ETV Bharat / state

ಬಿಜೆಪಿಯಲ್ಲಿನ ವ್ಯವಸ್ಥೆಯಿಂದ ನೊಂದು ಬಹಳ ಜನ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ : ಜಗದೀಶ್ ಶೆಟ್ಟರ್

author img

By ETV Bharat Karnataka Team

Published : Aug 28, 2023, 3:49 PM IST

former-cm-jagadeesh-shettar-slams-bjp
ಮಾಜಿ ಸಿಎಂ ಜಗದೀಶ್​​ ಶೆಟ್ಟರ್​

ಬಿಜೆಪಿಯಲ್ಲಿರುವಂತಹ ಅಸಮಾಧಾನ, ನಾಯಕತ್ವದ ಕೊರತೆಯಿಂದಾಗಿ ಕಾರ್ಯಕರ್ತರು ಮತ್ತು ನಾಯಕರು ಇಂದು ಬಿಜೆಪಿಯನ್ನು ತೊರೆದು ಕಾಂಗ್ರೆಸ್​ ಸೇರ್ಪಡೆ ಆಗುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್​​ ಶೆಟ್ಟರ್​ ಆರೋಪಿಸಿದ್ದಾರೆ.

ಬಿಜೆಪಿಯಲ್ಲಿನ ವ್ಯವಸ್ಥೆಯಿಂದ ನೊಂದು ಬಹಳ ಜನ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಬಿಜೆಪಿ ಪಕ್ಷದಲ್ಲಿನ ವ್ಯವಸ್ಥೆಯಿಂದ ನೊಂದು ರಾಜ್ಯದಲ್ಲಿ ಬಹಳಷ್ಟು ಜನ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಇದನ್ನು ಬಿಜೆಪಿಯವರು ಆಪರೇಷನ್​ ಹಸ್ತ ಎಂದು ಹೇಳುತ್ತಿದ್ದಾರೆ. ಸ್ವಇಚ್ಛೆಯಿಂದ ಯಾರಾದರೂ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋದರೆ ಅದು ಆಪರೇಷನ್ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿರುವಂತಹ ಅಸಮಾಧಾನ, ನಾಯಕತ್ವದ ಕೊರತೆಯಿಂದಾಗಿ ಕಾರ್ಯಕರ್ತರು ಮತ್ತು ನಾಯಕರು ಇಂದು ಬಿಜೆಪಿಯನ್ನು ತೊರೆದು ಕಾಂಗ್ರೆಸ್​ ಸೇರುತ್ತಿದ್ದಾರೆ. ಇದೊಂದು ರಾಜಕೀಯ ಧ್ರುವೀಕರಣ, ಆಪರೇಷನ್​ ಹಸ್ತ ಎಂದು ಹೇಳುವ ಅವಶ್ಯಕತೆ ಇಲ್ಲ ಎಂದರು.

ಇನ್ನು, ಮಾಜಿ ಸಚಿವ ಶಂಕರ್​ ಪಾಟೀಲ್​ ಮುನೇನಕೊಪ್ಪ ಅವರು ಪ್ರೆಸ್ ಮೀಟ್ ಕರೆದದ್ದು ನನಗೆ ಗೊತ್ತಿಲ್ಲ. ಇದು ನನಗೆ ಸಂಬಂಧ ಇಲ್ಲದ ವಿಚಾರ. ಮುನೇನಕೊಪ್ಪ ಅವರು ಬಿಜೆಪಿ ತೊರೆದು ಕಾಂಗ್ರೆಸ್​ಗೆ​ ಬರುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ನಾನು ಇದುವರೆಗೆ ಅವರ ಜೊತೆ ವೈಯಕ್ತಿಕವಾಗಿ ಮಾತುಕತೆ ನಡೆಸಿಲ್ಲ. ಈ ಬಗ್ಗೆ ನಾನು ಏನೂ ಹೇಳಲು ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ರಾಜ್ಯ ಬಿಜೆಪಿ ಇಂದು ದಯನೀಯ ಸ್ಥಿತಿಯಲ್ಲಿದೆ. ಸಂಘಟನೆ ಮತ್ತು ನಾಯಕತ್ವ ಇಲ್ಲದಿರುವುದರಿಂದ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ. ಇನ್ನು ಹಲವು ನಾಯಕರು ಬಿಜೆಪಿಯಿಂದ ನೊಂದು ಕಾಂಗ್ರೆಸ್​ಗೆ ಬರುತ್ತಿದ್ದಾರೆ. ಪಕ್ಷದ ಅಧ್ಯಕ್ಷರ ಅವಧಿ ಮುಗಿದರೂ ಇದುವರೆಗೂ ಅವರಿಗೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಆಗಿಲ್ಲ. ಅಲ್ಲದೆ ಸರ್ಕಾರ ಬಂದು ನೂರು ದಿನ ಕಳೆದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಇಂತಹ ಪರಿಸ್ಥಿತಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಬಂದಿರಲಿಲ್ಲ ಎಂದು ಲೇವಡಿ ಮಾಡಿದರು.

ರಾಜ್ಯ ಬಿಜೆಪಿ ನಾಯಕರ ಮೇಲೆ ಕೇಂದ್ರದ ನಾಯಕರಿಗೆ ನಂಬಿಕೆ ಹೋಗಿದೆ. ಇದಕ್ಕೆ ನಿದರ್ಶನ ಎಂದರೆ ಮೋದಿಯವರನ್ನು ಬರಮಾಡಿಕೊಳ್ಳಲು ಅವರಿಗೆ ಅವಕಾಶ ಇರಲಿಲ್ಲ. ಬಿಜೆಪಿ ರಾಜ್ಯ ನಾಯಕರಿಗೆ ಬೀದಿಗೆ ಬೀಳುವಂತ ಪರಿಸ್ಥಿತಿ ಬಂದಿದೆ. ಸದ್ಯ ಕಾಂಗ್ರೆಸ್ ಬಲವಾಗಿ ಬೆಳೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ನಾನು ಪ್ರಯತ್ನ ಮಾಡುತ್ತಿದ್ಧೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 12ರಿಂದ 15 ಸ್ಥಾನಗಳನ್ನು ಕಾಂಗ್ರೆಸ್​ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನನಗೆ ಕಾಲ್ ಮಾಡಿದರು ಎಂದು ಸುಳ್ಳು ಸುದ್ದಿ ಹಬ್ಬಿಸಲಾಯಿತು. ಬಿಜೆಪಿ ನಾಯಕರ ವಲಸೆ ಪ್ರಾರಂಭವಾಗಿರುವ ಹಿನ್ನೆಲೆ ಅವರ ಗಮನ ಬೇರೆ ಕಡೆ ಸೆಳೆಯಲು ಈ ರೀತಿ ಮಾಡಲಾಗುತ್ತಿದೆ. ಇದು ಹಸಿ ಸುಳ್ಳು, ನಾನು ಕಾಂಗ್ರೆಸ್​ ಪಕ್ಷದಲ್ಲಿ ಇದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆಯುತ್ತೇನೆ ಎಂದು ಶೆಟ್ಟರ್​ ಸ್ಪಷ್ಟಪಡಿಸಿದರು.

ಜೋಶಿ ಪಕ್ಷ ನಿಷ್ಠೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಗದೀಶ್ ಶೆಟ್ಟರ್​​ಗೆ ಪಕ್ಷ ನಿಷ್ಠೆ ಇಲ್ಲಾ ಅಂತ ಹೇಳಿದ್ರೆ, ಸುಕುಮಾರ್, ರಾಮದಾಸ್ ಅವರಿಗೆ ಪಕ್ಷಕ್ಕೆ ನಿಷ್ಠೆ ಇರ್ಲಿಲ್ವ. ಪಕ್ಷಕ್ಕೆ ನಿಷ್ಠೆ ಎಂದು ಹೇಳಲು ನಿಮಗೇನು ಅರ್ಹತೆ ಇದೆ. ಪಕ್ಷಕ್ಕಾಗಿ ಕೆಲಸ ಮಾಡಿದವರನ್ನೆಲ್ಲಾ ಹೊರಗೆ ಹಾಕಿದರು. ಜೋಶಿ ಆಗಲಿ ಯಾರಿಗೂ ಮಾತನಾಡುವ ಅರ್ಹತೆ ಇಲ್ಲ. ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ ಎಂದು ಹೇಳಿದ್ರು.

ಇದನ್ನೂ ಓದಿ :'ಗೃಹ ಲಕ್ಷ್ಮಿ' ಯೋಜನೆ ಚಾಲನೆಗೆ 1.5 ಲಕ್ಷ ಮಹಿಳೆಯರು ಭಾಗಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.