ETV Bharat / state

ಚಾಮರಾಜನಗರ: ಕಾಡಾನೆ ದಾಳಿಗೆ ಓರ್ವ ಬಲಿ

author img

By

Published : Aug 20, 2023, 1:05 PM IST

Elephant attack
ಕಾಡಾನೆ ದಾಳಿ

Elephant attack in Chamarajanagar: ಇಬ್ಬರು ಸ್ನೇಹಿತರು ಮಹದೇಶ್ವರ ಬೆಟ್ಟಕ್ಕೆ ಬಂದು ಪೂಜೆ ಮುಗಿಸಿ ನಾಗಮಲೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಚಾಮರಾಜನಗರ: ದೇವಾಲಯಕ್ಕೆ ತೆರಳುತ್ತಿದ್ದಾಗ ಕಾಡಾನೆ ದಾಳಿ ಮಾಡಿದ್ದು, ಓರ್ವ ವ್ಯಕ್ತಿ ಮೃತಪಟ್ಟು, ಇನ್ನೊಬ್ಬ ಪಾರಾಗಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಅರಣ್ಯದಲ್ಲಿ ಶನಿವಾರ ನಡೆದಿದೆ. ಬೆಂಗಳೂರು ಮೂಲದ ಗೋವಿಂದರಾಜು ಮೃತರು. ಇವರ ಗೆಳೆಯ ಲೋಕೇಶ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮಹದೇಶ್ವರ ಬೆಟ್ಟಕ್ಕೆ ಬಂದು ಮಹದೇಶ್ವರ ಸನ್ನಿಧಿಯಲ್ಲಿ ಪೂಜೆ ಮುಗಿಸಿದ ಬಳಿಕ ನಾಗಮಲೆಗೆ ರಾತ್ರಿ ವೇಳೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಇಂಡಿಗನತ್ತ ಹತ್ತಿರವಿರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಸಮೀಪ ಆನೆ ದಾಳಿ ಮಾಡಿದೆ. ಗೋವಿಂದರಾಜು ಆನೆ ತುಳಿಕ್ಕೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ.‌ ಲೋಕೇಶ್ ಸ್ಥಳದಿಂದ ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ. ಮಲೆಮಹದೇಶ್ವರ ಬೆಟ್ಟ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಾತ್ರಿ ವೇಳೆ ನಾಗಮಲೆ ತೆರಳಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಆನೆಗಳ ಸಂಖ್ಯೆ ಏರಿಕೆ: ಹುಲಿ ಗಣತಿಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನ ಪಡೆದುಕೊಂಡ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಆನೆಗಳ ಸಂಖ್ಯೆಯಲ್ಲೂ ಮೊದಲ ಸ್ಥಾನ ಪಡೆದಿದೆ. ಬಂಡೀಪುರ ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳಿರುವ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ 1,116 ಆನೆಗಳಿವೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 484 ಆನೆಗಳಿದ್ದು, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 557 ಆನೆಗಳಿವೆ. ಕಾವೇರಿ ವನ್ಯಜೀವಿ ಧಾಮದಲ್ಲಿ 236 ಆನೆಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ರಾಜ್ಯದಲ್ಲಿ ಒಟ್ಟು 6,395 ಆನೆಗಳಿವೆ ಎಂದು ವರದಿಯಾಗಿದೆ.

ಕಾಡಾನೆ ತುಳಿತಕ್ಕೆ ಮಹಿಳೆ ಬಲಿ: ಮಹಿಳೆಯೊಬ್ಬರು ಕಾಡಾನೆ ತುಳಿತದಿಂದ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳಗೊಡು ಸಮೀಪದ ವಡೂರು ಗ್ರಾಮದಲ್ಲಿ ನಡೆದಿದೆ. ಕವಿತಾ (35) ಮೃತರು. ಬೆಳಗ್ಗೆ ಮನೆಯ ಹಿಂಭಾಗದ ಕಾಫಿತೋಟಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಆನೆಯು ಮಹಿಳೆಯ ಹೊಟ್ಟೆಯ ಭಾಗಕ್ಕೆ ಕಾಲಿಟ್ಟಿದ್ದು, ಸಾವು-ಬದುಕಿನಲ್ಲಿದ್ದ ಆಕೆಯನ್ನು ತಕ್ಷಣವೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾಳೆ.

ಕವಿತಾ ಮೂಲತಃ ಬೇಲೂರು ತಾಲೂಕಿನ ನಾರ್ವೆ ಗ್ರಾಮದವರು. ಇತ್ತೀಚೆಗೆ ಸಂಬಂಧಿಕರಾದ ಜಗಯ್ಯ ಎಂಬವರ ಮನೆಯಲ್ಲಿ ವಾಸವಿದ್ದ ತನ್ನ ತಾಯಿಯನ್ನು ನೋಡಲು ಬಂದಿದ್ದರು. ಕಳೆದ ವರ್ಷ ಪತಿಯನ್ನು ಕಳೆದುಕೊಂಡಿದ್ದರು. ಎರಡು ಮಕ್ಕಳ ಜವಾಬ್ದಾರಿ ಹೊತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಕಲೇಶಪುರ ತಾಲೂಕಿನಲ್ಲಿ 60 ರಿಂದ 70 ಕಾಡಾನೆಗಳಿದ್ದು, ಆಹಾರ ಹುಡುಕಿಕೊಂಡು ಕಾಫಿ ತೋಟಗಳಿಗೆ ಬರುತ್ತಿವೆ. ಕಾಡಾನೆಗಳನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಅಲ್ಲದೇ ಆನೆ ಕಾರಿಡಾರ್ ಮಾಡಬೇಕೆಂಬ ಕೂಗು ದಶಕಗಳಿಂದ ಕೇಳಿ ಬರುತ್ತಿದ್ದರೂ ಯಾವುದೇ ಶಾಶ್ವತ ಪರಿಹಾರವನ್ನು ಸರ್ಕಾರ ಒದಗಿಸಿಲ್ಲ ಎಂದು ಕೆಲವು ಸಂಘಟನೆಗಳು ಹಾಸನದಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.

ಇದನ್ನೂಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ... ಪ್ರತಿಭಟನಾಕಾರರ ಬಂಧನ... ಶಾಸಕ ಸಿಮೆಂಟ್ ಮಂಜು ಖಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.