ETV Bharat / state

ಜೂನ್ 24 ರಿಂದ ವೈ.ಎಸ್‌.ವಿ ದತ್ತ ಪ್ರಾಯಶ್ಚಿತ್ತ ಪಾದಯಾತ್ರೆ

author img

By

Published : May 17, 2023, 7:01 AM IST

YSV Dutta spoke at a meeting held in Yagati village.
ಯಗಟಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ವೈಎಸ್​​ವಿ ದತ್ತ ಮಾತನಾಡಿದರು.

ಕಡೂರಿನ ಯಗಟಿ ಗ್ರಾಮದ ವೈ.ಎಸ್.​​ವಿ ದತ್ತ ಅವರ ಮನೆಯಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ಸಭೆ ನಡೆಯಿತು.

ವೈಎಸ್​​ವಿ ದತ್ತ ಮಾತು

ಚಿಕ್ಕಮಗಳೂರು: ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅನೇಕ ಹೈ ವೋಲ್ಟೇಜ್ ವಿಧಾನಸಭಾ ಕ್ಷೇತ್ರಗಳಿದ್ದವು. ಈ ಪೈಕಿ ಕಡೂರು ಕ್ಷೇತ್ರ ಕೂಡ ಒಂದು. ಮಾಜಿ ಶಾಸಕ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮಾನಸ ಪುತ್ರ ಎಂದೇ ಕರೆಯುವ ವೈ.ಎಸ್.ವಿ ದತ್ತ ಅವರು ಜೆಡಿಎಸ್ ಬಿಟ್ಟು, ಕಾಂಗ್ರೆಸ್ ಸೇರಿ ಮತ್ತೆ ಜೆಡಿಎಸ್‌ನಿಂದಲೇ ಸ್ಪರ್ಧಿಸಿ ಸೋಲು ಅನುಭವಿಸಿದರು. ಮಂಗಳವಾರ ತಮ್ಮ ಹುಟ್ಟೂರು ಯಗಟಿಯ ಸ್ವಗೃಹದಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ಸೋಲು ಹಾಗೂ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಪಾದಯಾತ್ರೆ ಮಾಡುವುದಾಗಿ ಅವರು ಪ್ರಕಟಿಸಿದರು. ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದರು.

ದತ್ತ ಮಾತನಾಡಿ, "ನನಗೆ ಕ್ಷೇತ್ರದ ಜನತೆ ನೀಡಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಕೊನೆಯುಸಿರು ಇರುವವರೆಗೂ ಎಲ್ಲರಲ್ಲೂ ಒಂದಾಗಿ, ನನ್ನ ಈ ನೆಲದಲ್ಲಿ ಮಣ್ಣಾಗುತ್ತೇನೆ. ನನ್ನ ಹಲವು ತಪ್ಪುಗಳಿಗೆ ಜನರು ಸರಿಯಾದ ಶಿಕ್ಷೆ ನೀಡಿದ್ದಾರೆ‌. ತಪ್ಪು ಮಾಡಿದ ನಾನು ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ. ಜೂನ್ 24ರಂದು ನನ್ನ ಜನ್ಮದಿನ. ಅಂದಿನಿಂದ ಕ್ಷೇತ್ರದ ಪ್ರತಿ ಹಳ್ಳಿಗೆ ಪಾದಯಾತ್ರೆಯ ಮೂಲಕ ತೆರಳಿ ನನ್ನ ತಪ್ಪುಗಳಿಗಾಗಿ ಕ್ಷಮೆ ಕೋರುತ್ತೇನೆ. ಪಾದಯಾತ್ರೆಯಲ್ಲಿ ಹಳ್ಳಿಗಳಲ್ಲೇ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಈ ಸಂಕಲ್ಪ ಯಾವುದೇ ಚುನಾವಣಾ ದೃಷ್ಟಿಯಿಂದ ಅಲ್ಲ. ಕೇವಲ ನನ್ನ ಆತ್ಮಾವಲೋಕನ ಮಾತ್ರ" ಎಂದು ಘೋಷಣೆ ಮಾಡಿದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, "ಕಡೂರು ನನ್ನ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾಗಾಗಿ ನಾನಾಗಲಿ ಅಥವಾ ನಮ್ಮ ಕುಟುಂಬವಾಗಲಿ ಈ ಕ್ಷೇತ್ರವನ್ನು ಮರೆಯಲು ಸಾಧ್ಯವಿಲ್ಲ. ಕೆಲವು ತಪ್ಪುಗಳಾಗಿವೆ. ನಾನೂ ಸಹ ಈ ಭಾಗಕ್ಕೆ ಬಾರದಿರುವುದು ಒಂದಿಷ್ಟು ಹಿನ್ನಡೆಗೆ ಕಾರಣವಾಗಿದೆ" ಎಂದರು.

'ಬಿಜೆಪಿ ತಪ್ಪಿನಿಂದ ಕಾಂಗ್ರೆಸ್ ಗೆದ್ದಿದೆ': ಇಲ್ಲಿನ ಸೋಲು ಕೇವಲ ದತ್ತ ಅವರ ಸೋಲಲ್ಲ. ನನ್ನದು, ನಮ್ಮೆಲ್ಲರದು. ಎಲ್ಲರೂ ಸೇರಿ ದತ್ತ ಅವರಂಥ ಸರಳ ವ್ಯಕ್ತಿಗೆ ಸಹಕಾರ ನೀಡೋಣ ಎಂದು ಮನವಿ ಮಾಡಿದರು. ಕಾಂಗ್ರೆಸ್ಸಿಗರು ಕಾಂಗ್ರೆಸ್ ಅಲೆಯಲ್ಲಿ ಗೆದ್ದಿಲ್ಲ, ಬಿಜೆಪಿಯವರ ತಪ್ಪಿನಿಂದ ಗೆದ್ದಿದ್ದಾರೆ ಅಷ್ಟೇ. ಬಿಜೆಪಿಯ ಮೀಸಲಾತಿ, ಹಿಜಬ್‌ನಂತಹ ನಿರ್ಧಾರದಿಂದ ಗೆದ್ದಿರೋದು ಎಂದು ತಿಳಿಸಿದರು. ಮಹಿಳೆಯರಿಗೆ 2,000 ರೂ, ಫ್ರೀ ಬಸ್, ಯುವಕರಿಗೆ ಸ್ಟೈ ಫಂಡ್, ವಿದ್ಯುತ್ ಫ್ರೀ ಜಾರಿಗೆ ಬರಲಿ. ನಂಬಿಕೆ ಇಟ್ಟು ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ, ಜನ ಕಾಯ್ತಿದ್ದಾರೆ. ಕೊಟ್ಟ ಮಾತು ಉಳಿಸಿಕೊಂಡು ಹೇಗೆ ನಿಭಾಯಿಸುತ್ತಾರೋ ನೋಡೋಣ. ಸರ್ಕಾರ ಬಂದು 48 ಗಂಟೆಯೂ ಕಳೆದಿಲ್ಲ, ಹರಿಪ್ರಸಾದ್ ಈಗಲೇ ಯೂಟರ್ನ್ ಹೊಡೀತಿದ್ದಾರೆ ಎಂದು ಟಾಂಗ್ ಕೊಟ್ಟರು.

ಇನ್ನು, ಭವಾನಿ ರೇವಣ್ಣ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಚರ್ಚೆ ಆಗಿಲ್ಲ. ಕುಟುಂಬ ಪಕ್ಷದ ನಿರ್ಣಯಕ್ಕೆ ಬದ್ಧ. ಹಾಸನದಲ್ಲಿ ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇವೆ. ಪಕ್ಷ, ದೊಡ್ಡವರು ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇವೆ. ಭವಾನಿ ಅವರಿಗೆ ಯಾವ ಜವಾಬ್ದಾರಿ ಕೊಟ್ಟರೂ ಕೆಲಸ ಮಾಡ್ತೀವಿ. ರಾಜ್ಯ ಸುತ್ತಿ ಮಹಿಳಾ ಸಂಘಟನೆ, ಯುವ ಸಂಘಟನೆ ಮಾಡುವ ಶಕ್ತಿ ಪಕ್ಷಕ್ಕಿದೆ ಎಂದು ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್ ಗ್ಯಾರಂಟಿಗಳಿಗೆ ಮಾನದಂಡ ಇರುತ್ತದೆ : ಪರಮೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.