ETV Bharat / state

ರಾಜ್ಯದಲ್ಲಿ ಹಿಂದೆ ಇದ್ದಿದ್ದು ಹಿಂದುತ್ವದ ಸರ್ಕಾರ - ಈಗ ಇರುವುದು ಸಂವಿಧಾನದ ಸರ್ಕಾರ: ಪ್ರಿಯಾಂಕ್ ಖರ್ಗೆ

author img

By ETV Bharat Karnataka Team

Published : Dec 27, 2023, 12:03 PM IST

Updated : Dec 27, 2023, 12:58 PM IST

priyank kharge
ಪ್ರಿಯಾಂಕ್ ಖರ್ಗೆ

ಹಿಂದಿನ ಸರ್ಕಾರ ಹಿಂದುತ್ವದ ಮೇಲೆ ನಡೆಯುತ್ತಿತ್ತು. ಇವಾಗ ಇರೋದು ಸಂವಿಧಾನ ಬದ್ಧ ಸರ್ಕಾರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ

ಹುಬ್ಬಳ್ಳಿ : ಕಳೆದ ಬಾರಿ ರಾಜ್ಯದಲ್ಲಿ ಹಿಂದುತ್ವದ ಸರ್ಕಾರ ಇತ್ತು. ಇವಾಗ ಇರೋದು ಸಂವಿಧಾನದ ಸರ್ಕಾರ. ದೇಶ ನಡೆಯುತ್ತಿರುವುದು ಭಗವದ್ಗೀತೆ, ಕುರಾನ್, ಬೈಬಲ್ ಮೇಲೆ ಅಲ್ಲ, ಸಂವಿಧಾನದ ಮೇಲೆ. ಯಾರು ಏನಾದರೂ ಹೇಳಲಿ ಕರ್ನಾಟಕದಲ್ಲಿ ನಡಿತಿರೋದು ಸಂವಿಧಾನದ ಸರ್ಕಾರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸರ್ಕಾರಗಳು ನಡೆಯೋದು ಸಂವಿಧಾನ ಮೇಲೆ. ಬಸವ ಮತ್ತು ಅಂಬೇಡ್ಕರ್ ತತ್ವದ ಮೇಲೆ ಸರ್ಕಾರ ನಡೀತಿದೆ. ಹಿಂದಿನ ಸರ್ಕಾರ ಹಿಂದುತ್ವದ ಮೇಲೆ ನಡೆಯುತ್ತಿತ್ತು. ಪೀಠದ ಮೇಲೆ ಕುಳಿತು ಕಾಗೇರಿ ಅವರು ನಾನು ಆರ್.ಎಸ್.ಎಸ್ ನವರು ಎಂದಿದ್ರು. ಕೋವಿಡ್ ಕಾಲದಲ್ಲಿ ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದಾರೆ" ಎಂದು ಆರೋಪಿಸಿದರು.

ಯತ್ನಾಳ್​ ಆರೋಪಕ್ಕೆ ವಿಜಯೇಂದ್ರ ಉತ್ತರ ಕೊಡಬೇಕು. ವಿಜಯೇಂದ್ರ ಅವರು ಯತೀಂದ್ರ ಅವರನ್ನು ಸಿಎಂ ಸಿದ್ದರಾಮಯ್ಯ ಅವರ ನೆರಳು ಅಂತಾ ಆರೋಪ ಮಾಡಿದ್ರು. ಕಳೆದ ಸರ್ಕಾರದಲ್ಲಿ ಶ್ಯಾಡೋ ಸಿಎಂ ಯಾರಿದ್ರು? ಎಂದ ಪ್ರಿಯಾಂಕ್ ಖರ್ಗೆ, ಯತ್ನಾಳ್​ ದಾಖಲೆ ಬಿಡುಗಡೆ ಮಾಡ್ತೀವಿ ಅಂತಾರೆ. ಅವರ ಬಳಿ ನಾನು ಕರ್ನಾಟಕದ ಜನರ ಪರ ದಾಖಲೆ ಕೊಡಿ ಎಂದು ಮನವಿ ಮಾಡ್ತೀನಿ. ನೀವು ಪ್ರಾಮಾಣಿಕರು ಅಂತ ಗೊತ್ತಿದೆ. ಯಾವುದೇ ದಾಖಲೆ ಇದ್ದರೂ ಜಸ್ಟೀಸ್ ಮೈಕಲ್ ಕುನೋ ಅವರ ಸಮಿತಿಗೆ ಕೊಡಿ ಎಂದು ಹೇಳಿದರು.

ಇದನ್ನೂ ಓದಿ : ಹಿಂದಿನ ಸರ್ಕಾರದಲ್ಲಿ ಕೊರೊನಾ ವೇಳೆ ₹40 ಸಾವಿರ ಕೋಟಿ ಅವ್ಯವಹಾರ: ಯತ್ನಾಳ್ ಗಂಭೀರ ಆರೋಪ

40 ಸಾವಿರ ಕೋಟಿ ಹಗರಣ ಇದೆ, ಹೆಣದ ಮೇಲೆ ಹಣ ಮಾಡಿದ್ದಾರೆ. ಇದು ಕಾಂಗ್ರೆಸ್ ನಾಯಕರ ಆರೋಪ ಅಲ್ಲ. ಮಾಜಿ ಕೇಂದ್ರ ಸಚಿವರು ಮತ್ತು ಹಾಲಿ ಶಾಸಕರ ಆರೋಪ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಉತ್ತರ ಕೊಡಬೇಕು. ಕೋವಿಡ್ ಭ್ರಷ್ಟಾಚಾರದಲ್ಲಿ ಕೇಂದ್ರಕ್ಕೂ ಪಾಲ ಹೋಗಿರಬಹುದು. 40 ಪರ್ಸೆಂಟ್ ಸರ್ಕಾರ ಬಿರುದು ಬಂದಿರೋದು ಬಿಜೆಪಿಯವರಿಂದ. ಕೇಂದ್ರ ನಾಯಕರು, ರಾಜ್ಯ ನಾಯಕರಿಗೂ ಪಾಲು ಹೋಗಿದೆ ಎಂದು ಹೇಳಿದರು.

ಹರಿಪ್ರಸಾದ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಅದರಲ್ಲಿ ತಪ್ಪೇನಿದೆ. ಕ್ಷಮಾಪತ್ರ ಬರೆದಿದ್ದು ಯಾರು?. ಬ್ರಿಟಿಷರ ಬಳಿ ಪೆನ್ಷನ್ ತಗೊಂಡಿದ್ದು ಯಾರು?. ಬಿಜೆಪಿ ಮತ್ತು ಆರ್​ಎಸ್​ಎಸ್ ಗೆ ಸ್ವಂತ ಇತಿಹಾಸ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಇಲ್ಲ, ಅವರು ಸೃಷ್ಟಿಸಬೇಕಾಗಿದೆ. ಹಾಗಾಗಿ ವಾಟ್ಸ್​ಆ್ಯಪ್ ಯುನಿವರ್ಸಿಟಿಯಲ್ಲಿ ಸುಳ್ಳು ಹಬ್ಬಿಸ್ತಾರೆ. ಅದನ್ನೇ ಯುವಕರು ನಂಬುತ್ತಾರೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಲೇವಡಿ ಮಾಡಿದರು.

Last Updated :Dec 27, 2023, 12:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.