ETV Bharat / state

ಜನವರಿಯಲ್ಲಿ ರಾಜ್ಯ ಸರ್ಕಾರ ಪತನ - ಯತ್ನಾಳ್​ ಭವಿಷ್ಯ..

author img

By ETV Bharat Karnataka Team

Published : Sep 17, 2023, 5:36 PM IST

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​
ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​

ನಾವೇನೂ ಸರ್ಕಾರ ಬೀಳಿಸುವ ಪ್ರಯತ್ನ ನಡೆಸಿಲ್ಲ. ತಾನಾಗಿಯೇ ಸರ್ಕಾರ ಪತನವಾಗಲಿದೆ ಕಾದು ನೋಡಿ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ತಿಳಿಸಿದ್ದಾರೆ.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​

ಹುಬ್ಬಳ್ಳಿ : ಜನವರಿಯಲ್ಲಿ ರಾಜ್ಯದಲ್ಲಿ ಬದಲಾವಣೆಯಾಗಲಿದೆ.‌ ರಾಜ್ಯ ಸರ್ಕಾರ ಪತನವಾಗುತ್ತದೆ. ಅವರ ಪಕ್ಷದವರೇ ಅವರ ಸರ್ಕಾರವನ್ನು ಬೀಳಿಸಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ನಾವೇ ನೇರವಾಗಿ ಸಿಎಂ ಆಗಬಹುದು ಅಂತಾ ವಿರೋಧ ಪಕ್ಷದ ನಾಯಕನನ್ನ ಇದುವರೆಗೂ ಆಯ್ಕೆ ಮಾಡಿಲ್ಲ. ವಿರೋಧ ಪಕ್ಷದ ಬದಲು ಸಿಎಂ ಆಗಬಹುದು ಅಂತಾ ವಿಪಕ್ಷ ನಾಯಕರ ಆಯ್ಕೆ ಮಾಡಿಲ್ಲ. ನೇರವಾಗಿ ನಮ್ಮ ಪಕ್ಷದವರೇ ಸಿಎಂ ಯಾಕಾಗಬಾರದು ಎಂದು ಯತ್ನಾಳ್​ ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ ಕೆ ಹರಿಪ್ರಸಾದ್ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು, ಅವರು ಪಕ್ಷದ ಹಿರಿಯರು. ಅವರಿಗೆ ನೋವಿದೆ. ಹೀಗಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಬಿ ಕೆ ಹರಿಪ್ರಸಾದ್ ಯಾರ ಕುಮ್ಮಕ್ಕಿನಿಂದ ಮಾತನಾಡುತ್ತಿದ್ದಾರೆ?. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಈ ತಂತ್ರ ನಡೆಸಿದ್ದಾರೆ. ವೇಟಿಂಗ್ ಸಿಎಂ ಕುಮ್ಮಕ್ಕಿನಿಂದ ಹರಿಪ್ರಸಾದ್ ಅಸಮಾಧಾನ ಹೊರಹಾಕ್ತಿದಾರೆ. ಹರಿಪ್ರಸಾದ್ ಅವರನ್ನು ಕೇವಲ‌ ಅಸ್ತ್ರವಾಗಿ ಬಳಸಿಕೊಳ್ಳಲಾಗ್ತಿದೆ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್​ಗೆ ಕುಟುಕಿದರು.

ಇದೆಲ್ಲವನ್ನು ಗಮನಿಸಿದ್ರೆ ಜನವರಿ ನಂತರ ಕಾಂಗ್ರೆಸ್ ಸರ್ಕಾರ ಪತನವಾಗೋದು ಖಚಿತ. ಅವರು ಆಪರೇಷನ್ ಹಸ್ತ ಮಾಡುತ್ತಿದ್ದಾರೆ. ನಮ್ಮ ಸಂಪರ್ಕದಲ್ಲಿಯೂ 45 ಜನ ಶಾಸಕರಿದ್ದಾರೆ ಎಂದರು. ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್​, ಅದು ಹೈಕಮಾಂಡ್​ಗೆ ಬಿಟ್ಟ ವಿಚಾರ. ನಾವು ರಾಜ್ಯ ರಾಜಕಾರಣದ ಬಗ್ಗೆ ಅಷ್ಟೇ ತಲೆಕೆಡಿಸಿಕೊಳ್ಳುತ್ತೇವೆ. ಮೈತ್ರಿ ಬಗ್ಗೆ ಯಡಿಯೂರಪ್ಪ‌ ಅವರಿಗೆ ಮಾಹಿತಿ ಇರಬಹುದು. ಆದಷ್ಟು ಶೀಘ್ರ ಮೈತ್ರಿ ಕುರಿತು ಅಂತಿಮ‌ ತೀರ್ಮಾನವಾಗುತ್ತೆ. ಪ್ರತಿಯೊಂದು ಲೋಕಸಭಾ ಸ್ಥಾನವೂ ಅತ್ಯಂತ ಮಹತ್ವದ್ದು. ಒಂದೇ ಮತದಿಂದ ವಾಜಪೇಯಿ ಸರ್ಕಾರ ಪತನವಾಗಿತ್ತು. ಹೀಗಾಗಿ ಯಾವುದನ್ನೂ ನಾವು ಸುಲಭವಾಗಿ ತೆಗೆದುಕೊಳ್ಳಲು ಸಿದ್ಧವಿಲ್ಲ. ಕಳೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನದಲ್ಲಿ ಗೆದ್ದಿದ್ದೇವೆ. ಈ ಬಾರಿ 28 ಸ್ಥಾನಗಳಲ್ಲಿ ಗೆಲ್ಲುವ ಗುರಿ ಇದೆ. ನಾವೇನೂ ಸರ್ಕಾರ ಬೀಳಿಸುವ ಪ್ರಯತ್ನ‌ ನಡೆಸಿಲ್ಲ. ತಾನಾಗಿಯೇ ಸರ್ಕಾರ ಪತನವಾಗಲಿದೆ ಕಾದು ನೋಡಿ ಎಂದರು.

ಶಾಸಕ ರಾಯರೆಡ್ಡಿಯಂತಹ ಹಿರಿಯರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ನೀವು ಕೂಡಿ ಎಂಪಿ ಆಗೋಣ ಎಂಬ‌ ಮಾತನ್ನೂ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿನ ಅಸಮಾಧಾನ ಹೆಚ್ಚಿದೆ. ಅದು ಯಾವಾಗ ಸ್ಫೋಟವಾಗುತ್ತೋ ಗೊತ್ತಿಲ್ಲ. ಹೀಗಿರುವಾಗ ನಮ್ಮವರನ್ನು ಸೆಳೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಬಿಜೆಪಿಯವರನ್ನು ತೆಗೆದುಕೊಂಡು ಇವರು ಏನ್ ಮಾಡ್ತಾರೆ. ಯಾರಾದ್ರೂ ಬಿಜೆಪಿ ಬಿಟ್ಟು ಹೋದ್ರೆ ತಾವಾಗೇ ಮರಣ ಶಾಸನ ಬರೆದುಕೊಂಡಂತೆ. ನಾನು ಕೇಂದ್ರ ಸಚಿವನಿದ್ದಾಗ ಹಾಗೂ ಈಗಿನ ರಾಜಕೀಯ ಸ್ಥಿತಿಗೂ ವ್ಯತ್ಯಾಸವಿದೆ. ಈಗ ನಮ್ಮನ್ನು ದೆಹಲಿಯಲ್ಲಿ ಯಾರೂ ಗುರುತು ಹಿಡಿಯಲಾರದ ಸ್ಥಿತಿ ಇದೆ. ನಾನು ಕೇಂದ್ರ ಮಂತ್ರಿ ಇದ್ದಾಗ ಮೋದಿ ಗುಜರಾತ್ ಬಿಜೆಪಿ ರಾಜ್ಯ ಪ್ರಧಾನ‌ ಕಾರ್ಯದರ್ಶಿಯಾಗಿದ್ರು. ಅಮಿತ್ ಶಾ ರಾಜ್ಯ ಮಂತ್ರಿಯಾಗಿದ್ರು. ಈಗ ನಾವು ಕೆಳಗೆ ಬಂದಿದ್ದೇವೆ. ಅವರು ಮೇಲೆ ಹೋಗಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದರು.

ನಾವು ಪಾಕಿಸ್ತಾನ ಪರ ಘೋಷಣೆ ಹಾಕ್ತೀವಿ, ಶೋಕಾಚರಣೆ ಮಾಡ್ತೀವಿ ಅಂದ್ರೆ ನಡೆಯಲ್ಲ. ಸರ್ಕಾರ ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಹಿಂದೂಗಳಿಗೆ ಅವಮಾನ ಮಾಡೋ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡ್ತಿದೆ. ಈದ್ಗಾ ಮೈದಾನದಲ್ಲಿ ದೇಶದ ಎಲ್ಲರೂ ಕಾರ್ಯಕ್ರಮ ಮಾಡೋಕೆ ಅವಕಾಶ ಇದೆ. ಅಲ್ಲಿ ಕೇವಲ ಎರಡು ಬಾರಿ ನಮಾಜ್ ಮಾಡೋಕೆ ಅವಕಾಶ ಇದೆ. ಉಳಿದ ದಿನದಲ್ಲಿ ಯಾರು ಬೇಕಾದರೂ ಕಾರ್ಯಕ್ರಮ‌ ಮಾಡಬಹುದು. ನಮ್ಮ ಶಾಸಕರು ಹೋರಾಟ ಮಾಡಿದ್ದಾರೆ. ಇವತ್ತು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಸಿಕ್ಕಿದೆ. ನ್ಯಾಯಾಲಯಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಅದು ದೇಶದ ಆಸ್ತಿ. ಸುಮ್ನೆ ನಮಾಜ್ ಮಾಡೋಕೆ ಅವಕಾಶ ಕೊಟ್ಟಿದೆ. ಏನಾದರೂ ಮಾಡಿದ್ರೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರ ಅವರಿಗೆ ಸಹಕಾರ ಕೊಟ್ರೆ ನಾವು ಏನು ಮಾಡಬೇಕು ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​

ಜಗದೀಶ್ ಶೆಟ್ಟರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್​ ಅವರು, ಜಗದೀಶ್ ಶೆಟ್ಟರ್ ರಿಂದ ನಮ್ಮ ಪಕ್ಷಕ್ಕೆ ಏನು ಲಾಭವಾಗಿಲ್ಲ.‌ ಪಕ್ಷದಿಂದಲೇ ಶೆಟ್ಟರ್ ಸಾಕಷ್ಟು ಲಾಭ ಮಾಡಿಕೊಂಡಿದ್ದಾರೆ. ಶೆಟ್ಟರ್ ಪಕ್ಷದಿಂದ ಪುಕ್ಸಟ್ಟೆ ಲಾಭ ಪಡೆದುಕೊಂಡಿದ್ದಾರೆ.‌ ದುಡಿದವರು‌‌ ದು:ಖಪಟ್ಟಿದ್ದಾರೆ. ಕಾಲಕಾಲಕ್ಕೆ ‌ಎಲ್ಲಾ‌ ಸ್ಥಾನಗಳನ್ನು ‌ಅಲಂಕರಿಸಿದ್ದಾರೆ. ಅವರ ಹಿಂದೆ ಯಾವ ಲಿಂಗಾಯತರು ಇಲ್ಲ. ಲಿಂಗಾಯತರಿಗೆ ಅವರ ಕೊಡುಗೆ ಏನು? ಎಂದು‌ ಪ್ರಶ್ನಿಸಿದರು.

ಚೈತ್ರಾ ಕುಂದಾಪುರ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರ ವಿರುದ್ಧ ಸಮಗ್ರ ತನಿಖೆಯಾಗಬೇಕು.‌ ಇಂತವರು ನಮ್ಮ ಪಕ್ಷ ಅಲ್ಲ ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ಇಂಥವರಿಗೆ ಕ್ಷಮೆ ಇಲ್ಲ. ನಾವು ಅವರನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ 135 ಜನ ಶಾಸಕರಿದ್ದರೂ ಆಡಳಿತ ನಡೆಸೋದಕ್ಕೆ ಬಿಜೆಪಿ ಶಾಸಕರೇ ಬೆಕಾಗಿದ್ದಾರೆ: ಶಾಸಕ ಯತ್ನಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.