನಾವಣಾ ಕ್ಷೇತ್ರದಿಂದ ನಾನು ನಿವೃತ್ತಿ, ಮಗನಿಗೆ ಅವಕಾಶ ಕಲ್ಪಿಸುತ್ತೇನೆ: ಕೋಳಿವಾಡ ಘೋಷಣೆ

ಇದೇ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ತಮ್ಮ ಮಗನಿಗಾಗಿ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ವಿಜಯೇಂದ್ರ ಪರಿಷತ್‌ಗೆ ಪ್ರಯತ್ನಿಸಿದರೂ ಆಗಲಿಲ್ಲ. ಈಗ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಇದಕ್ಕೆ ಬಿಜೆಪಿ ಹೈಕಮಾಂಡ್​ ಯಾವ ರೀತಿ ಸ್ಪಂದಿಸುತ್ತದೆ ಎಂಬುವುದು ಅವರಿಗೆ ಬಿಟ್ಟ ವಿಚಾರ ಎಂದರು.

ಸಿಎಂ ಆಸೆ ತಪ್ಪಲ್ಲ: ಮುಖ್ಯಮಂತ್ರಿ ಆಗಬೇಕೆಂದೂ ಎಲ್ಲರಿಗೂ ಆಸೆ ಇರುತ್ತೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಡಾ.ಜಿ.ಪರಮೇಶ್ವರ ಅವರಿಗೂ ಇರಬಹುದು. ಆಸೆ ಇರುವುದು ತಪ್ಪಲ್ಲ. ಶಿವಕುಮಾರ್ ಒಕ್ಕಲಿಗರನ್ನು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್​ಗೆ ಸೆಳೆಯಲು ತಾವೆಲ್ಲ ನನಗೆ ಬೆಂಬಲಿಸಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಕರೆದಿದ್ದರಲ್ಲಿ ತಪ್ಪೇನಿಲ್ಲ ಎಂದು ಕೋಳಿವಾಡ​ ಹೇಳಿದರು.

ಕಚ್ಚಾಡುವುದನ್ನು ಕೈಬಿಡಬೇಕು: ನಮ್ಮ ನಾಯಕರಿಗೆ ಪಕ್ಷಕ್ಕೆ ಮಾರಕವಾಗುವಂತಹ ರೀತಿಯಲ್ಲಿ ಒಬ್ಬರಿಗೊಬ್ಬರು ಕಚ್ಚಾಡುವುದನ್ನು ಕೈಬಿಡಿ ಎಂದು ಸಲಹೆ ನೀಡುತ್ತೇನೆ. ಪಕ್ಷದ ಹಿತಕ್ಕಾಗಿ ಕೆಲಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಯತ್ನ ಮಾಡೋಣ. ಬಿಜೆಪಿ ನಾಯಕರು, ನಮ್ಮ ನಾಯಕರ ಹೇಳಿಕೆಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಆ ರೀತಿ ಅವಕಾಶ ಕಲ್ಪಿಸಿಕೊಡದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಮುಜುಗರವಾಗುವಂತ ಹೇಳಿಕೆ ಬೇಡ: ಹಿರಿಯ ಶಾಸಕ ರಮೇಶಕುಮಾರ್ ಗುರುವಾರ ಕೊಟ್ಟಿರುವ ಹೇಳಿಕೆ ಪಕ್ಷದ ಮೇಲೆ ಪರಿಣಾಮ ಬೀರುವ ಅವಕಾಶ ಇದೆ. ಬಿಜೆಪಿಯವರು ಬೇರೆ - ಬೇರೆ ಮಾಧ್ಯಮಗಳ ಮೂಲಕ ಈ ಹೇಳಿಕೆಯನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಅವಕಾಶಗಳನ್ನು ಕಾಂಗ್ರೆಸ್ ನಾಯಕರು ಬಿಜೆಪಿಯವರಿಗೆ ನೀಡಬಾರದು. ಪಕ್ಷಕ್ಕೆ ಮುಜುಗರವಾಗುವಂತ ಹೇಳಿಕೆ ನೀಡಬೇಡಿ, ಮೊದಲು ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರೋಣ, ರಾಜ್ಯದಲ್ಲಿ ಕಾಂಗ್ರೆಸ್​ ಒಳ್ಳೆಯ ಅವಕಾಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ನಡುಕ ಹುಟ್ಟಿಸಿದೆ: 2023ರಲ್ಲಿ ಕಾಂಗ್ರೆಸ್ 130ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ. ಇದು ಬಿಜೆಪಿಯವರಿಗೆ ನಡುಕ ಹುಟ್ಟಿಸಿದೆ. ಬಿಜೆಪಿಯವರು ಕೇವಲ ಭಾವನಾತ್ಮಕ ವಿಚಾರಗಳ ಮೇಲೆ ತಮ್ಮ ರಾಜಕೀಯ ನಡೆಸುತ್ತಾ ಹೊರಟಿದ್ದಾರೆ. ಅದು ವರ್ಕೌಟ್ ಆಗುವುದಿಲ್ಲ ಎಂದು ಹೇಳಿದರು.

ಜನ ದಂಗೆ ಎದ್ದರೂ ಆಶ್ಚರ್ಯ ಇಲ್ಲ: ದೇಶದ ಆರ್ಥಿಕ ಪರಿಸ್ಥಿತಿ ಹದೆಗಟ್ಟಿದ್ದು, ಶ್ರೀಲಂಕಾ ಪರಿಸ್ಥಿತಿ ಭಾರತಕ್ಕೆ ಬಂದು ಜನ ದಂಗೆ ಎದ್ದರೂ ಆಶ್ಚರ್ಯಪಡಬೇಕಾಗಿಲ್ಲ ಎಂದೂ ಎಚ್ಚರಿಸಿದ ಕೋಳಿವಾಡ, ಬರುವ ಚುನಾವಣೆಗಳಲ್ಲಿ ಮತದಾರರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದರೆ, ಬಡವರು ಮತ್ತು ದೇಶಕ್ಕೆ ಒಳಿತಾಗಲಿದೆ ಎಂದರು.

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ: ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.