ETV Bharat / state

ಪೌರ ಕಾರ್ಮಿಕರ ನಿವಾಸ ನಿರ್ಮಾಣದಲ್ಲಿ ಅಕ್ರಮವೆಸಗಿದ್ದರೆ ಗುತ್ತಿಗೆದಾರರ ವಿರುದ್ದ ಕ್ರಮ: ಎಂಟಿಬಿ

author img

By

Published : Dec 27, 2022, 10:48 PM IST

residence-of-civic-workers-action-will-be-taken-against-the-contractor-mtb-nagaraj
ಪೌರ ಕಾರ್ಮಿಕರ ನಿವಾಸ ನಿರ್ಮಾಣದಲ್ಲಿ ಅಕ್ರಮವೆಸಗಿದ್ದರೆ ಗುತ್ತಿಗೆದಾರರ ವಿರುದ್ದ ಕ್ರಮ: ಎಂಟಿಬಿ ನಾಗರಾಜ್..!

ವಿಧಾನ ಪರಿಷತ್​ ಪ್ರಶ್ನೋತ್ತರ ಕಲಾಪದಲ್ಲಿ ಪೌರ ಕಾರ್ಮಿಕರಿಗಾಗಿ ರಾಜ್ಯದಲ್ಲಿ ಮನೆ ನಿರ್ಮಾಣ ವಿಚಾರ ಚರ್ಚೆಗೆ ಬಂತು.

ಬೆಳಗಾವಿ: ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಕೇಳಿದ ನಗರಾಭಿವೃದ್ಧಿ ಇಲಾಖೆಯ ಪುರಸಭೆಯಿಂದ ಟೆಂಡರ್ ಕಾಮಗಾರಿ ಲೋಪದೋಷದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಅದು ಪುರಸಭೆಯಲ್ಲ ಹಾಸನ ನಗರಸಭೆ, ನಗರೋತ್ಥಾನ ಅನುದಾನ, ವಿಶೇಷ ಅನುದಾನದ ಅಡಿಯಲ್ಲಿ ವಾರ್ಡ್ ವಾರು ಟೆಂಡರ್ ಮೂಲಕ ಆರ್ಥಿಕ ಇಲಾಖೆ ಮಾನದಂಡದಂತೆ ಟೆಂಡರ್ ಕರೆಯಲಾಗಿದೆ. ಆದರೆ ಸದಸ್ಯರು ಲೋಪದೋಷ ಆರೋಪ ಮಾಡಿದ್ದಾರೆ, ನಮ್ಮ ಇಲಾಖೆಯಲ್ಲಿ ಆ ತರಹದ ಲೋಪದೋಷ ಕಂಡುಬಂದಿಲ್ಲ. ನಿಖರವಾಗಿ ಲೋಪದೋಷ, ಯಾವ ವಾರ್ಡ್ ಎನ್ನುವುದು ಸೇರಿ ಇತರೆ ಮಾಹಿತಿ ಕೊಡಿ ನಾನು ಕಾನೂನು ಬದ್ದ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

ಅಮೃತ್​ ಯೋಜನೆಯಡಿ 29 ಕೋಟಿ ರೂ ಕೊಡಲಾಗಿದೆ. ಮೂರು ವರ್ಷದ ಯೋಜನೆಗಳ ವಿವರ ನೀಡಲಾಗಿದೆ. ಪ್ರಥಮ ದರ್ಜೆ ಗುತ್ತಿಗೆದಾರರಿಗೆ ಗುತ್ತಿಗೆ ಕೊಡಲಾಗಿದೆ. ನಿಯಮಾವಳಿಯಂತೆಯೇ ವರ್ಕ್ ಆರ್ಡರ್ ಕೊಡಲಾಗಿದೆ. ಸದಸ್ಯರು ಲೋಪದೋಷವಿದೆ, ಗುಣಮಟ್ಟ ಕಡಿಮೆ ಎಂದಿದ್ದಾರೆ. ಯಾವ ಅನುದಾನ ಯಾವ ವಾರ್ಡ್​ನಲ್ಲಿ ಲೋಪ, ಅಕ್ರಮ ಆಗಿದೆ ಎಂದು ತಿಳಿಸಿದರೆ ಅಕ್ರಮವೆಸಗಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದರು.

29 ಕೋಟಿ ರೂ ಅನುದಾನ ಒಂದೇ ಪ್ಯಾಕೇಜ್ ಎಂದರೆ ಸಂಪುಟದಲ್ಲಿ ಒಪ್ಪಿಗೆ ಪಡೆಯಬೇಕು, ಪಡೆದಿದ್ದಾರಾ? ಎಂದು ಪ್ರಶ್ನಿಸಿ ಟೆಂಡರ್ ರದ್ದುಪಡಿಸಿ, ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ನಗರೋತ್ಥಾನ ಮೂರನೇ ಹಂತದ ನಿಯಮ ಬೇರೆ, ನಾಲ್ಕನೇ ಹಂತದಲ್ಲಿ ಹಾಸನ ನಗರಸಭೆಯಲ್ಲಿ 40 ಕೋಟಿ ಹಣ ಕೊಡಲಾಗಿದೆ. ವಿಶೇಷ ಅನುದಾನದಲ್ಲಿಯೂ ಹೆಚ್ಚಿನ ಅನುದಾನ ಕೊಡಲಾಗಿದೆ.

ಇದಕ್ಕೆ ಹೊಸದಾಗಿ ನಿಯಮ ಮಾಡಲಾಗಿದೆ. ಜಿಲ್ಲಾ ಸಮಿತಿ, ರಾಜ್ಯ ಸಮಿತಿ ರಚಿಸಲಾಗಿದೆ. ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕ್ರಿಯಾಯೋಜನೆ ಅನುಮೋದನೆ ಆಗಬೇಕು. ಅದರಂತೆಯೇ ಎಲ್ಲವೂ ಆಗಿದೆ. ತಪ್ಪುಗಳಾಗಿದ್ದಲ್ಲಿ ನಿರ್ದಿಷ್ಟವಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ವಸತಿ ಯೋಜನೆ ಅಕ್ರಮಕ್ಕೆ ಕ್ರಮ: ಪೌರ ಕಾರ್ಮಿಕರಿಗಾಗಿ ನಿರ್ಮಿಸುತ್ತಿರುವ ನಿವಾಸಗಳಲ್ಲಿ ಕಳಪೆ ಕಾಮಗಾರಿ ಕಂಡುಬಂದಲ್ಲಿ ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರುದ್ರೇಗೌಡ ಪೌರಕಾರ್ಮಿಕರಿಗಾಗಿ ನಿರ್ಮಿಸುತ್ತಿರುವ ಮನೆಗಳ ಕಳಪೆ ಕಾಮಗಾರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೌರಕಾರ್ಮಿಕರಿಗಾಗಿ ರಾಜ್ಯದಲ್ಲಿ 5188 ಮನೆ ನಿರ್ಮಾಣ ಮಾಡಲಾಗುತ್ತಿದೆ. ಎರಡು ಹಂತದಲ್ಲಿ ಮನೆಗಳು ನಿರ್ಮಾಣ ಮಾಡಲಾಗುತ್ತಿದೆ.

ಸ್ವಂತ ನಿವೇಶನ ಇರುವವರಿಗೆ 7 ಲಕ್ಷ ಅನುದಾನ ಕೊಡಲಾಗುತ್ತಿದೆ. ಜಿ+2 ಮನೆಗಳ ನಿರ್ಮಾಣಕ್ಕೆ ಅನುಮತಿ ಕೊಡಲಾಗಿದೆ. 168 ಮನೆ ಶಿವಮೊಗ್ಗದಲ್ಲಿ ನಿರ್ಮಿಸುತ್ತಿದ್ದು ಅಲ್ಲಿ ಲೋಪದೋಷದ ಆರೋಪ ಕಂಡುಬಂದಿದೆ ಎಂದು ಆರೋಪ ಮಾಡಲಾಗಿದೆ. ಕೂಡಲೇ ಪರಿಶೀಲನೆ ನಡೆಸಿ ಕಳಪೆ ಕಾಮಗಾರಿ ನಡೆದಿರುವುದು ಕಂಡುಬಂದಲ್ಲಿ ಕೂಡಲೇ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಇಡಗುಂಡಿ ಪಪಂ ಅವ್ಯವಹಾರ,ಅಧಿಕಾರಿ ಅಮಾನತು: ವಿಜಯಪುರದ ಇಡಗುಂಡಿ ಪಟ್ಟಣ ಪಂಚಾಯತ್​​ನಲ್ಲಿ ಅವ್ಯವಹಾರ ನಡೆದ ಆರೋಪ ಸಾಬೀತಾಗಿದ್ದು ಕೂಡಲೇ ತಪ್ಪಿತಸ್ಥ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಸುನೀಲ್ ಗೌಡ ಪರ ಸಚೇತಕ ಪ್ರಕಾಶ್ ರಾಥೋಡ್ ವಿಜಯಪುರ ಜಿಲ್ಲೆ ನಿಡಗುಂಡಿ ಪಟ್ಟಣ ಪಂಚಾಯತ್​ ನಲ್ಲಿಯ ಅವ್ಯವಹಾರಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 12ನೇ ಹಣಕಾಸು ವಾರ್ಡ್ ನಂಬರ್ 2ರಲ್ಲಿ ಕ್ರಿಯಾಯೋಜನೆ ಬಿಟ್ಟು ಬೇರೆ ಕಡೆ ಕೆಲಸ ಮಾಡಿದ್ದು ಸಾಬೀತಾಗಿದೆ.

ಈ ಬಗ್ಗೆ ಡಿಸಿ ತನಿಖೆ ಮಾಡಿದ್ದಾರೆ. ನಂತರ ನಿವೃತ್ತ ನ್ಯಾಯಾಧೀಶರ ತನಿಖೆಗೂ ಕೊಟ್ಟಿದ್ದೇವೆ. ನಾವು ಸಂಬಂಧಪಟ್ಟವರಿಗೆ ನೋಟಿಸ್ ನೀಡಿದ್ದೇವೆ. ಕ್ರಿಯಾ ಯೋಜನೆ ಆಗಿದ್ದ ಕಡೆ ಬಿಟ್ಟು ಬೇರೆ ಕಡೆ ರಸ್ತೆ ಕಾಮಗಾರಿ ಮಾಡಿದ ಕುರಿತು ನೋಟಿಸ್ ನೀಡಿದ್ದು, ಕ್ರಮ ಕೈಗೊಳ್ಳಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಈ ವೇಳೆ ಅಧಿಕಾರಿಗಳ ಅಮಾನತಿಗೆ ಸದಸ್ಯರು ಪಟ್ಟುಹಿಡಿದಿದ್ದಕ್ಕೆ ಮಣಿದ ಸಚಿವರು, ಕ್ರಿಯಾಯೋಜನೆ ಒಪ್ಪಿದ್ದ ಯೋಜನೆ ಬಿಟ್ಟು ಬೇರೆಯದ್ದನ್ನು ಮಾಡಿದ ಪ್ರಕರಣ ಸಂಬಂಧ ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಸದನ ಎಷ್ಟು ದಿನ ನಡೆಯುತ್ತೆ ಅನ್ನೋ ಕಾಮನ್ ಸೆನ್ಸ್ ಇಲ್ಲವೇ: ಅಧಿಕಾರಿಗಳ ವಿರುದ್ಧ ಸಭಾಪತಿ ಗರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.