ETV Bharat / state

ಗಣೇಶ ಮೂರ್ತಿ ನಾಲ್ಕು ಅಡಿ ಎತ್ತರ ಮೀರಬಾರದು ಎಂಬುದು ಹಾಸ್ಯಾಸ್ಪದ: ಕೇಂದ್ರ ಸಚಿವ ಜೋಶಿ

author img

By ETV Bharat Karnataka Team

Published : Sep 16, 2023, 9:24 PM IST

Union Minister Pralhad Joshi
ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಗಣಪತಿ ಮೂರ್ತಿಗಳು ನಾಲ್ಕು ಅಡಿಗಳಿಗಿಂತ ಎತ್ತರವಿರುತ್ತದೆ. ಇದು ನಮ್ಮ ಭಕ್ತಿಯ ಸಂಕೇತ. ಆದರೆ, ರಾಜ್ಯ ಸರ್ಕಾರ ವಿಧಿಸಿರುವ ಷರತ್ತಿನಲ್ಲಿ ನಾಲ್ಕು ಅಡಿ ಮೀರಬಾರದು ಎಂದಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಜಿಲ್ಲಾಡಳಿತ ಹಲವಾರು ಷರತ್ತುಗಳನ್ನು ವಿಧಿಸಿದೆ. ಇದು ಸರಿಯಲ್ಲ, ನಮ್ಮ ಧಾರ್ಮಿಕ ಹಬ್ಬದ ಆಚರಣೆಗೆ ಷರತ್ತು ವಿಧಿಸಲು ಇವರು ಯಾರು?, ಜನರ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರದ ವರ್ತನೆ ಖಂಡನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಗಣಪತಿ ಮೂರ್ತಿಗಳು ನಾಲ್ಕು ಅಡಿ ಗಳಿಗಿಂತ ಎತ್ತರವಿರುತ್ತವೆ. ಇದು ನಮ್ಮ ಭಕ್ತಿಯ ಸಂಕೇತ. ಆದರೆ ಇವರು ವಿಧಿಸಿರುವ ಷರತ್ತಿನಲ್ಲಿ ನಾಲ್ಕು ಅಡಿ ಮೀರಬಾರದು ಎಂದಿರುವುದು ಹಾಸ್ಯಾಸ್ಪದವಾಗಿದ್ದು, ಇದು ಸರಿಯಲ್ಲ. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆಬೇಕಾಗಿಲ್ಲ ಎಂಬಂತೆ ಯಾವುದೇ ಹಬ್ಬ ಹರಿದಿನಗಳನ್ನು ಸಡಗರ - ಸಂಭ್ರಮದಿಂದ ಆಚರಿಸಬೇಕೆ ಹೊರತು ಆತಂಕದಿಂದಲ್ಲ. ನಮ್ಮ ವೋಟುಗಳು ಇವರಿಗೆ ಬೇಕು. ನಮ್ಮ ಸಂಸ್ಕೃತಿ ಬೇಡವೇ ಎಂದು ಜೋಶಿ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳ I.N.D.I.A. ಮೈತ್ರಿಕೂಟದ ಧ್ಯೇಯವಾದ ಸನಾತನ ಧರ್ಮದ ನಾಶದ ಮುನ್ನುಡಿ ಬರೆದಂತಿದೆ. ಇವರು ವಿಧಿಸಿರುವ ಷರತ್ತುಗಳು, ಜನರ ಭಾವನೆಗಳನ್ನು ಕೆಣಕುವ ರಾಜ್ಯ ಸರ್ಕಾರದ ಇಂತಹ ವರ್ತನೆ ಸಹಿಸಲು ಅಸಾಧ್ಯ. ಈ ಕೂಡಲೇ ವಿಧಿಸಿರುವ ಷರತ್ತುಗಳನ್ನು ವಾಪಸ್ ಪಡೆದು ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲು ಅನುಮತಿ ನೀಡಬೇಕೆಂದು ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ.

ನಾವೇನು ದೇಶದ್ರೋಹದ ಕೆಲಸ ಮಾಡುತ್ತಿಲ್ಲ. ನಮ್ಮ ಆಚಾರ-ವಿಚಾರ ಸಂಸ್ಕೃತಿಗೆ ಧಕ್ಕೆ ತರಲು ಮುಂದಾಗಿರುವ ಸರ್ಕಾರದ ನಡೆ ಖಂಡನೀಯ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಒಂದೊಮ್ಮೆ ಷರತ್ತುಗಳನ್ನು ಸಡಿಲಿಕೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ. ಹಿಂದೂಗಳ ಹಬ್ಬಗಳಿಗೆ ಅಡೆತಡೆಗಳನ್ನು ಒಡ್ಡಬಾರದು, ಇದನ್ನು ಅರ್ಥಮಾಡಿಕೊಳ್ಳದ ಸರ್ಕಾರದ ಈ ನಡೆ ಖಂಡನೀಯ ಎಂದು ಹೇಳಿದ್ದಾರೆ.

ಈಗ ವಿಧಿಸಿರುವ ಷರತ್ತುಗಳನ್ನು ಹಿಂಪಡೆದು ಗಣಪತಿ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲು ಅಧಿಕಾರಿಗಳು ಸಹಕರಿಸಬೇಕು. ಸಾರ್ವಜನಿಕವಾಗಿ ಗಣಪತಿ ಪ್ರತಿಸ್ಥಾಪನೆ ಮಾಡುವವರು ಈ ಷರತ್ತುಗಳನ್ನು ತಲೆಕೆಡಿಸಿಕೊಳ್ಳದಂತೆ ಆಚರಿಸಿಕೊಳ್ಳುವಂತೆಯೂ ಸಚಿವ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಒಪಿ ಗಣೇಶ ಮೂರ್ತಿ ನಿಷೇಧ: ಮಣ್ಣಿನ ಗಣಪತಿ ಪೂಜಿಸಿ, ಪರಿಸರ ಸಂರಕ್ಷಿಸುವಂತೆ ಸಚಿವ ಖಂಡ್ರೆ ಮನವಿ

ಪಿಒಪಿ ಗಣೇಶ ಮೂರ್ತಿ ನಿಷೇಧ: ರಾಜ್ಯ ಸರ್ಕಾರ ರಾಜ್ಯಾದ್ಯಂತ ಪ್ಲಾಸ್ಟರ್ ಆಫ್‌ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿ ಹಾಗೂ ಲೋಹಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತ ಯಾವುದೇ ರೀತಿಯ ವಿಗ್ರಹಗಳ ಉತ್ಪಾದನೆ, ಮಾರಾಟ ಮತ್ತು ಅವುಗಳನ್ನು ಯಾವುದೇ ನೀರಿನ ಮೂಲಗಳಲ್ಲಿ ನಿಮಜ್ಜನ ಮಾಡುವುದಕ್ಕೆ ಸಂಪೂರ್ಣವಾಗಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಪರಿಸರ ಪ್ರಕೃತಿ ಉಳಿಸಲು, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್, ಪಿಒಪಿ ಬಳಕೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಸರ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ಮಾಡುವಂತೆ ಸರ್ಕಾರ ಸೂಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.