ETV Bharat / state

ಕಾಡಿಗೆ ಬಿಟ್ಟಿದ್ದ ಕುಶ ಮತ್ತೆ ತವರಿಗೆ: ಬಂಡೀಪುರದಲ್ಲಿ ಇರಲಾಗದೆ ದುಬಾರೆಗೆ ಗಜ ಪಯಣ

author img

By

Published : Dec 3, 2021, 12:15 PM IST

elephant-kusha
ಕುಶ ಆನೆ

ನಾಪತ್ತೆಯಾಗಿದ್ದ ಕುಶ ಎಂಬ ಆನೆಯನ್ನು ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಸಂಗಾತಿಯಿಂದ ಬೇರ್ಪಡಿಸಿ, ಸೆರೆ ಹಿಡಿದು ಮರಳಿ ಶಿಬಿರಕ್ಕೆ ಕರೆತರಲಾಗಿತ್ತು. ಆ ವೇಳೆ, ಕುಶನ ಚಲನವಲನಗಳು ಬದಲಾಗಿ ಚಂಚಲ ಮನಸ್ಸಿನಿಂದ ವರ್ತಿಸುತ್ತಿದ್ದ. ಕಾಲುಗಳಿಗೆ ಸರಪಳಿ ಹಾಕಿ ಕ್ರಾಲ್‌ನಲ್ಲಿ ಬಂಧಿಸಿಟ್ಟು ಮತ್ತೆ ಪಳಗಿಸುವ ಕೆಲಸಕ್ಕೆ ಇಲ್ಲಿನ ಮಾವುತರು ಇಳಿದಿದ್ದರು. ಅರಣ್ಯ ಇಲಾಖೆಯ ಈ ಕ್ರಮಕ್ಕೆ ಪ್ರಾಣಿಪ್ರಿಯರು ಆಕ್ರೋಶ ಹೊರಹಾಕಿದ್ದರು.

ಚಾಮರಾಜನಗರ: ಪರಿಸರವಾದಿಗಳ ಸತತ ಹೋರಾಟದಿಂದ ಕಾಡಿಗೆ ಬಿಡಲಾಗಿದ್ದ ದುಬಾರೆ ಕ್ಯಾಂಪಿನ ಕುಶ ಎಂಬ ಆನೆ ಬಂಡೀಪುರದಲ್ಲಿ ಇರಲಾಗದೆ ಈಗ ಮತ್ತೆ ತವರಿನತ್ತ ಹೆಜ್ಜೆ ಹಾಕುತ್ತಿದೆ.

ಕಳೆದ ಮಾರ್ಚ್​ನಲ್ಲಿ ದುಬಾರೆ ಆನೆ ಕ್ಯಾಂಪಿನಲ್ಲಿದ್ದ ಕುಶನನ್ನು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ಅರಣ್ಯಕ್ಕೆ ಬಿಡಲಾಗಿತ್ತು‌. ಆದರೆ, ಕಳೆದ 6 ತಿಂಗಳ ಅವಧಿಯಲ್ಲಿ 200 ಕಿಮೀ ದೂರದ ತನಕ ಆನೆ ಸಂಚರಿಸಿದ್ದು ನಾಗರಹೊಳೆ ಮೂಲಕ ಕೊಡಗಿನ ತಿತಿಮತಿಯತ್ತ ಬರುತ್ತಿದೆ‌. ಹೀಗೆ, ಮಾಲ್ದಾರೆ ರಕ್ಷಿತಾರಣ್ಯದ ಮೂಲಕ ದುಬಾರೆ ಕ್ಯಾಂಪಿಗೆ ಬರುವ ನಿರೀಕ್ಷೆ ಸದ್ಯಕ್ಕಿದ್ದು ಪರಿಸರ ಪ್ರೇಮಿಗಳು, ಅರಣ್ಯಾಧಿಕಾರಿಗಳಲ್ಲಿ ಆನೆಯ ನಡೆ ಕುತೂಹಲ ಮೂಡಿಸಿದೆ.

ಕಾಡಿಗೆ ಬಿಟ್ಟಿದ್ದೇಕೆ?:

ಪುಂಡಾಟಿಕೆ ಮಾಡಿ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡಿದ್ದ ಹಿನ್ನೆಲೆಯಲ್ಲಿ 2016ರಲ್ಲಿ ಎರಡು ಪುಂಡಾನೆಗಳನ್ನು ಸೆರೆ ಹಿಡಿದು ಲವ-ಕುಶ ಎಂದು ಹೆಸರಿಟ್ಟು ದುಬಾರೆ ಶಿಬಿರದಲ್ಲಿ ಆರೈಕೆ ಮಾಡಲಾಗುತ್ತಿತ್ತು. ಆದರೆ, 2017ರಲ್ಲಿ ಕ್ಯಾಂಪಿನಿಂದ ತಪ್ಪಿಸಿಕೊಂಡು ಹೋಗಿದ್ದ ಕುಶ ಎರಡು ವರ್ಷ ನಾಪತ್ತೆಯಾಗಿತ್ತು. ನಂತರ ಶಿಬಿರದ ಅಧಿಕಾರಿಗಳ ನೇತೃತ್ವದಲ್ಲಿ ಹಲವು ತಂಡಗಳು ನಿರಂತರ ಕಾರ್ಯಾಚರಣೆ ನಡೆಸಿ ನಾಪತ್ತೆಯಾಗಿದ್ದ ಕುಶ ಆನೆಯನ್ನು ಮರಳಿ ಶಿಬಿರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.

2020ರ ಮಾರ್ಚ್​ನಲ್ಲಿ ಮದವೇರಿದ್ದರಿಂದ ಸರಪಳಿ ಹಾಗೂ ಬೇಡಿ ತುಂಡರಿಸಿ ಕಾಡಿಗೆ ಮತ್ತೆ ಓಡಿದ್ದ ಕುಶ ಅಲ್ಲಿ ಸಿಕ್ಕಿದ್ದ 17 ಆನೆಗಳ ಗುಂಪಿನಲ್ಲಿ ಸೇರಿಕೊಂಡು, ಅಲ್ಲಿನ ಹೆಣ್ಣಾನೆಗಳೊಂದಿಗೆ ಗೆಳೆತನ ಶುರುವಿಟ್ಟಿದ್ದ. ಕಾಡಿನಲ್ಲಿ ತನ್ನ ಸಂಗಾತಿ ಜತೆ ಖುಷಿಯಾಗಿದ್ದ. ಈ ಆನೆಯನ್ನು ಮತ್ತೆ ದುಬಾರೆ ಶಿಬಿರಕ್ಕೆ ಕರೆತರಲು ಇಲಾಖೆ ಸತತ ಪ್ರಯತ್ನ ನಡೆಸಿತ್ತು.

ಕೊನೆಗೆ, ಈ ವರ್ಷದ ಮಾರ್ಚ್​ನಲ್ಲಿ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಸಂಗಾತಿಯಿಂದ ಬೇರ್ಪಡಿಸಿ, ಸೆರೆ ಹಿಡಿದು ಮರಳಿ ಶಿಬಿರಕ್ಕೆ ಕರೆತರಲಾಗಿತ್ತು. ಆ ವೇಳೆ, ಕುಶನ ಚಲನವಲನಗಳು ಬದಲಾಗಿ ಚಂಚಲ ಮನಸ್ಸಿನಿಂದ ವರ್ತಿಸುತ್ತಿದ್ದ, ಕಾಲುಗಳಿಗೆ ಸರಪಳಿ ಹಾಕಿ ಕ್ರಾಲ್‌ನಲ್ಲಿ ಬಂಧಿಸಿಟ್ಟು ಮತ್ತೆ ಪಳಗಿಸುವ ಕೆಲಸಕ್ಕೆ ಇಲ್ಲಿನ ಮಾವುತರು ಇಳಿದಿದ್ದರು.

ಅರಣ್ಯ ಇಲಾಖೆಯ ಈ ಕ್ರಮಕ್ಕೆ ಪ್ರಾಣಿಪ್ರಿಯರು ಆಕ್ರೋಶ ಹೊರಹಾಕಿದ್ದರು. ಪರಿಸರ ಹೋರಾಟಗಾರ್ತಿ ಮನೇಕಾ ಗಾಂಧಿಗೂ ವಿಷಯ ತಿಳಿದಾಗ ಅವರು ಕೂಡ, ರಾಜ್ಯ ಸರಕಾರಕ್ಕೆ ಪತ್ರ ಬರೆದು ಆನೆ ಜತೆ ಕೆಟ್ಟದಾಗಿ ವರ್ತಿಸದೆ ಮರಳಿ ಕಾಡಿಗೆ ಬಿಡಿ ಎಂದು ಒತ್ತಾಯಿಸಿದ್ದರು. ಹೀಗಾಗಿ ತೀವ್ರ ಒತ್ತಡ ಹೆಚ್ಚಾದ ಕಾರಣಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅಧಿಕಾರಿಗಳ ಸಭೆ ನಡೆಸಿ, 2020 ಮಾರ್ಚ್‌ನಲ್ಲಿ ಕುಶನಿಗೆ ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಿಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.