ETV Bharat / state

ದಾವಣಗೆರೆ: ಜಾನುವಾರು ಪೋಷಣೆಗೆ ಬದುಕನ್ನೇ ಮುಡಿಪಾಗಿಟ್ಟ ವೈದ್ಯ ದಂಪತಿ

author img

By ETV Bharat Karnataka Team

Published : Sep 15, 2023, 10:19 PM IST

ಜಾನುವಾರುಗಳ ಪೋಷಣೆಯಲ್ಲಿ ತೊಡಗಿರುವ ವೈದ್ಯರು
ಜಾನುವಾರುಗಳ ಪೋಷಣೆಯಲ್ಲಿ ತೊಡಗಿರುವ ವೈದ್ಯರು

ಚನ್ನಗಿರಿ ತಾಲೂಕಿನ ಬಸವಪಟ್ಟಣ ಗ್ರಾಮದ ವೈದ್ಯ ದಂಪತಿ ಸುಮಾರು ನಲವತ್ತು ವರ್ಷಗಳಿಂದ ಬಿಡಾಡಿ ದನಗಳನ್ನು ತಂದು ಪೋಷಿಸುತ್ತಿದ್ದಾರೆ.

ಗೋವುಗಳ ಪೋಷಣೆ ಕುರಿತು ಡಾ. ಬಸನಗೌಡ ಕುಸಗೂರು ಪ್ರತಿಕ್ರಿಯೆ

ದಾವಣಗೆರೆ : ಬಸನಗೌಡ ಕುಸುಗೂರು ಮತ್ತು ವಿಜಯಲಕ್ಷ್ಮಿ ಬಿ.ಕುಸುಗೂರು ವೃತ್ತಿಯಲ್ಲಿ ವೈದ್ಯ ದಂಪತಿ. ವೃತ್ತಿ ಜೀವನದಲ್ಲಿ ಬಿಡುವು ಮಾಡಿಕೊಂಡು ತಮ್ಮ ಕೈಲಾದಷ್ಟು ಸಮಾಜಸೇವೆ ಮಾಡುತ್ತಿದ್ದಾರೆ. ಕಳೆದ ನಲವತ್ತು ವರ್ಷಗಳಿಂದ ಬಿಡಾಡಿ ದನಗಳನ್ನು ತಂದು ಪೋಷಣೆ ಮಾಡುತ್ತಿದ್ದಾರೆ. ಹೀಗೆ ಪೋಷಿಸಿದ ಜಾನುವಾರುಗಳನ್ನು ಬಡ ರೈತರಿಗೆ ಉಚಿತವಾಗಿ ಉಳುಮೆಗೆ ಕೊಡುತ್ತಿದ್ದಾರೆ.

ಚನ್ನಗಿರಿ ತಾಲೂಕಿನ ಬಸವಪಟ್ಟಣ ಎಂಬ ಪುಟ್ಟ ಗ್ರಾಮದಲ್ಲಿ ಇವರು ಕುಸುಗೂರು ಡಾಕ್ಟರ್ ಎಂದೇ ಪರಿಚಿತರು. ದಶಕಗಳಿಂದ ವೈದ್ಯ ವೃತ್ತಿ ಮಾಡುತ್ತಾ ಅದರೊಂದಿಗೆ ಜಾನುವಾರುಗಳ ಪೋಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಬಿಡಾಡಿ ದನಗಳು, ಸಾಕಲಾಗದೆ ಬಿಟ್ಟು ಬಿಡುವ ದನಗಳು, ಕಸಾಯಿ ಖಾನೆಗೆ ಸಾಗಿಸುವ ದನಗಳನ್ನು ಡಾ. ಬಸನಗೌಡ ಕುಸುಗೂರು ತಂದು ತಮ್ಮ ಪುಟ್ಟ ಗೋಶಾಲೆಯಲ್ಲಿರಿಸಿ ಸಾಕುತ್ತಿದ್ದಾರೆ.

ಸತತ 40 ವರ್ಷಗಳಿಂದ ಈ ಕಾಯಕ ಮಾಡುತ್ತಿರುವ ಬಸನಗೌಡ ಕುಸುಗೂರು ಸಾಕಷ್ಟು ಜಾನುವಾರುಗಳನ್ನು ಪೋಷಿಸುತ್ತಿದ್ದಾರೆ. ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿರುವ ಆಕಳು, ಗಂಡು ಹೋರಿ, ಎಮ್ಮೆಗಳಿಗೆ ಮರುಜನ್ಮ ನೀಡಿದ್ದಾರೆ. ಹೀಗೆ ಪೋಷಣೆ ಮಾಡಿದ ಜಾನುವಾರುಗಳನ್ನು ಬೇಸಾಯಕ್ಕೆ ಬೇಕೆಂದು ಕೇಳಿ ಬರುವ ಬಡ ರೈತರಿಗೆ ಉಚಿತವಾಗಿ ಗಂಡು ಹೋರಿಗಳನ್ನು ಕೊಟ್ಟು ಸಹಾಯ ಮಾಡುತ್ತಿದ್ದಾರೆ. ಇಲ್ಲಿಯತನಕ ಸರಿಸುಮಾರು 35ಕ್ಕೂ ಹೆಚ್ಚು ಗಂಡು ಹೋರಿಗಳನ್ನು ರೈತರಿಗೆ ಬೇಸಾಯ ಮಾಡಲು ಉಚಿತವಾಗಿ ಕೊಟ್ಟಿರುವ ಉದಾಹರಣೆಗಳಿವೆ. ಪ್ರಸ್ತುತ, ಇವರ ಗೋಶಾಲೆಯಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳಿದ್ದು, ಅವುಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲು ನಾಲ್ಕೈದು ಕೆಲಸಗಾರರನ್ನು ನೇಮಿಸಿದ್ದಾರೆ.

ಇವರ ಪುತ್ರ ವರುಣ್ ಕುಸುಗೂರು ಅವರ ಪತ್ನಿ ವಿಜಯಲಕ್ಷ್ಮಿ ಬಿ.ಕುಸುಗೂರು ಅವರು ಮಕ್ಕಳ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೂ ಕೂಡಾ ಗೋಶಾಲೆಯ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ.

ವಿಜಯಲಕ್ಷ್ಮಿ ಬಿ.ಕುಸುಗೂರು ಪ್ರತಿಕ್ರಿಯಿಸಿ, "ಅವರು ಕ್ಲಿನಿಕ್​ನಲ್ಲಿ ರೋಗಿಗಳಿಲ್ಲದಿದ್ದರೆ ಗೋಶಾಲೆಗೆ ತೆರಳಿ ಪೋಷಣೆ ಮಾಡುತ್ತಾರೆ. ನಾನೂ ಕೂಡ ಕೆಲಕಾಲ ಬಂದು ಗೋವುಗಳನ್ನು ನೋಡಿಕೊಳ್ಳುತ್ತೇನೆ. ಅವರಿಗಿದು ಒಂದು ಹವ್ಯಾಸ. ಚಿಕ್ಕವನಿಂದಲೇ ದನ ಮೇಯಿಸಿಕೊಂಡು ಬೆಳೆದಿದ್ದಾರೆ. ಆದ್ದರಿಂದ ಈ ಕೆಲಸ ಮಾಡುತ್ತಿದ್ದಾರೆ. ಜಾನುವಾರುಗಳಿಗೆ ತೊಂದರೆಯಾದರೆ ಅವರು ಸಹಿಸಿಕೊಳ್ಳುವುದಿಲ್ಲ. ನಮ್ಮ ಬಳಿ ಯಾವ ಜಾನುವಾರುಗಳು ಬಂದ್ರೂ ನಾವು ಅವುಗಳನ್ನು ಪೋಷಣೆ ಮಾಡ್ತೇವೆ" ಎಂದರು.

ಡಾ.ಬಸನಗೌಡ ಕುಸಗೂರು ಮಾತನಾಡಿ, "ಈ ಕಾಯಕವನ್ನು ಕಳೆದ 35-40 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇನೆ. ಮೊದಲು ಆಕಳು ಸಾಕಾಣಿಕೆ ಮಾಡ್ತಿದ್ದೆವು. ಇಲ್ಲಿ ಪೋಷಣೆ ಮಾಡಿದ ಗಂಡು ಹೋರಿ ಬಡ ರೈತರಿಗೆ ಬೇಸಾಯಕ್ಕೆ ಉಚಿತವಾಗಿ ಕೊಡ್ತೇವೆ. ಆಕಳುಗಳನ್ನು ಕೊಡದೇ ಇಲ್ಲಿಯೇ ಸಾಕಲಾಗುತ್ತದೆ. ಕೆಲಕಾಲ ತೆಗೆದುಕೊಂಡು ಹೋದ ಜಾನುವಾರುಗಳನ್ನು ಮತ್ತೆ ರೈತರು ತಂದು ಬಿಟ್ರೂ ನಾವೇ ಪೋಷಣೆ ಮಾಡುತ್ತೇವೆ. ಇಲ್ಲಿತನಕ 35 ಜಾನುವಾರುಗಳನ್ನು ಬಡ ರೈತರಿಗೆ ಉಚಿತವಾಗಿ ಕೊಟ್ಟಿದ್ದೇವೆ. ಇದರ ಖರ್ಚು ವೆಚ್ಚಗಳನ್ನು ನಾವೇ ಭರಿಸುತ್ತಿದ್ದೇವೆ. ದನ ಕಾಯುವುದು ಹಾಗು ಪೋಷಣೆ ಮಾಡುವ ಹವ್ಯಾಸ ಇರುವುದರಿಂದ ಈ ಕೆಲಸ ಮಾಡ್ತಿದ್ದೇನೆ. ಇದೀಗ 40-50 ಜಾನುವಾರುಗಳನ್ನು ಪೋಷಣೆ ಮಾಡಲಾಗುತ್ತಿದೆ. ಬಿಡಾಡಿ ದನಗಳು, ಸಾಕಲಾಗದೆ ಬಿಟ್ಟು ಹೋದ ದನಗಳು, ಕಸಾಯಿ ಖಾನೆಗೆ ಹೋಗುವ ದನಗಳನ್ನು ಇಲ್ಲಿ ಪೋಷಣೆ ಮಾಡಲಾಗುತ್ತದೆ'' ಎಂದು ಹೇಳಿದರು.

ಇದನ್ನೂ ಓದಿ: ದನ ಮೇಯಿಸ್ಲಿಕ್ಕೆ​​​​​ ಹೋಗು ಅನ್ನೋರು ಇಲ್ಲೊಮ್ಮೆ ನೋಡ್ಬಿಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.