ETV Bharat / state

ದಕ್ಷಿಣ ಕನ್ನಡ: ಅಡಿಕೆ ಮರ ಏರಲು ಟ್ರೀ ಸೈಕಲ್ ಆವಿಷ್ಕರಿಸಿದ ಕೃಷಿಕ

author img

By

Published : Oct 4, 2022, 12:40 PM IST

farmer invented tree cycle
ಅಡಿಕೆ ಮರ ಏರಲು ಟ್ರೀ ಸೈಕಲ್ ಆವಿಷ್ಕರಿಸಿದ ಕೃಷಿಕ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಚಾರ್ವಾಕದ ಯುವ ಕೃಷಿಕ ಭಾಸ್ಕರ್ ಟ್ರೀ ಸೈಕಲ್ ಆವಿಷ್ಕರಿಸಿದ್ದಾರೆ.

ಸುಳ್ಯ(ದಕ್ಷಿಣ ಕನ್ನಡ): ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಆದರೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಅಡಿಕೆ ಬೆಳೆಗಾರರಿದ್ದು, ಅವುಗಳಲ್ಲಿ ಕಾರ್ಮಿಕರ ಸಮಸ್ಯೆಯೂ ಒಂದು. ಅಡಿಕೆಗೆ ಮದ್ದು ಬಿಡುವ, ಅಡಿಕೆ ಕೊಯ್ಯುವ ನುರಿತ ಕಾರ್ಮಿಕರ ಸಮಸ್ಯೆಯ ಪರಿಹಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಚಾರ್ವಕದ ಯುವ ಕೃಷಿಕನೋರ್ವ ಉಪಕರಣವೊಂದನ್ನು ಆವಿಷ್ಕರಿಸಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಚಾರ್ವಾಕದ ಯುವ ಕೃಷಿಕ ಭಾಸ್ಕರ್ ಎಂಬವರು ತಾನೇ ಸ್ವಾವಲಂಭಿಯಾಗಿ ತೋಟದ ಕೆಲಸದಲ್ಲಿ ತೊಡಗುವಂತಹ ಉಪಕರಣವೊಂದನ್ನು ಆವಿಷ್ಕರಿಸಿದ್ದಾರೆ. ಅಡಿಕೆ ಮರಗಳಿಗೆ ಸಲೀಸಾಗಿ ಹತ್ತಲು ಉಪಕಾರಿಯಾಗುವ ಈ ಯಂತ್ರದಿಂದ ಅಡಿಕೆಗೆ ಮದ್ದು ಬಿಡುವ, ಅಡಿಕೆ ಕೊಯ್ಯವ ಕೆಲಸವನ್ನು ಮಾಡಬಹುದಾಗಿದೆ. ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರೂ ಈ ಉಪಕರಣವನ್ನು ಬಳಸಿ ಅಡಿಕೆ ಮರವನ್ನು ಹತ್ತಬಹುದಾಗಿದೆ‌. ಕಬ್ಬಿಣದ ರಾಡ್​​ಗಳನ್ನು ಬಳಸಿ ಈ ಉಪಕರಣವನ್ನು‌ ತಯಾರಿಸಲಾಗಿದೆ. ಅಡಿಕೆ ಮರವನ್ನು ಚೈನ್ ಮೂಲಕ ಲಾಕ್ ಮಾಡಿ, ಕೈ ಹಾಗೂ ಕಾಲಿನ ಸಹಾಯದಿಂದ ಈ ಉಪಕರಣವನ್ನು ಉಪಯೋಗಿಸಬಹುದಾಗಿದೆ.

ಅಡಿಕೆ ಮರ ಏರಲು ಟ್ರೀ ಸೈಕಲ್ ಆವಿಷ್ಕರಿಸಿದ ಕೃಷಿಕ

ಅಡಿಕೆ ಮರ ಹತ್ತುವ ಟ್ರೀ ಸೈಕಲ್: 5ನೇ ತರಗತಿಯವರೆಗೆ ಓದಿರುವ ಭಾಸ್ಕರ್, ಬಳಿಕ ಹಲವಾರು ಕಾರಣಗಳಿಂದಾಗಿ ಓದನ್ನು ಅರ್ಧಕ್ಕೇ ಬಿಟ್ಟು ಕೃಷಿಯತ್ತ ಮುಖ ಮಾಡಿದವರು. ಅಡಿಕೆ ತೋಟವನ್ನು ಹೊಂದಿರುವ ಭಾಸ್ಕರ್​ ಅವರಿಗೆ ಕಾರ್ಮಿಕರ ಸಮಸ್ಯೆಯ‌ ಬಗ್ಗೆ ಅರಿವಿತ್ತು. ಸಾಮಾನ್ಯವಾಗಿ ಕಾರ್ಮಿಕರು ದೊಡ್ಡ ತೋಟಗಳಲ್ಲಿ ಹೆಚ್ಚು‌ ಆದಾಯ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಸಣ್ಣ ಕೃಷಿ ತೋಟಗಳತ್ತ ಬಾರದೇ ಇರುವುದರಿಂದಾಗಿ ಸಣ್ಣ ಕೃಷಿಕನ ತೋಟಕ್ಕೆ ಸರಿಯಾದ ಸಮಯದಲ್ಲಿ ಮದ್ದು ಬಿಡದೆ ಅಡಿಕೆ ಬೆಳೆ ನಾಶವಾದ ಉದಾಹರಣೆಗಳೂ ಇವೆ‌. ಇದರಿಂದಾಗಿ ಸಣ್ಣ ಕೃಷಿಕರಿಗೆ ಉಪಕಾರಿಯಾಗಲಿ ಎನ್ನುವ ಕಾರಣಕ್ಕೆ ಈ ಮರ ಹತ್ತುವ ಟ್ರೀ ಸೈಕಲ್ ಅನ್ನು ಸಿದ್ಧಪಡಿಸಿದ್ದಾರೆ.

ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉಪಕರಣವನ್ನು ನಿರ್ಮಿಸಿರುವ ಭಾಸ್ಕರ್ 3 ವರ್ಷದ ಹಿಂದೆಯೇ ಈ ಕಾರ್ಯದಲ್ಲಿ ತೊಡಗಿದ್ದಾರೆ. ಮೂರು ವರ್ಷಗಳ ಕಾಲ ಹಲವು ಮಾರ್ಪಾಡು ಮತ್ತು ಲೋಪದೋಷಗಳನ್ನು ಸರಿಪಡಿಸಿ ಈ ಉಪಕರಣವನ್ನು ಎಲ್ಲಾ ರೀತಿಯ ಪ್ರಯೋಗಕ್ಕೆ ಒಳಪಡಿಸಿ ಇದೀಗ ಯಶಸ್ವಿಯಾಗಿದ್ದಾರೆ. ತಮ್ಮ ತೋಟ ಮಾತ್ರವಲ್ಲದೆ‌ ಇತರರ ತೋಟಗಳಲ್ಲೂ ಇದೀಗ ಮದ್ದು ಬಿಡುವ ಮತ್ತು ಅಡಿಕೆ ಕೊಯ್ಯುವ ಕೆಲಸಕ್ಕೆ ಭಾಸ್ಕರ್‌ ಇದೇ ಉಪಕರಣವನ್ನು‌ ಬಳಸುತ್ತಿದ್ದಾರೆ.

ಅಡಿಕೆ ಮರಕ್ಕೆ ಚೈನ್ ಮೂಲಕ ಲಾಕ್ ಮಾಡಿ, ಕೈ ಹಾಗು‌ ಕಾಲಿನ ಮೂಲಕ ಈ ಉಪಕರಣವನ್ನು ಉಪಯೋಗಿಸಿ ಮರವನ್ನು ಸಲೀಸಾಗಿ ಹತ್ತಲಾಗುತ್ತದೆ. ಇದರ ಉಪಯೋಗವನ್ನು ಅರಿತ ಹಲವು ಕೃಷಿಕರಿಗೆ ಭಾಸ್ಕರ್ ಉಪಕರಣವನ್ನು ನೀಡಿದ್ದು, ಸದ್ಯ ಇದಕ್ಕೆ 6500 ರೂ.ಪಡೆದುಕೊಳ್ಳುತ್ತಿದ್ದಾರೆ.

ಉಪಕರಣ ಪಡೆಯಲು ಬರುವ ಕೃಷಿಕನಿಗೆ ತನ್ನ ಅಡಿಕೆ ತೋಟದಲ್ಲೇ ತರಬೇತಿ ನೀಡಿದ ಬಳಿಕವೇ ಉಪಕರಣವನ್ನು ಅವರಿಗೆ ಮಾರಾಟ ಮಾಡುತ್ತಾರೆ. ಸದ್ಯ ಅಡಿಕೆ ಮರವೇರುವ ವ್ಯವಸ್ಥೆಯನ್ನು ಮಾತ್ರ ಈ ಉಪಕರಣದಲ್ಲಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ತೆಂಗಿನ ಮರ ಏರುವಂತೆಯೂ ಅಭಿವೃದ್ಧಿ ಪಡಿಸಲಾಗುವುದು ಎಂದು ಭಾಸ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಡಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 4 ಕೋಟಿ ರೂಪಾಯಿ ಅನುದಾನ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.