ETV Bharat / state

'ನಾಯಿ ನಿಯತ್ತಿನ ಪ್ರಾಣಿ, ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ನಾಯಿಯಾಗಿದ್ದರೆ ಒಳ್ಳೆಯದು'

author img

By

Published : Jan 5, 2023, 8:14 AM IST

Updated : Jan 5, 2023, 8:26 AM IST

bharath shetty
ಭರತ್ ಶೆಟ್ಟಿ

ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿಯೆದುರು ನಾಯಿ ಮರಿ ತರ ಇರುತ್ತಾರೆ, ಗಡಗಡ ಎಂದು ನಡುಗುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ನಾಯಿಮರಿ ಹೇಳಿಕೆ ವಿವಾದ: ಸಿದ್ದರಾಮಯ್ಯಗೆ ಶಾಸಕ ಡಾ.ವೈ.ಭರತ್ ಶೆಟ್ಟಿ ತಿರುಗೇಟು

ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಾಯಿ ಮರಿ ಪದ ಬಳಕೆ ಮಾಡಿರುವುದಕ್ಕೆ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ತಿರುಗೇಟು ನೀಡಿದ್ದಾರೆ. 'ಪ್ರತಿಪಕ್ಷ ನಾಯಕರು ಜವಾಬ್ದಾರಿಯುತವಾಗಿ ಮಾತನಾಡಿದರೆ ಒಳ್ಳೆಯದು‌. ಪ್ರಾಣಿಗಳ ಹೆಸರಿನಲ್ಲಿ ಮನುಷ್ಯರನ್ನು ಹೋಲಿಸಲು ಆರಂಭಿಸಿದ್ದಾರೆ. ಇನ್ಯಾರೋ ಅವರನ್ನು ಕತ್ತೆ ಎನ್ನಬಹುದು. ನಾಯಿ ನಿಯತ್ತಿನ ಪ್ರಾಣಿ, ಇವರು ನಾಯಿ ಆದ್ರೆ ಒಳ್ಳೆಯದು. ಡಿ.ಕೆ.ಶಿವಕುಮಾರ್ ಮತ್ತು ಇವರ ನಡುವಿನ ಗಲಾಟೆ ನೋಡಿದ್ರೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ನಾಯಿ ಆದರೆ ಒಳ್ಳೆಯದು' ಎಂದು ವಾಗ್ದಾಳಿ ನಡೆಸಿದರು.

ನಳಿನ್ ಕುಮಾರ್​ ಕಟೀಲ್​ ಹೇಳಿಕೆಗೆ ಸಮರ್ಥನೆ: ಮಂಗಳೂರಿನಲ್ಲಿ ಮಾತನಾಡಿದ ಅವರು, ರಸ್ತೆ ಗುಂಡಿ ವಿಷಯ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಸಮರ್ಥಿಸಿಕೊಂಡರು. 'ಕಟೀಲ್​ ಅವರು ರಸ್ತೆ, ಗುಂಡಿ, ತೋಡುಗಳ ಕಾಮಗಾರಿ ಮಾಡುವ ಕೆಲಸ ಕಾರ್ಯಕರ್ತರದ್ದಲ್ಲ, ಅದು ಚುನಾಯಿತ ಪ್ರತಿನಿಧಿಗಳದ್ದು. ಕಾರ್ಯಕರ್ತರು ಈ ಬಗ್ಗೆ ಗಮನಹರಿಸಬೇಕಿಲ್ಲ. ಸ್ವಾಸ್ಥ್ಯ ಸಮಾಜ ನಿರ್ಮಾಣದ ಬಗ್ಗೆ ಗಮನಹರಿಸಿ' ಎಂದು ಹೇಳಿದ್ದಾರೆ ಎಂದರು.

ಯು.ಟಿ.ಖಾದರ್ ಹೇಳಿಕೆಗೆ ತಿರುಗೇಟು: ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ಬಿಜೆಪಿ ಸರ್ಕಾರವು ಗೋವುಗಳ ಹೆಸರಿನಲ್ಲಿ ಲೂಟಿ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, 'ಯು.ಟಿ.ಖಾದರ್ ಗೋವು ತಿನ್ನುತ್ತಾರೆ ಕಾಣಬೇಕು, ಗೋವಿನ ಸಂತತಿ ಹೆಚ್ಚು ಮಾಡಲು ಕರ್ನಾಟಕ ಸರ್ಕಾರ ಪ್ರಯತ್ನ ಮಾಡುತ್ತಿದೆ. ಗೋವನ್ನು ಕಡಿದು ತಿನ್ನುವವರನ್ನು ಕಾಂಗ್ರೆಸ್ ಸಪೋರ್ಟ್ ಮಾಡುತ್ತಿದೆ. ನಮ್ಮ ಬಿಜೆಪಿ ಸರ್ಕಾರ ಗೋ ಕಳ್ಳತನ ತಡೆಯಲು ಕ್ರಮ ಕೈಗೊಂಡಿದೆ. ಕಾಂಗ್ರೆಸ್ ನಮ್ಮ ಜೊತೆಗೆ ಕೈ ಜೋಡಿಸಲಿ' ಎಂದರು. ಇದೇ ವೇಳೆ, 'ಕುಚ್ಚಲಕ್ಕಿ ವಿತರಣೆಗೆ ಸಂಬಂಧಿಸಿದಂತೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ರೇಷನ್ ಕಾರ್ಡ್​ನಲ್ಲಿ ಜಿಲ್ಲೆಯ ಜನರಿಗೆ ಕುಚ್ಚಲಕ್ಕಿ ಸಿಗಲಿದೆ' ಎಂದು ತಿಳಿಸಿದರು.

ಇದನ್ನೂ ಓದಿ: ನಾಯಿ ನಿಯತ್ತಿನ ಪ್ರಾಣಿ, ನಾನು ಜನರಿಗೆ ನಿಯತ್ತಿನಿಂದ ಕೆಲಸ ಮಾಡುತ್ತಿರುವೆ: ಸಿದ್ದರಾಮಯ್ಯಗೆ ಸಿಎಂ ತಿರುಗೇಟು

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಹಗರಿಬೊಮ್ಮನಹಳ್ಳಿ ಪಟ್ಟಣದ ಜಿ.ಬಿ.ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಮಾಲವಿ ಜಲಾಶಯದ ವಿಜಯೋತ್ಸವ ಹಾಗೂ ಸಾರ್ಥಕ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿಎಂ ಸಿದ್ದರಾಮಯ್ಯ, 'ಕಾಂಗ್ರೆಸ್​​​ನವರು ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಎದುರು ನಾಯಿ ಮರಿ ತರ ಮಾಡುತ್ತಾರೆ, ಗಡಗಡ ಎಂದು ನಡುಗುತ್ತಾರೆ' ಅಂತಾ ಹೇಳಿದ್ದರು. ಇದಕ್ಕೆ ಸಿಎಂ ಸೇರಿದಂತೆ ಬಿಜೆಪಿ ನಾಯಕರು ಖಾರವಾಗಿಯೇ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಸೈಲೆನ್ಸರ್​ನ ಹೊಗೆಯಲ್ಲಿ ವಿಷ ತುಂಬಿಕೊಂಡಿದೆ: ಕಟೀಲ್​ ಹೇಳಿಕೆಗೆ ಖಾದರ್ ತಿರುಗೇಟು

ಯು.ಟಿ.ಖಾದರ್ ಹೇಳಿದ್ದೇನು?: ನಿನ್ನೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ವಿಪಕ್ಷ ಉಪನಾಯಕ ಯು.ಟಿ.ಖಾದರ್, 'ಗೋವುಗಳ ಬಗ್ಗೆ ಭಾರಿ ಮಾತನಾಡಿದವರು ಗೋವುಗಳ ಅಭಿವೃದ್ಧಿಗೆ ಶ್ರಮಿಸಿಲ್ಲ. ಸೇವೆ ಕೊಡುವ ಹೆಸರಿನಲ್ಲಿ ಲೂಟಿ ಹೊಡೆದಿದ್ದಾರೆ. ಪಶು ವೈದ್ಯರುಗಳು ನಿವೃತ್ತಿಯಾದರೂ ಹೊಸ ನೇಮಕಾತಿ ಮಾಡಿಲ್ಲ. ಕೇವಲ ಭಾವನಾತ್ಮಕ ವಿಚಾರದ ಬಗ್ಗೆ ಮಾತನಾಡುತ್ತಾರೆ. ರಸ್ತೆ ಹಾಗೂ ಚರಂಡಿ ಅಭಿವೃದ್ಧಿ, ಗುಂಡಿ ಮುಚ್ಚುವಂತಹ ಅಭಿವೃದ್ಧಿ ಕೆಲಸ ಮಾಡುವ ಅರ್ಹತೆ ಮತ್ತು ಯೋಗ್ಯತೆ ಬಿಜೆಪಿ ಸರ್ಕಾರಕ್ಕೆ ಇಲ್ಲ. ಇಷ್ಟು ವರ್ಷದಲ್ಲಿ ಅವರು ಅಭಿವೃದ್ಧಿ ಕೆಲಸ ಮಾಡಿಲ್ಲ. ಕುಚ್ಚಲಕ್ಕಿ ತರಲು ಸಿಎಂಗೆ ಮನವಿ ಕೊಟ್ಟದ್ದೇ ಬಂತು. ಜನರಿಗೆ ರೇಷನ್ ಕಾರ್ಡ್ ಕೊಡುವ ಯೋಗ್ಯತೆ ಇಲ್ಲ. ಇವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಜನರಿಗೆ ಇದೀಗ ಎಲ್ಲಾ ಅರ್ಥವಾಗಿದೆ' ಎಂದು ವಾಗ್ದಾಳಿ ನಡೆಸಿದ್ದರು.

Last Updated :Jan 5, 2023, 8:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.