ETV Bharat / state

ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ: ಮಹಿಳೆಯರಿಗೆ ಅರಿಶಿಣ, ಕುಂಕುಮ ವಿತರಣೆ

author img

By ETV Bharat Karnataka Team

Published : Aug 25, 2023, 7:03 PM IST

Updated : Aug 25, 2023, 7:52 PM IST

varamahalakshmi
ವರಮಹಾಲಕ್ಷ್ಮೀ ಹಬ್ಬ

Varamahalakshmi Pooja: ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಿಳಾ ಭಕ್ತರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ‌ ವಿತರಿಸಲಾಯಿತು.

ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ: ಮಹಿಳೆಯರಿಗೆ ಅರಿಶಿಣ, ಕುಂಕುಮ ವಿತರಣೆ

ಬೆಳಗಾವಿ: ಇಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಮಹಿಳಾ ಭಕ್ತರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ‌ ವಿತರಿಸಲಾಯಿತು. ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸರ್ಕಾರದ ಆದೇಶದಂತೆ ದೇವಸ್ಥಾನದಲ್ಲಿ ಶಾಸಕ ವಿಶ್ವಾಸ ವೈದ್ಯ ಅರಿಶಿಣ, ಕುಂಕುಮ, ಹಸಿರು ಬಳೆ‌ ವಿತರಿಸಿದರು.

ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಕಾರ್ಯನಿರ್ವಾಹಕ ಅಧಿಕಾರಿ ಎಸ್​ಪಿಬಿ‌ ಮಹೇಶ ಸೇರಿ ಮತ್ತಿತರರು ಉಪಸ್ಥಿತರಿದ್ದರು. ವಿಶೇಷ ಉಡುಗೊರೆ ಪಡೆದುಕೊಂಡ ಭಕ್ತೆಯರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಶಕ್ತಿ ಯೋಜನೆ ಮೂಲಕ ಉಚಿತ ಬಸ್ ಪ್ರಯಾಣ ಮಾಡಿದ್ದ ಸರ್ಕಾರ ಈಗ ಉಡಿ ವಸ್ತುಗಳನ್ನು ವಿತರಿಸಿದ್ದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

varamahalakshmi
ಮಹಿಳೆಯರಿಗೆ ಅರಿಶಿಣ-ಕುಂಕುಮ ವಿತರಣೆ

ಯಲ್ಲಮ್ಮ ದೇವಿಗೆ ವಿಶೇಷ ಪೂಜೆ: ವರಮಹಾಲಕ್ಷ್ಮೀ ಹಬ್ಬದ ಸಲುವಾಗಿ ಸವದತ್ತಿ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಯಲ್ಲಮ್ಮನ ಸನ್ನಿಧಿಗೆ ಭಕ್ತರ ದಂಡೇ ಹರಿದು ಬಂದಿತ್ತು.

ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್​ಪಿಬಿ‌ ಮಹೇಶ ಮಾತನಾಡಿ, "ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ‌, ಹೂವು ತುಂಬಾ ಪವಿತ್ರ ಮತ್ತು ಶ್ರೇಷ್ಠವಾದ ವಸ್ತುಗಳು. ಹಾಗಾಗಿ ರಾಜ್ಯ ಸರ್ಕಾರದ ಆದೇಶದಂತೆ ಇಂದು ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಈ ಎಲ್ಲ ವಸ್ತುಗಳನ್ನು ವಿತರಿಸುತ್ತಿದ್ದೇವೆ" ಎಂದರು.

varamahalakshmi
ವರಮಹಾಲಕ್ಷ್ಮೀ ಹಬ್ಬ

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ: ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ; ಕೋಲಾರದಲ್ಲಿ ಹೂಗಳಿಗೆ ಭಾರಿ ಡಿಮ್ಯಾಂಡ್‌

ಬೆಳಗಾವಿ ವರದಿ: ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಯಿತು. ನಗರದ ಕಿಲ್ಲಾ ದುರ್ಗಾದೇವಿ ಮಂದಿರ, ಬಸವಣಗಲ್ಲಿ ಮತ್ತು ಚನ್ನಮ್ಮ ನಗರದಲ್ಲಿನ ಮಹಾಲಕ್ಷ್ಮೀ ದೇವಿ ಮಂದಿರಗಳು ಸೇರಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇನ್ನು ಮನೆಯಲ್ಲಿ ಮಹಾಲಕ್ಷ್ಮೀ ದೇವಿ ಪೂಜೆ ಕೈಗೊಂಡಿದ್ದ ಮಹಿಳಾಮಣಿಗಳು ದೇವಸ್ಥಾನಕ್ಕೂ ಆಗಮಿಸಿ ದೇವಿಯ ದರ್ಶನ ಪಡೆದುಕೊಂಡರು.

ಹುಬ್ಬಳ್ಳಿ ವರದಿ: ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಶಿರಗುಪ್ಪಿ ಹಾಗೂ ಛಬ್ಬಿ ವಲಯದಲ್ಲಿನ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿವಿಧ ದೇವಾಲಯಗಳಿಗೆ ಬರುವ ಮಹಿಳೆಯರಿಗೆ ಅರಿಶಿಣ, ಕುಂಕುಮ, ಹೂ-ಹಣ್ಣು ಹಾಗೂ ಹಸಿರು ಬಳೆಗಳನ್ನು ಸರಕಾರದ ಲಾಂಛನದೊಂದಿಗೆ ದೇವಾಲಯದ ಹೆಸರನ್ನು ಮುದ್ರಿಸಿ, ಲಕೋಟೆಯನ್ನು ತಯಾರಿಸಿ ಮಹಿಳೆಯರಿಗೆ ನೀಡಲಾಯಿತು.

ಬೆಳಗಲಿ ಗ್ರಾಮದ ಆತ್ಮಾನಂದ ಮಠ, ಶೆರೆವಾಡ ಗ್ರಾಮದ ಗ್ರಾಮದೇವಿ ದೇವಸ್ಥಾನ, ಅಂಚಟಗೇರಿ ಗ್ರಾಮದ ದ್ಯಾಮವ್ವ ದೇವಸ್ಥಾನ, ರಾಯನಾಳ ಗ್ರಾಮದ ದ್ಯಾಮವ್ವ ದುರ್ಗಮ್ಮ ದೇವಸ್ಥಾನ ಹಾಗೂ ಕೋಳಿವಾಡದ ಮಹಾಮಾಯಿ ದೇವಸ್ಥಾನ ಸೇರಿದಂತೆ ಇನ್ನಿತರ ಗ್ರಾಮಗಳ ದೇವಸ್ಥಾನಗಳಲ್ಲಿಯೂ ಕಾರ್ಯಕ್ರಮ ಜರುಗಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಧಾರವಾಡದಲ್ಲಿ ವರಮಹಾಲಕ್ಷ್ಮಿ ಸಂಭ್ರಮ: ಮಹಿಳೆಯರಿಗೆ ಅರಿಶಿನ, ಕುಂಕುಮ, ಬಾಗಿನ ವಿತರಣೆ

Last Updated :Aug 25, 2023, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.