ETV Bharat / state

ಬಿಜೆಪಿ ಅವಧಿಯಲ್ಲಿನ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ: ಸಚಿವ ಸಂತೋಷ ಲಾಡ್

author img

By

Published : Jun 26, 2023, 6:21 PM IST

Updated : Jun 26, 2023, 9:18 PM IST

santhosh-lad-reaction-on-scams-during-bjp-government-period
ಬಿಜೆಪಿ ಅವಧಿಯ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ: ಸಂತೋಷ ಲಾಡ್

ವಿದ್ಯುತ್ ದರ ಏರಿಕೆಗೆ ನಮ್ಮ‌ ಸರ್ಕಾರ ಅಪ್ರೂವಲ್ ಕೊಟ್ಟಿಲ್ಲ. ಹಾಗೇನಾದರೂ ಇದ್ದರೆ ಬಿಜೆಪಿಯವರು ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಸಂತೋಷ ಲಾಡ್ ಸವಾಲು ಹಾಕಿದ್ದಾರೆ.

ಸಚಿವ ಸಂತೋಷ ಲಾಡ್

ಹುಬ್ಬಳ್ಳಿ: ರಾಜ್ಯದ ಜನಕ್ಕೆ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದು ನಮ್ಮ ಪ್ರಣಾಳಿಕೆಯಲ್ಲಿ. ಹಾಗಾಗಿ ನಾವು ಬಿಜೆಪಿಯವರನ್ನು ಕೇಳಿ ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅವಶ್ಯಕತೆ ಇರಲಿಲ್ಲ. ಮುಂಬರುವ ದಿನಗಳಲ್ಲಿ ಪ್ರಾಮಾಣಿಕವಾಗಿ ಜನರಿಗೆ 10ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್​ ಲಾಡ್ ಭರವಸೆ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಈ ವಿಷಯ ತಿಳಿಸಿದರು.

ಫುಡ್ ಕಾರ್ಪೋರೇಶನ್ ಅವರು 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ಬರೆದುಕೊಟ್ಟಿದ್ದರು. ಈಗ ಹಿಂಪಡೆದಿದ್ದಾರೆ. ಹಾಗಾಗಿ ನಾವು ಎಕ್ಸ್​​ಪೋಸ್ ಮಾಡಿದ್ದೇವೆ. ಐದು ಕೆಜಿ ಅಕ್ಕಿ ಕೊಡುವ ಪದ್ಧತಿ ಜಾರಿಗೆ ತಂದಿದ್ದು ಕೇಂದ್ರದ ಯುಪಿಎ ಸರ್ಕಾರ. ಆಹಾರ ಭದ್ರತಾ ಕಾಯ್ದೆ ತಂದಿದ್ದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ. ಈಗ ಕೊಡುತ್ತಿರುವ 10 ಕೆಜಿ ಅಕ್ಕಿಯ ಹಕ್ಕು ಇರೋದು ಕಾಂಗ್ರೆಸ್​ಗೆ, ಬಿಜೆಪಿಗಲ್ಲ ಎಂದು ವಾಗ್ದಾಳಿ ನಡೆಸಿದರು.

ವಿದ್ಯುತ್ ದರ ಏರಿಕೆಗೆ ನಮ್ಮ‌ ಸರ್ಕಾರ ಅಪ್ರೂವಲ್ ಕೊಟ್ಟಿಲ್ಲ. ಹಾಗೇನಾದರೂ ಇದ್ದರೆ ಬಿಜೆಪಿಯವರು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಬಿಜೆಪಿಯಲ್ಲಿ ಅಶಿಸ್ತು ಮೂಡಿದೆ ಎಂಬ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್​ನ‌ 14 ಜನರನ್ನ ದುಡ್ಡು ಕೊಟ್ಟು ಕೊಂಡುಕೊಂಡು ಸರ್ಕಾರ ರಚನೆ ಮಾಡಿದವರು ಬಿಜೆಪಿಯವರೇ, ಇದ್ಯಾವ ಶಿಸ್ತಿನ‌ ಪಕ್ಷ. ಮಧ್ಯಪ್ರದೇಶ, ಗೋವಾದಲ್ಲಿ ನಮ್ಮ ಸರ್ಕಾರ ಬೀಳಿಸಿ‌ ಅವರು ಸರ್ಕಾರ ರಚನೆ ಮಾಡಿದ್ರು. ಅವರದ್ದು ಶಿಸ್ತಿನ ಪಕ್ಷವಾಗಿದ್ದರೇ ಕಾಂಗ್ರೆಸ್​ನವರನ್ನ ಯಾಕೆ ಸೇರಿಸಿಕೊಳ್ಳಬೇಕಿತ್ತು ಎಂದು ಸಚಿವ ಲಾಡ್​ ಪ್ರಶ್ನಿಸಿದರು.

ಅವರೇನು ಇವರ ಬಳಿ ಅರ್ಜಿ ಹಾಕಿದ್ದರಾ, ಅವರೇ ಕಾಂಗ್ರೆಸ್ ನಾಯಕರನ್ನ ಕರೆದುಕೊಂಡು ಮುಂಬೈಗೆ ಹೋಗಿ ಇಟ್ಟಿದ್ದು. ಕಾಂಗ್ರೆಸ್​ನಲ್ಲಿದ್ದಾಗ ಅವರೆಲ್ಲರೂ ಚೆನ್ನಾಗಿಯೇ ಇದ್ದರು, ಬಿಜೆಪಿಗೆ ಹೋಗಿಯೇ ಅವರು ಕೆಟ್ಟು ಹೋಗಿದ್ದಾರೆ. ನಾವು ಯಾರಿಗೂ ಮೋಸ ಮಾಡಿಲ್ಲ, ಬದಲಾಗಿ ಬಿಜೆಪಿ ಹಾಗೂ ಮೋದಿ ಜನತೆಗೆ ಮೋಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇಶದ ಯುವಕರಿಗೆ 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಮೋಸ‌ ಮಾಡಿದ್ದಾರೆ ಎಂದು ಹರಿಹಾಯ್ದರು.

ನಾವು ವರ್ಗಾವಣೆ ದಂಧೆ ಮಾಡುತ್ತಿದ್ದರೆ ಅದನ್ನ ಸಾಬೀತುಪಡಿಸಲಿ, ಅಭಿವೃದ್ಧಿ ಕಾಮಗಾರಿಗಳನ್ನ ತಡೆಹಿಡಿದು ಪರಿಶೀಲನೆ ಮಾಡುತ್ತಿದ್ದೇವೆ. 20 ಕೋಟಿ ರೂಪಾಯಿ ಆದಾಯ ಇರುವ ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆಯಲ್ಲಿ 60 ಕೋಟಿ ರೂಪಾಯಿ ಟೆಂಡರ್ ಕರೆದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳನ್ನ ತನಿಖೆ ಮಾಡುವುದಾಗಿ ಈಗಾಗಲೇ ಸಿಎಂ ಹೇಳಿದ್ದಾರೆ. ಈ ಬಗ್ಗೆ ಖಂಡಿತ ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಮಹಿಳೆಯರ ಭರ್ಜರಿ ಪ್ರಯಾಣ: ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಜೂನ್ 11 ರಿಂದ 25 ರ ವರೆಗೆ ಒಟ್ಟು 1.85 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದು, ಇವರ ಪ್ರಯಾಣದ ಟಿಕೆಟ್ ಮೌಲ್ಯ ರೂ. 46.76 ಕೋಟಿಗಳಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂಡಿ‌ ಭರತ್ ಎ‌ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿದ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಮಹಿಳೆಯರ ಜೊತೆಗೆ ಪುರುಷ ಪ್ರಯಾಣಿಕರ ಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಶಕ್ತಿ ಯೋಜನೆ ಜಾರಿಯಾದ ದಿನದಿಂದ 25-06-2023 ರವರೆಗೆ ಪ್ರತಿ ದಿನ ಪ್ರಯಾಣ ಮಾಡಿದ ಮಹಿಳೆಯರು, ಪರುಷರು, ಒಟ್ಟು ಪ್ರಯಾಣಿಕರು ಹಾಗೂ ಟಿಕೆಟ್ ಮೌಲ್ಯದ (ಸಾರಿಗೆ ಆದಾಯದ) ವಿವರಗಳನ್ನು ಕೋಷ್ಟಕದಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ಎಷ್ಟೇ ತೊಂದರೆ ಕೊಟ್ಟರೂ ನಮ್ಮ ಯೋಜನೆ ಅನುಷ್ಠಾನ ಖಚಿತ : ಸಚಿವ ಎಂ ಬಿ ಪಾಟೀಲ್

Last Updated :Jun 26, 2023, 9:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.