ETV Bharat / state

ಕಡಬದ ಸರಕಾರಿ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ಆರೋಪ: ಇಂದು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಸಭೆ

author img

By ETV Bharat Karnataka Team

Published : Dec 15, 2023, 10:47 AM IST

allegation of neglect of patients
ರೋಗಿಗಳ ನಿರ್ಲಕ್ಷ್ಯ ಆರೋಪ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸಮುದಾಯದ ಸರಕಾರಿ ಆಸ್ಪತ್ರೆಯಲ್ಲಿ ಸಕಲ ಸೌಕರ್ಯಗಳು ಇದ್ದರೂ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಇಂದು ಸಭೆ ನಡೆಸಲಾಗುವುದು ಎಂದು ಪುತ್ತೂರು ವೈದ್ಯಾಧಿಕಾರಿ ಡಾ.ದೀಪಕ್ ಹೇಳಿದ್ದಾರೆ.

ಕಡಬ(ದಕ್ಷಿಣ ಕನ್ನಡ): ಕಡಬ ತಾಲೂಕು ಕೇಂದ್ರದಲ್ಲಿರುವ ಏಕೈಕ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡಿರುವ ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ತೀವ್ರ ಅಸ್ವಸ್ತರಾದ ವೃದ್ದೆಯೊಬ್ಬರನ್ನು ಕುಟುಂಬಸ್ಥರು ಆಂಬ್ಯುಲೆನ್ಸ್​ ಒಂದರಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ, ಆಸ್ಪತ್ರೆಯಲ್ಲಿದ್ದ ಯಾವುದೇ ಸಿಬ್ಬಂದಿ ಆಸ್ಪತ್ರೆಯಿಂದ ಹೊರಗಡೆ ಬರುವುದಾಗಲೀ ರೋಗಿಯನ್ನು ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲೂ ಮುಂದಾಗಿಲ್ಲ. ಈ ವಿಷಯವನ್ನು ಸ್ಥಳೀಯರು ಮಾಧ್ಯಮ ಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ. ವಿಷಯವನ್ನರಿತ ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸುಮಾರು ಹದಿನೈದು ನಿಮಿಷಗಳ ಬಳಿಕ ವಿಧಿ ಇಲ್ಲದೇ ಆಂಬ್ಯುಲೆನ್ಸ್​ ಚಾಲಕನೇ ಆಸ್ಪತ್ರೆಯ ಒಳಗಡೆ ತೆರಳಿ ಸ್ಟ್ರಕ್ಚರ್ ತಂದು ಆಂಬ್ಯುಲೆನ್ಸ್​​ನಲ್ಲಿದ್ದ ರೋಗಿಯನ್ನು ಅದರಲ್ಲಿ ಮಲಗಿಸಿದರು.

ಈ ವೇಳೆ, ಆಸ್ಪತ್ರೆಯ ಒಳಗಡೆಯಿಂದ ಸಿಬ್ಬಂದಿಯೊಬ್ಬರು ಬಂದು ಚಾಲಕನಿಗೆ ಸಹಕಾರ ನೀಡಿದರು. ಹಾಗೇ ರೋಗಿಯನ್ನು ಆಸ್ಪತ್ರೆಯ ಒಳಗಡೆ ಕರೆದುಕೊಂಡು ಹೋಗಿ ಬೆಡ್‌ನಲ್ಲಿ ಮಲಗಿಸಲಾಯಿತು. ಆದರೆ, ಮೂವರು ವೈದ್ಯರುಗಳಿದ್ದರೂ ಯಾರೊಬ್ಬರೂ ಈ ಕಡೆಗೆ ಗಮನವನ್ನು ನೀಡಲಿಲ್ಲ ಎಂದು ಆರೋಪಿಸಲಾಗಿದೆ.

ಈ ವಿಷಯವನ್ನು ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ ಡಾ.ಸುಚಿತ್ರಾ ರಾವ್​ ಅವರ ಗಮನಕ್ಕೆ ತರಲಾಯಿತು. ಆ ಬಳಿಕ ಅರ್ಧ ಗಂಟೆಗಳ ನಂತರದಲ್ಲಿ ರೋಗಿಯ ತಪಾಸಣೆ ಆರಂಭವಾಯಿತು. ಈ ನಡುವೆ ಇದಕ್ಕೂ ಮುಂಚೆ ಇನ್ನೊಂದು ರೂಮಿನಲ್ಲಿ ಕೊಮಾ ಸ್ಥಿತಿಯಲ್ಲಿದ್ದ ಮತ್ತೊಬ್ಬ ಮಹಿಳಾ ರೋಗಿ ಆರೈಕೆಯಲ್ಲೂ ನಿರ್ಲಕ್ಷ್ಯ ತೋರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ತಾಲೂಕು ವೈದ್ಯಾಧಿಕಾರಿ ಹೇಳಿದ್ದಿಷ್ಟು: ಈ ಬಗ್ಗೆ ಪತ್ರಕರ್ತರು ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್​ ಅವರನ್ನು ಮಾತನಾಡಿಸಿದಾಗ, ನಮಗೆ ಈಗಾಗಲೇ ಇಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯದ ಬಗ್ಗೆ ಹಲವಾರು ದೂರುಗಳು ಬಂದಿವೆ. ಈ ಬಗ್ಗೆ ನಾವು ಈಗಾಗಲೇ ಹಲವಾರು ಬಾರಿ ಈ ಆಸ್ಪತ್ರೆಯಲ್ಲಿನ ವೈದ್ಯರಿಗೆ, ಸಿಬ್ಬಂದಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದೇವೆ. ಪ್ರಸ್ತುತ ಇಲ್ಲಿ ಒಂದೆರಡು ಟೆಕ್ನಿಕಲ್ ಸಿಬ್ಬಂದಿಗಳ ಕೊರತೆ ಇದೆ. ಅದನ್ನು ಹೊರತುಪಡಿಸಿ ಈಗಿನ ಸ್ಥಿತಿಯಲ್ಲಿ ಇಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಯಾವುದೇ ಕೊರತೆ ಇಲ್ಲ. ಸುಳ್ಯದ ಖಾಸಗಿ ವಲಯದಿಂದಲೂ ವೈದ್ಯರನ್ನು ಕರೆಸಿಕೊಳ್ಳಲಾಗಿದೆ. ನಾಳೆಯೇ(ಇಂದು) ಇಲ್ಲಿ ಸಭೆ ಕರೆಯಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಅನಧಿಕೃತ ಲ್ಯಾಬ್​ ಸೀಜ್​ ಮಾಡಿದ ಆರೋಗ್ಯ ಅಧಿಕಾರಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.