ETV Bharat / state

ಬಿಜೆಪಿ ಭದ್ರಕೋಟೆ ಕಿತ್ತೂರು ಕರ್ನಾಟಕಕ್ಕೆ ಲಗ್ಗೆ ಇಟ್ಟಿರುವ ಕಾಂಗ್ರೆಸ್.. ಈ ಬಾರಿಯ ರಾಜಕೀಯ ಲೆಕ್ಕಾಚಾರವೇನು?

author img

By

Published : Apr 20, 2023, 9:55 AM IST

bjp
ಬಿಜೆಪಿ

ಈ ಬಾರಿಯ ವಿಧಾನಸಭಾ ಚುನಾವಣೆ ಆಡಳಿತ ಪಕ್ಷ ಬಿಜೆಪಿಗೆ ಸವಾಲಾಗಿದ್ದು, ಕಿತ್ತೂರು ಕರ್ನಾಟಕದ ಮೇಲೆ ಸಾಕಷ್ಟು ‌ನಿರೀಕ್ಷೆ ಇಟ್ಟುಕೊಂಡಿದೆ. ಆದ್ರೆ, ಇದಕ್ಕೆ ಪ್ರತ್ಯುತ್ತರವಾಗಿ‌ ಕಾಂಗ್ರೆಸ್ ಕೂಡ ತನ್ನದೇಯಾದ ತಂತ್ರಗಾರಿಕೆ ರೂಪಿಸಿಕೊಂಡಿದೆ.

ಬೆಂಗಳೂರು /ಹುಬ್ಬಳ್ಳಿ : ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗಿದೆ. ಬೆಳಗಾವಿ, ಚಿಕ್ಕೋಡಿ, ಹಾವೇರಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳು ಕಿತ್ತೂರು ಕರ್ನಾಟಕ ವ್ಯಾಪ್ತಿಯಲ್ಲಿ ಬರುತ್ತವೆ. ಪ್ರಮುಖವಾಗಿ ಮಹಾರಾಷ್ಟ್ರ ಗಡಿ ವಿವಾದ ಹಾಗೂ ಮಹದಾಯಿ ಯೋಜನೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ರಾಜ್ಯ ರಾಜಕಾರಣದಲ್ಲಿ ಕಿತ್ತೂರು ಕರ್ನಾಟಕ ಪ್ರಮುಖ ಪಾತ್ರವನ್ನು ವಹಿಸಿದೆ.

ಲಿಂಗಾಯತ ಮತದಾರರು ಹೆಚ್ಚಿರುವ ಕಿತ್ತೂರು ಕರ್ನಾಟಕದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಉದಾಹರಣೆಗಳು ಹಲವಾರು ಇವೆ. ಹೀಗಾಗಿ ಕಿತ್ತೂರು ಕರ್ನಾಟಕದ ಮೇಲೆ ಎಲ್ಲಾ ಪಕ್ಷಗಳ ವಿಶೇಷ ಮುತುವರ್ಜಿ ಇದೆ. ಅದರಲ್ಲೂ ಈ‌ ಬಾರಿಯ ವಿಧಾನಸಭೆ ಚುನಾವಣೆ ಆಡಳಿತ ಪಕ್ಷ ಬಿಜೆಪಿಗೆ ಸವಾಲಾಗಿದ್ದು, ಬಿಜೆಪಿಯ ಭದ್ರಕೋಟೆಯಾಗಿರುವ ಕಿತ್ತೂರು ಕರ್ನಾಟಕದ ಮೇಲೆ ಸಾಕಷ್ಟು ‌ನಿರೀಕ್ಷೆ ಇಟ್ಟುಕೊಂಡಿದೆ. ಇದಕ್ಕೆ ಪ್ರತಿಯಾಗಿ‌ ಕಾಂಗ್ರೆಸ್ ಪಕ್ಷ ಕೂಡ ತನ್ನದೇಯಾದ ತಂತ್ರಗಾರಿಕೆಯನ್ನು ಹೆಣೆಯುವ ಮೂಲಕ ಮತ್ತೆ ಕಿತ್ತೂರು ಕರ್ನಾಟಕ ಕೈ ವಶಮಾಡಿಕೊಳ್ಳಲು ಗೇಮ್ ಪ್ಲಾನ್ ರೆಡಿ ಮಾಡಿಕೊಂಡಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್​ಗೆ ಸೇರಿರುವುದರಿಂದ ಬಿಜೆಪಿಗೆ ಭಾರಿ ಹೊಡೆತ ಬೀಳಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ.

ಹೆಚ್ಚಾಗಿ ಉದ್ಯಮ ಹಾಗೂ ವ್ಯಾಪಾರಿಗಳು ಹೊಂದಿರುವ ಈ ವಲಯದಲ್ಲಿ ಧರ್ಮಕ್ಕಿಂತಲೂ ಅಭಿವೃದ್ಧಿಗೆ ಮತದಾರ ಮಣೆಹಾಕಲಿದ್ದಾರೆ. ಸ್ಥಳೀಯ ನಾಯಕತ್ವ ವಿಚಾರವೂ ಮತದಾರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಬಿಜೆಪಿಯ ಘಟಾನುಘಟಿ ನಾಯಕರಾದ ಪ್ರಹ್ಲಾದ್ ಜೋಶಿ, ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೂಲ ಜಿಲ್ಲೆಯೂ ಇದೇ ಭಾಗದಲ್ಲಿರುವುದು ಮತದಾರರ ಮೇಲೆ ಪರಿಣಾಮ ಬೀರಿದಂತಿದೆ. ಬೆಳಗಾವಿ ಗಡಿ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿಲುವು ಮತದಾರರಲ್ಲಿ ಧನಾತ್ಮಕ ಭಾವನೆ ಮೂಡಿದೆ. ಅಲ್ಲದೆ, ಹೆಚ್ಚಿನ ಮಟ್ಟದಲ್ಲಿ ಸರ್ಕಾರಕ್ಕೆ ಕಳಪೆ ಅಂಕವನ್ನು ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಮಹದಾಯಿ ಯೋಜನೆ ಬಿಕ್ಕಟ್ಟು ಬಗೆಹರಿದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿರುವ ಬಿಜೆಪಿ ಶಾಸಕರ ಕುರಿತು ಮತದಾರರು ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಆದರೂ, ನಕರಾತ್ಮಕವಾದ ಅಂಶಗಳು ಕೆಲ ಶಾಸಕರ ವಿರುದ್ಧ ಕೇಳಿ ಬರುತ್ತಿವೆ.

ರಾಜ್ಯ ಬಿಜೆಪಿಗೆ ಕಿತ್ತೂರು ಕರ್ನಾಟಕ ನಿರ್ಣಾಯಕವಾಗಿದೆ. ಕಳೆದ ಹಲವು ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ‌‌ ಮತದಾರರು ಬಿಜೆಪಿಗೆ ಒಲವು ವ್ಯಕ್ತಪಡಿಸಿದ್ದಾರೆ. ಈ ಭಾಗದಿಂದ ಅತೀ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲುವ ಮೂಲಕ ಬಿಜೆಪಿ ಸರ್ಕಾರ ರಚನೆಗೆ ಅಡಿಪಾಯ ಹಾಕಿದ್ದಾರೆ. 2013ರ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಒಳಗೊಂಡಂತೆ ಈ ಪ್ರದೇಶದ 56 ಸ್ಥಾನಗಳ ಪೈಕಿ ಕಾಂಗ್ರೆಸ್ 34 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತ್ತು. 2018 ರಲ್ಲಿ 50 ಸ್ಥಾನಗಳಲ್ಲಿ ಬಿಜೆಪಿ 30 ಸ್ಥಾನಗಳಲ್ಲಿ ಯಶಸ್ಸನ್ನು ಕಂಡಿತ್ತು. ಕಾಂಗ್ರೆಸ್ 17 ಸ್ಥಾನ ಪಡೆದರೆ, ಜೆಡಿಎಸ್ ಎರಡು ಹಾಗೂ ಪಕ್ಷೇತರ ಒಬ್ಬ ಅಭ್ಯರ್ಥಿ ಜಯ ಸಾಧಿಸಿದ್ದರು. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ನಂತರ ವಿರೋಧ ಪಕ್ಷದಲ್ಲಿ ಬಿಜೆಪಿ ಕುಳಿತುಕೊಳ್ಳುವ ಅನಿವಾರ್ಯವಾಗಿತ್ತು. 2018 ರ ಚುನಾವಣೆಯ ಪಕ್ಷಗಳ ಬಲಾಬಲ ನೋಡುವುದಾದರೆ, ಕಿತ್ತೂರು ಕರ್ನಾಟಕ ದ ಒಟ್ಟು 50 ಕ್ಷೇತ್ರಗಳಲ್ಲಿ:

ಬೆಳಗಾವಿ ಒಟ್ಟು ಕ್ಷೇತ್ರಗಳು 18

ಬಿಜೆಪಿ- 10

ಕಾಂಗ್ರೆಸ್‌-08

ಜೆಡಿಎಸ್‌-00

ಬಾಗಲಕೋಟೆ ಒಟ್ಟು ಕ್ಷೇತ್ರಗಳು 7

ಬಿಜೆಪಿ-05

ಕಾಂಗ್ರೆಸ್‌ - 02

ಜೆಡಿಎಸ್‌ - 00

ವಿಜಯಪುರ ಒಟ್ಟು ಕ್ಷೇತ್ರಗಳು 8

ಬಿಜೆಪಿ-03

ಕಾಂಗ್ರೆಸ್‌ -03

ಜೆಡಿಎಸ್‌ - 02

ಧಾರವಾಡ ಒಟ್ಟು ಕ್ಷೇತ್ರಗಳು 7

ಬಿಜೆಪಿ- 05

ಕಾಂಗ್ರೆಸ್‌ - 02

ಜೆಡಿಎಸ್‌ -00

ಗದಗ ಒಟ್ಟು ಕ್ಷೇತ್ರಗಳು 4

ಬಿಜೆಪಿ - 03

ಕಾಂಗ್ರೆಸ್‌-01

ಜೆಡಿಎಸ್‌ - 00

ಹಾವೇರಿ ಒಟ್ಟು ಕ್ಷೇತ್ರಗಳು 6

ಬಿಜೆಪಿ- 04

ಕಾಂಗ್ರೆಸ್‌-01

ಇತರೆ-01

ಕಿತ್ತೂರು ಕರ್ನಾಟಕ ಒಟ್ಟು 50 ಕ್ಷೇತ್ರಗಳ ಪೈಕಿ ಯಾರಿಗೆ ಎಷ್ಟು?

ಬಿಜೆಪಿ-30

ಕಾಂಗ್ರೆಸ್‌-17

ಜೆಡಿಎಸ್‌ -02

ಇತರೆ - 01.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಹಲವು ಕ್ಷೇತ್ರಗಳಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ. ಭಾರಿ ಪ್ರಮಾಣದಲ್ಲಿ ಮತ ವಿಭಜನೆಯಾಗುವ ಭೀತಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಆರ್ ಬೊಮ್ಮಾಯಿ, ಜೆ.ಹೆಚ್. ಪಟೇಲ್ ಮತ್ತು ರಾಮಕೃಷ್ಣ ಹೆಗಡೆ ಅವರ ನಿಧನದ ಬಳಿಕ ಜನತಾ ದಳ ವಿಭಜನೆಯಾಯಿತು. ಜೆಡಿಯು ಹಾಗೂ ಜಾತ್ಯತೀತ ಜನತಾದಳ ಆಯಿತು. ರಾಜ್ಯದಲ್ಲಿ ಜೆಡಿಯು ಕ್ಷೀಣಿಸುತ್ತಾ ಹೋದಂತೆ ಜೆಡಿಯು ನಾಯಕರು ಬಿಜೆಪಿಗೆ ಬದಲಾದರು. ಯಡಿಯೂರಪ್ಪ ಲಿಂಗಾಯತ ಐಕಾನ್ ಆಗಿ ಹೆಚ್ಚುತ್ತಿರುವ ಜನಪ್ರಿಯತೆಯು ಈ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಕಾರಣವಾಯಿತು.

ಇದನ್ನೂ ಓದಿ : ಜೆಡಿಎಸ್‌ ಜಾತಿವಾರು ಟಿಕೆಟ್ ಹಂಚಿಕೆ ಮಾಹಿತಿ : ಒಕ್ಕಲಿಗರಿಗೆ ಸಿಂಹಪಾಲು

ಬೆಳಗಾವಿ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿರುವ ಜಾರಕಿಹೊಳಿ ಮತ್ತು ಕತ್ತಿ ಕುಟುಂಬಗಳು ಜೆಡಿಎಸ್‌ ಪಕ್ಷವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ಗೆ ಪ್ರಬಲ ನೆಲೆಯಾಗಿದ್ದ ಬೆಳಗಾವಿಯನ್ನು ಬಿಜೆಪಿ ತನ್ನ ಭದ್ರಕೋಟೆಯಾಗಿ ಬಲಪಡಿಸಿಕೊಂಡಿದೆ.

ರಾಜಕೀಯ ವಿಶ್ಲೇಷಕರ ಅಭಿಪ್ರಾಯವೇನು? : ಈ ಭಾಗದಲ್ಲಿ ಬಿಜೆಪಿ ಪರಿಸ್ಥಿತಿ ಅಷ್ಟೊಂದು ಕೆಟ್ಟದಾಗಿಲ್ಲ. ಆದ್ರೆ, ಪಕ್ಷದಲ್ಲಿನ‌ ನಾಯಕರ ಒಗ್ಗಟ್ಟಿನ ಕೊರತೆ, ಒಳ ಜಗಳ ಪಕ್ಷದ‌ ಮೇಲೆ ಹೊಡೆತ ಕೊಡುವ ಸಂಭವವಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಬಿಜೆಪಿಯೇ ಶತ್ರುವಾಗಿದೆ. ಆಡಳಿತ ವಿರೋಧಿ ಅಲೆ. ಒಳಮೀಸಲಾತಿ ಶಿಫಾರಸು. ದಲಿತ ಮತಗಳ ಮೇಲೆ ನಂಬಿಕೆ. ಲಂಬಾಣಿ ಮತ್ತು ಭೋವಿ ಮತಗಳ ವಿರೋಧ ಬಿಜೆಪಿಗೆ ಹಿನ್ನೆಡೆಯನ್ನುಂಟು ಮಾಡುಬಹುದಾಗಿದೆ. ಉತ್ತರ ಕರ್ನಾಟಕ ಬಹುದೊಡ್ಡ ಮತ ಬ್ಯಾಂಕ್ ಲಿಂಗಾಯತರಲ್ಲಿ ಗೊಂದಲ ಉಂಟಾಗಿದೆ. ಈ ಹಿಂದೆ ವಿರೇಂದ್ರ ಪಾಟೀಲ್ ಅವರನ್ನು ನಡೆಸಿಕೊಂಡಂತೆ ಬಿ‌ ಎಸ್ ಯಡಿಯೂರಪ್ಪನನ್ನು ಬಿಜೆಪಿ ನಡೆಸಿಕೊಂಡ ಸಿಟ್ಟು ಲಿಂಗಾಯತರಲ್ಲಿ ಪರಿಣಾಮ ಬೀರಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಇನ್ನು ಬೆಳಗಾವಿ ಭಾಗದದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಪೈಪೋಟಿಯಿಂದ ಎಂಇಎಸ್ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಗದಗ, ಬಾಗಲಕೋಟಿ, ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ಕಳೆದ ಚುನಾವಣೆಗಿಂತ ಕಾಂಗ್ರೆಸ್ ಕೆಲ ಸ್ಥಾನ ಹೆಚ್ಚಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಅಮರೇಗೌಡ ಗೊನ್ನಾವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಿಂದ ಸಿಂಹಪಾಲು: ಜಾತಿವಾರು ಟಿಕೆಟ್ ಹಂಚಿಕೆ ಹೀಗಿದೆ..

ಬಿಜೆಪಿ ಮುಂದಿರುವ ಸವಾಲುಗಳೇನು? : ಈ ಹಿಂದೆ ಕಾಂಗ್ರೆಸ್ ಪಕ್ಷ ಲಿಂಗಾಯತ ವಿರೋಧಿ ಅಲೆಯನ್ನು ಎದುರಿಸಿದಂತೆ ಈ ಬಾರಿಯೂ ಬಿಜೆಪಿ ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ರದ್ದುಪಡಿಸಿ, ಲಿಂಗಾಯತ ಮತ್ತು ಒಕ್ಕಲಿಗರ ನಡುವೆ ಮೀಸಲಾತಿ ಹಂಚಿಕೆ ಮಾಡಿದ್ದು ಈ ಪ್ರದೇಶದ ಮತದಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮೀಸಲಾತಿ ವಿಷಯದ ಹೊರತಾಗಿ, ಕಾಂಗ್ರೆಸ್‌ನ 40% ಕಮಿಷನ್ ಆರೋಪ ಮತ್ತು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೇಲಿನ ಲೋಕಾಯುಕ್ತ ದಾಳಿಯಂತಹ ಇತರೆ ವಿವಾದಾತ್ಮಕ ವಿಷಯಗಳು ಬಿಜೆಪಿಯ ಭವಿಷ್ಯಕ್ಕೆ ಧಕ್ಕೆ ತರಬಹುದು. ಈ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಒತ್ತು ನೀಡಬಹುದಾಗಿದ್ದು, ಇದು ಕಾಂಗ್ರೆಸ್ ಗೆ ಪ್ಲಸ್ ಆಗುವ ಸಾಧ್ಯತೆ ಹೆಚ್ಚಿದೆ.

ಬೊಮ್ಮಾಯಿ ಸರ್ಕಾರದ ದೌರ್ಬಲ್ಯಗಳನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಬಿಜೆಪಿ ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ತನ್ನ ಸ್ಟಾರ್ ಪ್ರಚಾರಕರನ್ನು ಹೆಚ್ಚಾಗಿ ಅವಲಂಬಿಸಿದೆ. ಇನ್ನು ಕಾಂಗ್ರೆಸ್​‌ನಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸುವ ವ್ಯಕ್ತಿಗಳ ಕೊರತೆ ನಡುವೆ ದಲಿತ ನಾಯಕ ಖರ್ಗೆ ಹಾಗೂ ಸಿದ್ದರಾಮಯ್ಯ ಆಶಾದಾಯಕವಾಗಿದ್ದಾರೆ. ಇದೀಗ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರು ಪಕ್ಷ ತೊರೆದಿರುವುದು ಬಿಜೆಪಿಗೆ ನಷ್ಟವೇ ಎಂದು ಹೇಳಬಹುದು. ಇದರಿಂದ ಲಿಂಗಾಯತ ಮತಗಳು ಸಹ ಬಿಜೆಪಿಗೆ ಪೆಟ್ಟು ಕೊಡುವ ಸಾಧ್ಯತೆ ಹೆಚ್ಚಿದೆ.

ಕಳೆದ ಚುನಾವಣೆಯಲ್ಲಿ ಬಂಡಾಯದ ನೆಲ ನವಲಗುಂದ, ನರಗುಂದ ಸೇರಿದಂತೆ ಮಹದಾಯಿ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ. ಈ ಚುನಾವಣೆಯಲ್ಲಿ ಡಿಪಿಆರ್ ಆಯಿತು ಎಂದು ವಿಜಯೋತ್ಸವ ಮಾಡಿ ಬಿಜೆಪಿ ಹಲವು ಆಶ್ವಾಸನೆ ಕೊಟ್ಟಿದೆ. ಆದರೆ ಏನು ಆಗಿಲ್ಲ. ಇದು ಈ ಭಾಗದ ಮತದಾರರ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.